ಗಢವಾಲ್ ಕ್ಷೇತ್ರದಲ್ಲಿ ಅನಿಲ್ ಬಲೂನಿ ಅವರನ್ನು ಮಣಿಸಲು ಕಾಂಗ್ರೆಸ್, ಪಕ್ಷದ ರಾಜ್ಯ ಘಟಕದ ಮಾಜಿ ಅಧ್ಯಕ್ಷ ಗಣೇಶ್ ಗೋದಿಯಾಲ್ ಅವರನ್ನು ಕಣಕ್ಕಿಳಿಸಿದೆ. ಪಕ್ಷ ಸಂಘಟನೆಯ ಮೂಲಕ ಕ್ಷೇತ್ರದ ಜನರಿಗೆ ಚಿರಪರಿಚಿತರಾಗಿರುವ ಇವರು ಸ್ಥಳೀಯವಾಗಿಯೂ ಪ್ರಭಾವಿ ಮುಖಂಡರಾಗಿದ್ದಾರೆ. ಈ ಬಾರಿಯಾದರೂ ಈ ಕ್ಷೇತ್ರವನ್ನು ಮತ್ತೆ ಪಕ್ಷದ ತೆಕ್ಕೆಗೆ ಪಡೆದುಕೊಳ್ಳಬೇಕೆಂದು ಕಾಂಗ್ರೆಸ್ ಮುಖಂಡರು ಅವಿರತ ಶ್ರಮಿಸುತ್ತಿದ್ದಾರೆ. ಗಢವಾಲ್ ಪ್ರದೇಶದ ಹಲವು ಮಂದಿ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದು, ಈ ಕಾರಣಕ್ಕೆ ಗಣೇಶ್ ಅವರು ‘ಅಗ್ನಿವೀರ್’ ಯೋಜನೆಯನ್ನು ಪ್ರಮುಖ ಚುನಾವಣಾ ವಿಚಾರವಾಗಿ ಬಳಸಿಕೊಳ್ಳುತ್ತಿದ್ದಾರೆ. ಜೊತೆಗೆ ಕಾರ್ಮಿಕರ ವಲಸೆ, ನಿರುದ್ಯೋಗ ವಿಷಯಗಳನ್ನು ಮುನ್ನೆಲೆಗೆ ತರುವ ಮೂಲಕ ಕೇಂದ್ರದ ಬಿಜೆಪಿ ಸರ್ಕಾರದ ವೈಫಲ್ಯಗಳನ್ನು ಜನರ ಮುಂದಿರಿಸುತ್ತಿದ್ದಾರೆ. 2009ರ ಚುನಾವಣೆಯಲ್ಲಿ ಕಾಂಗ್ರೆಸ್ನ ಸತ್ಪಾಲ್ ಮಹಾರಾಜ್ ಅವರು ಇಲ್ಲಿಂದ ಲೋಕಸಭೆಗೆ ಆಯ್ಕೆಯಾಗಿದ್ದರು.