ಮುಜಫರ್ನಗರ: ರಜಪೂತರು ಮಹಾಪಂಚಾಯತ್ ನಡೆಸಿ ಮುಜಫರ್ನಗರ, ಕೈರಾನ ಮತ್ತು ಸಹರಣ್ಪುರ ಲೋಕಸಭಾ ಕ್ಷೇತ್ರಗಳ ಬಿಜೆಪಿ ಅಭ್ಯರ್ಥಿಗಳನ್ನು ಬಹಿಷ್ಕರಿಸಲು ನಿರ್ಧರಿಸಿದ್ದಾರೆ ಎಂದು ಸಮುದಾಯದ ಮುಖಂಡರೊಬ್ಬರು ಬುಧವಾರ ತಿಳಿಸಿದ್ದಾರೆ.
ಕಿಸಾನ್ ಮಜ್ದೂರ್ ಸಂಘಟನೆಯ ರಾಷ್ಟ್ರೀಯ ಅಧ್ಯಕ್ಷ ಮತ್ತು ಸಮುದಾಯದ ಮುಖಂಡ ಠಾಕೂರ್ ಪೂರನ್ ಸಿಂಗ್ ಮಂಗಳವಾರ ಖೇಡದಲ್ಲಿ ಮಹಾಪಂಚಾಯತ್ಗೆ ಕರೆ ನೀಡಿದ್ದರು. ಅದರಲ್ಲಿ ಮುಜಫರ್ನಗರ ಕ್ಷೇತ್ರ ಮತ್ತು ಸುತ್ತಮುತ್ತಲಿನ ಜಿಲ್ಲೆಗಳ ಚೌಬಿಸ ರಜಪೂತ ಸಮುದಾಯದವರು ಭಾಗವಹಿಸಿದ್ದರು.
‘ಬಿಜೆಪಿಯು ಟಿಕೆಟ್ ವಿತರಣೆಯಲ್ಲಿ ಸಮುದಾಯವನ್ನು ನಿರ್ಲಕ್ಷಿಸಿದ್ದರ ವಿರುದ್ಧ ಪ್ರತಿಭಟನೆಯ ಸಂಕೇತವಾಗಿ ಬಹಿಷ್ಕಾರ ಹಾಕಲಾಗಿದೆ. ಈ ಪ್ರದೇಶಗಳ ರಜಪೂತ ಸಮುದಾಯದ ಮತದಾರರು ಬಿಜೆಪಿ ಅಭ್ಯರ್ಥಿಗಳಿಗೆ ಮತ ಚಲಾಯಿಸುವುದಿಲ್ಲ. ಅವರ ಬದಲು ಇತರೆ ಪಕ್ಷಗಳ ಪ್ರಬಲ ಅಭ್ಯರ್ಥಿಯನ್ನು ಬೆಂಬಲಿಸುತ್ತೇವೆ’ ಎಂದು ಸಿಂಗ್ ಹೇಳಿದರು.