ಈಗ ಲೋಕಸಭಾ ಚುನಾವಣೆಯೂ ಸಮೀಪ ಬಂದಿದೆ. ಪ್ರಚಾರದ ನೆಪದಲ್ಲಿ ಮತ್ತೆ ನಮ್ಮ ಗಳಿಕೆಯೂ ಹೆಚ್ಚಾಗುತ್ತದೆ ಎಂದು ವ್ಯಾಪಾರಿಗಳು ಸಾಕಷ್ಟು ಸಂಖ್ಯೆಯಲ್ಲಿ ಚೆಂಡುಗಳನ್ನು ಖರೀದಿಸಿದ್ದಾರಂತೆ. ಹಿಂದಿನ ಚುನಾವಣೆಯಲ್ಲಿ ಕೆಆರ್ಪಿಪಿ ಮುಖಂಡರು ಮಕ್ಕಳಿಗೆ ಹಾಗೂ ಕ್ರೀಡಾಸಕ್ತರಿಗೆ ಫುಟ್ಬಾಲ್ ಉಡುಗೊರೆಯಾಗಿ ನೀಡಿ, ‘ನಮ್ಮ ಪಕ್ಷಕ್ಕೆ ಮತಗೋಲು’ ಹೊಡೆಯುವಂತೆ ಪ್ರಚಾರ ಮಾಡುತ್ತಿದ್ದರು. ಯುವಕರಿಗೆ ಪುಕ್ಕಟೆ ಆಟ, ಪಕ್ಷದ ಮುಖಂಡರಿಗೆ ಅತ್ಯಂತ ಕಡಿಮೆ ದರದಲ್ಲಿ ಜೋರು ಪ್ರಚಾರ. ಇವರಿಬ್ಬರ ನಡುವೆ ನಮಗೆ ಭರ್ಜರಿ ಲಾಭವಾದರೆ ಸಾಕು ಎಂದು ವ್ಯಾಪಾರಿಗಳು ಈ ಬಾರಿಯೂ ಬೆಟ್ಟದಷ್ಟು ನಿರೀಕ್ಷೆ ಇಟ್ಟುಕೊಂಡಿದ್ದರಂತೆ.