ಪಟ್ನಾ: ಲೋಕಸಭೆ ಚುನಾವಣೆಯಲ್ಲಿ ಎನ್ಡಿಎ ಅಧಿಕೃತ ಅಭ್ಯರ್ಥಿ ವಿರುದ್ಧ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದಕ್ಕಾಗಿ ಭೋಜ್ಪುರಿ ಗಾಯಕ ಪವನ್ ಸಿಂಗ್ ಅವರನ್ನು ಬಿಜೆಪಿ ಇಂದು (ಬುಧವಾರ) ಉಚ್ಚಾಟಿಸಿದೆ.
ಬಿಜೆಪಿ ಸದಸ್ಯರಾದ ಪವನ್ ಸಿಂಗ್ ಅವರಿಗೆ ಪಕ್ಷವು ಮೊದಲ ಪಟ್ಟಿಯಲ್ಲೇ ಪಶ್ಚಿಮ ಬಂಗಾಳದ ಅಸನ್ಸೋಲ್ ಕ್ಷೇತ್ರದಿಂದ ಟಿಕೆಟ್ ಘೋಷಿಸಿತ್ತು. ಆದರೆ, ಪವನ್ ಸಿಂಗ್ ಸ್ಪರ್ಧಿಸಲು ನಿರಾಕರಿಸಿದ್ದರು. ಆದರೆ, ನಂತರ ಪವನ್ ಸಿಂಗ್ ಕಾರಾಕಾಟ್ನಿಂದ ಪಕ್ಷೇತರ ಅಭ್ಯರ್ಥಿಯಾಗಿ ಮೇ 9ರಂದು ನಾಮಪತ್ರ ಸಲ್ಲಿಸಿದ್ದರು
ಕಾರಾಕಾಟ್ ಕ್ಷೇತ್ರದ ಎನ್ಡಿಎ ಅಭ್ಯರ್ಥಿಯಾಗಿ ರಾಷ್ಟ್ರೀಯ ಲೋಕ ಮೋರ್ಚಾ ಅಧ್ಯಕ್ಷ ಉಪೇಂದ್ರ ಕುಶ್ವಾಹ ನಾಮಪತ್ರ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ಎನ್ಡಿಎ ಅಭ್ಯರ್ಥಿ ವಿರುದ್ಧ ಸ್ಪರ್ಧಿಸದಂತೆ ಪವನ್ ಸಿಂಗ್ ಅವರಿಗೆ ಬಿಜೆಪಿ ಹಿರಿಯ ಮುಖಂಡರು ಸೂಚಿಸಿದ್ದರು. ಆದರೆ, ಇದಕ್ಕೆ ತಲೆಕೆಡಿಸಿಕೊಳ್ಳದ ಸಿಂಗ್ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದರು. ವಿಶೇಷ ಎಂದರೆ, ಪವನ್ ಸಿಂಗ್ ಅವರ ತಾಯಿ ಪ್ರತಿಮಾ ಕೂಡ ಇದೇ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು.