ಶಿವಮೊಗ್ಗ: ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಅವರು ಪ್ರಧಾನಿ ನರೇಂದ್ರ ಮೋದಿ ಅವರ ಪೋಟೋ ಬಳಕೆ ಮಾಡುತ್ತಿರುವ ವಿರುದ್ದ ಪಕ್ಷದಿಂದ ಚುನಾವಣಾ ಆಯೋಗಕ್ಕೆ ದೂರು ನೀಡಲಾಗಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.
ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ನರೇಂದ್ರ ಮೋದಿ ಅವರ ಪೋಟೋ ಬಳಕೆ ನಮಗೆ (ಬಿಜೆಪಿ) ಸಂವಿಧಾನದ ಚೌಕಟ್ಟಿನಲ್ಲಿರುವ ಅವಕಾಶ. ಹೀಗಾಗಿ ಈಶ್ವರಪ್ಪ ಅವರ ಧೋರಣೆಯನ್ನು ಪಕ್ಷದ ವತಿಯಿಂದ ಚುನಾವಣಾ ಆಯೋಗದ ಮುಂದೆ ಪ್ರಶ್ನೆ ಮಾಡಲಾಗಿದೆ. ಏನಾಗುತ್ತದೆ ನೋಡೋಣ' ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
ಬಿಜೆಪಿಗೆ ಎಚ್.ಡಿ. ದೇವೇಗೌಡ ಅವರಂತಹ ದೊಡ್ಡ ನಾಯಕರ ಆಶೀರ್ವಾದ ಸಿಕ್ಕಿದೆ. ಇದರಿಂದ ನಮ್ಮ ಸಂಘಟನೆಗೂ ಶಕ್ತಿ ಬಂದಿದೆ. ನಮ್ಮ ಯೋಚನೆ, ಜೆಡಿಎಸ್ ನವರ ಯೋಚನೆ ಒಂದೇ ಇದೆ. ಹೀಗಾಗಿ ಈ ಬಾರಿ ಮತದಾರರಿಂದಲೂ ಒಳ್ಳೆಯ ಆಶೀರ್ವಾದ ಸಿಗಲಿದೆ. ಏಪ್ರಿಲ್ 18 ರಂದು ನಾಮಪತ್ರ ಸಲ್ಲಿಸುತ್ತಿದ್ದೇನೆ. ಈ ವೇಳೆ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಸಹ ಇರಲಿದ್ದಾರೆ ಎಂದರು.
ಶಿವಮೊಗ್ಗ ಕ್ಷೇತ್ರದಲ್ಲಿ ನನ್ನ ಪರ ಅಭೂತಪೂರ್ವವಾದ ವಾತಾವರಣ ಕಾಣುತ್ತಿದೆ. ಕಾಗಿನೆಲೆ ನಿರಂಜನಾನಂದಪುರಿ ಸ್ವಾಮೀಜಿ ಅವರನ್ನು ಭೇಟಿಯಾಗಿ ಆಶೀರ್ವಾದ ಪಡೆದಿದ್ದೇನೆ. ದಿನೇ ದಿನೇ ಪಕ್ಷದ ಪರವಾಗಿ ಶಕ್ತಿ ಹೆಚ್ಚಾಗುತ್ತಿದೆ ಎಂದರು
ಬೈಂದೂರು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲೂ ಬಿಜೆಪಿ ಕಾರ್ಯಕರ್ತರು ನನ್ನನ್ನು ಗೆಲ್ಲಿಸುವ ಸಂಕಲ್ಪ ಮಾಡಿದ್ದಾರೆ. ಈ ಬಾರಿ ರಾಘವೇಂದ್ರ ಅವರಿಗೆ 1 ಲಕ್ಷಕ್ಕೂ ಅಧಿಕ ಮತ ಕೊಡಿಸುತ್ತೇವೆ ಎಂದು ಅಲ್ಲಿನ ಮುಖಂಡರು ಹೇಳುತ್ತಿದ್ದಾರೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಕೊಲ್ಲೂರಿಗೂ ಭೇಟಿ ನೀಡಬೇಕು ಎಂಬ ಪ್ರಾರ್ಥನೆ ಅಲ್ಲಿನ ಕಾರ್ಯಕರ್ತರದ್ದಾಗಿದೆ. ಈ ಸಂದೇಶ ಪ್ರಧಾನಮಂತ್ರಿ ಕಚೇರಿಗೆ ತಲುಪಿದೆ ಎಂದರು.