ಮುಂಬೈ: ಮಹಾರಾಷ್ಟ್ರದ ಅಹಮದಾನಗರ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಮತಯಂತ್ರಗಳನ್ನು (ಇವಿಎಂ) ಇರಿಸಿದ್ದ ಕೊಠಡಿಯೊಳಗೆ ಪ್ರವೇಶಿಸಲು ವ್ಯಕ್ತಿಯೊಬ್ಬರು ಪ್ರಯತ್ನಿಸಿದ್ದಾರೆ ಎಂದು ಎನ್ಸಿಪಿ ಶರದ್ ಪವಾರ್ ಬಣದ ಅಭ್ಯರ್ಥಿ ನಿಲೇಶ್ ಲಂಕೆ ಬುಧವಾರ ಆರೋಪಿಸಿದರು.
ಇವಿಎಂ ಇರಿಸಿದ್ದ ಕೊಠಡಿಗೆ ಪ್ರವೇಶಿಸಲು ವ್ಯಕ್ತಿಯೊಬ್ಬರು ಯತ್ನಿಸುತ್ತಿರುವ ದೃಶ್ಯವಿರುವ ಸಿ.ಸಿ.ಟಿ.ವಿ. ಕ್ಯಾಮೆರಾ ದೃಶ್ಯಾವಳಿಯನ್ನು ನಿಲೇಶ್ ಅವರು ‘ಎಕ್ಸ್’ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.
‘ಮೂರು ಹಂತದ ಭದ್ರತೆಯನ್ನು ಭೇದಿಸಿ, ಕೊಠಡಿಯ ಬಳಿಗೆ ತಲುಪಿದ ವ್ಯಕ್ತಿಯು ಸಿ.ಸಿ.ಟಿ.ವಿ. ಕ್ಯಾಮೆರಾಗೆ ಹಾನಿಯೆಸಗಲು ಯತ್ನಿಸಿದ್ದು, ಕೂಡಲೇ ಕಾರ್ಯಕರ್ತರು ಮಧ್ಯಪ್ರದೇಶಿಸಿ ಆತನನ್ನು ಹಿಡಿದಿದ್ದಾರೆ’ ಎಂದು ಅವರು ವಿವರಿಸಿದ್ದಾರೆ.
‘ವ್ಯಕ್ತಿಯು ಕೊಠಡಿಯ ಸಮೀಪ ತಲುಪಿದಾಗ ಭದ್ರತಾ ಸಿಬ್ಬಂದಿ ಏನು ಮಾಡುತ್ತಿದ್ದರು’ ಎಂದೂ ಅವರು ಪ್ರಶ್ನಿಸಿದ್ದಾರೆ. ಈ ಕ್ಷೇತ್ರದಲ್ಲಿ ಬಿಜೆಪಿಯಿಂದ ಸುಜಯ್ ವಿಖೆ ಪಾಟೀಲ್ ಸ್ಪರ್ಧಿಸಿದ್ದಾರೆ.