ಗೋರಖ್ಪುರ: ಲೋಕಸಭಾ ಚುನಾವಣೆಯ ಫಲಿತಾಂಶ ಘೋಷಣೆಯಾದ ನಂತರ ಅರ್ಧ ಡಜನ್ ವಿರೋಧ ಪಕ್ಷಗಳು ನಿರ್ನಾಮವಾಗುತ್ತವೆ ಮತ್ತು ಅವುಗಳ ಅಭ್ಯರ್ಥಿಗಳು ಠೇವಣಿಯನ್ನೂ ಕಳೆದುಕೊಳ್ಳುತ್ತಾರೆ ಎಂದು ಭೋಜ್ಪುರಿ ನಟ ಹಾಗೂ ಗೋರಖ್ಪುರ ಲೋಕಸಭಾ ಕ್ಷೇತ್ರದ ಬಿಜೆಪಿ ಮುಖಂಡ ರವಿಕಿಶನ್ ಮಂಗಳವಾರ ಪ್ರತಿಪಾದಿಸಿದರು.
ಪಿಟಿಐ ಜತೆಗೆ ಸಂದರ್ಶನದಲ್ಲಿ ಮಾತನಾಡಿದ ಅವರು, ‘ಇಂಡಿಯಾ ಕೂಟವು ಅಧಿಕಾರಕ್ಕೆ ಬಂದರೆ, ದೇಶವು ಷರಿಯತ್ ಅನ್ವಯ ನಡೆಯುತ್ತದೆ. ಬಿಜೆಪಿ ಅಧಿಕಾರಕ್ಕೆ ಬಂದರೆ ಸಂವಿಧಾನ ಬದಲಿಸುವುದಿಲ್ಲ ಎಂದು ನಾನು ಭರವಸೆ ನೀಡುತ್ತೇನೆ’ ಎಂದು ಹೇಳಿದರು.
ಗೋರಖ್ಪುರದ ಹಾಲಿ ಸಂಸದರೂ ಆಗಿರುವ ರವಿಕಿಶನ್, ‘ನಾನು ಐದು ವರ್ಷಗಳಿಂದ ಇಲ್ಲಿ ಬದುಕುತ್ತಿದ್ದೇನೆ. ಮುಂಬೈನ ಐಷಾರಾಮಿ ಜೀವನ ಬಿಟ್ಟು ಇಲ್ಲಿ ಜನರ ಸೇವೆ ಮಾಡುತ್ತಿದೇನೆ’ ಎಂದು ಹೇಳಿದರು.
ತನ್ನನ್ನು ಹೊರಗಿನವರು ಎಂದು ವಿರೋಧಿ ಅಭ್ಯರ್ಥಿಗಳು ಟೀಕಿಸಿದ್ದ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ನಾನು ಇದೇ ಕ್ಷೇತ್ರದ ಹಳ್ಳಿಯಿಂದ ಬಂದವನು. ಇಲ್ಲಿನ ಮಣ್ಣಿನ ಮಗ. ನನ್ನ ಬೇರುಗಳು ಇರುವುದು ಇಲ್ಲಿಯೇ’ ಎಂದರು.
‘ಮೋದಿ–ಯೋಗಿ ಅವರ ಕಲ್ಯಾಣ ಕಾರ್ಯಕ್ರಮಗಳಿಂದ ಬಡವರಿಗೆ ಒಳಿತಾಗಿದೆ. ಆ ಋಣವನ್ನು ಅವರು ಬಿಜೆಪಿಗೆ ಮತ ಹಾಕುವ ಮೂಲಕ ತೀರಿಸುತ್ತಾರೆ. ಜನರೊಂದಿಗೆ ನಡೆಸಿದ 500 ಸಣ್ಣ ಸಭೆಗಳಲ್ಲಿ ನಾನು ಇದನ್ನು ಕಂಡುಕೊಂಡಿದ್ದೇನೆ’ ಎಂದು ತಿಳಿಸಿದರು.