ರಾಜಸ್ಥಾನದ ಕೋಟಾ ಲೋಕಸಭಾ ಕ್ಷೇತ್ರವು ಹಳೆಯ ಸ್ನೇಹಿತರ ನಡುವಣ ಹೋರಾಟದಿಂದ ಗಮನ ಸೆಳೆದಿದೆ. ಭಾರತೀಯ ಜನತಾ ಪಕ್ಷಅಭ್ಯರ್ಥಿ, ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರ ವಿರುದ್ದ ಕಾಂಗ್ರೆಸ್ ಪಕ್ಷವು ಪ್ರಹ್ಲಾದ್ ಗುಂಜಲ್ ಅವರನ್ನು ಕಣಕ್ಕಿಳಿಸಿದೆ.
ಮಾಜಿ ಮುಖ್ಯಮಂತ್ರಿ ವಸುಂಧರಾ ರಾಜೇ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ಗುಂಜಲ್ ಕಳೆದ ಗುರುವಾರ ಮಾಜಿ ಮುಖ್ಯಮಂತ್ರಿ ಅಶೋಕ್ ಗೆಹಲೋತ್ ಸಮ್ಮುಖದಲ್ಲಿ ಕಾಂಗ್ರೆಸ್ ಸೇರಿದ್ದರು. ಬಿಜೆಪಿ ತೊರೆದು ‘ಕೈ’ ಹಿಡಿಯುವ ವೇಳೆ ಓಂ ಬಿರ್ಲಾ ವಿರುದ್ಧ ಟೀಕಾಪ್ರಹಾರ ಮಾಡಿದ್ದರು. ‘ಕೋಟಾದಲ್ಲಿ ಬಿಜೆಪಿಯು ಒಬ್ಬ ವ್ಯಕ್ತಿ ಮತ್ತು ಒಂದು ಕುಟುಂಬದ ಹಿಡಿತದಲ್ಲಿದೆ’ ಎಂದು ಆರೋಪಿಸಿದ್ದರು.
ಗುಂಜಲ್ ಅವರು ಕೋಟಾ ಉತ್ತರ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿಯಿಂದ ಎರಡು ಸಲ ಆಯ್ಕೆಯಾಗಿದ್ದರು. 2014 ಮತ್ತು 2019 ರಲ್ಲಿ ಇಲ್ಲಿ ಗೆದ್ದಿದ್ದ ಬಿರ್ಲಾ ಅವರು ‘ಹ್ಯಾಟ್ರಿಕ್’ ಗೆಲುವಿನ ನಿರೀಕ್ಷೆಯಲ್ಲಿದ್ದಾರೆ. ಕಳೆದ ಸಲ ಅವರು ಕಾಂಗ್ರೆಸ್ನ ರಾಮನಾರಾಯಣ ಮೀಲಾ ಎದುರು ಗೆದ್ದಿದ್ದರು. ಕಾಂಗ್ರೆಸ್ ಪಕ್ಷವು ಇಲ್ಲಿ 2009 ರಲ್ಲಿ ಕೊನೆಯದಾಗಿ ಗೆಲುವು ಸಾಧಿಸಿತ್ತು. ಈ ಬಾರಿ ಗುಂಜಲ್ ಅವರನ್ನು ಕಣಕ್ಕಿಳಿಸಿ ಬಿಜೆಪಿಗೆ ಪ್ರಬಲ ಪೈಪೋಟಿ ನೀಡಲು ಸಜ್ಜಾಗಿದೆ.