ಕಡಪ: ಆಂಧ್ರಪ್ರದೇಶ ಮುಖ್ಯಮಂತ್ರಿ ವೈ.ಎಸ್.ಜಗನ್ಮೋಹನ್ ರೆಡ್ಡಿ ನೇತೃತ್ವದ ವೈಎಸ್ಆರ್ಸಿಪಿ, ಟಿಡಿಪಿ ಮತ್ತು ಜನಸೇನಾ ಪಕ್ಷಗಳು ಬಿಜೆಪಿಯ ‘ಬಿ’ ಟೀಂ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆರೋಪಿಸಿದರು.
ಕಡಪದಲ್ಲಿ ಶನಿವಾರ ಚುನಾವಣಾ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಅವರು ಆಡಳಿತಾರೂಢ ವೈಎಸ್ಆರ್ಸಿಪಿ ಮತ್ತು ವಿರೋಧ ಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದರು.
ಇಂದು ಆಂಧ್ರಪ್ರದೇಶದ ಆಡಳಿತವು ಬಿಜೆಪಿಯ ‘ಬಿ’ ಟೀಂನ ಕೈಯಲ್ಲಿದೆ. ಬಿಜೆಪಿಯ ‘ಬಿ’ ಎಂದರೆ ಇಲ್ಲಿ ‘ಬಾಬು’ (ಟಿಡಿಪಿ ಮುಖ್ಯಸ್ಥ ಚಂದ್ರಬಾಬು ನಾಯ್ಡು), ‘ಜೆ’ ಎಂದರೆ ಜಗನ್, ‘ಪಿ’ ಎಂದರೆ ಪವನ್ (ಜನಸೇನಾ ಪಕ್ಷದ ಸ್ಥಾಪಕ ಪವನ್ ಕಲ್ಯಾಣ್) ಎಂದು ದೂರಿದರು. ಈ ಮೂವರು ನಾಯಕರ ರಿಮೋಟ್ ಕಂಟ್ರೋಲ್ ಪ್ರಧಾನಿ ನರೇಂದ್ರ ಮೋದಿ ಅವರ ಕೈಯಲ್ಲಿದೆ ಎಂದು ಆರೋಪಿಸಿದರು.
ಮಾಜಿ ಮುಖ್ಯಮಂತ್ರಿ ವೈ.ಎಸ್.ರಾಜಶೇಖರ ರೆಡ್ಡಿ (ವೈಎಸ್ಆರ್) ಅವರ ಹೆಸರು ಪ್ರಸ್ತಾಪಿಸಿದ ರಾಹುಲ್, ‘ವೈಎಸ್ಆರ್ ಅವರು ಆಂಧ್ರಪ್ರದೇಶದಲ್ಲಿ ನಡೆಸಿದ್ದ ಪಾದಯಾತ್ರೆಯು ನನ್ನ ಭಾರತ್ ಜೋಡೊ ಯಾತ್ರೆಗೆ ಸ್ಫೂರ್ತಿಯಾಯಿತು’ ಎಂದರು.
‘ಇಂಡಿಯಾ’ ಮೈತ್ರಿಕೂಟವು ಅಧಿಕಾರಕ್ಕೆ ಬಂದ ಕೂಡಲೇ ಆಂಧ್ರಪ್ರದೇಶಕ್ಕೆ 10 ವರ್ಷಗಳ ಕಾಲ ವಿಶೇಷ ಸ್ಥಾನಮಾನ ನೀಡಲಾಗುವುದು ಹಾಗೂ ಪೋಲವರಂ ಯೋಜನೆ ಮತ್ತು ಕಡಪ ಉಕ್ಕಿನ ಘಟಕ ಸೇರಿದಂತೆ ಇತರ ಯೋಜನೆಗಳನ್ನು ಪೂರ್ಣಗೊಳಿಸಲಾಗುವುದು ಎಂದು ಭರವಸೆ ನೀಡಿದರು.