ಬಾಗಲಕೋಟೆ: ‘ಗಜಕೇಸರಿ ಯೋಗದಲ್ಲಿ ಹುಟ್ಟಿದ್ದೇನೆ. ನಾನು ಹುಟ್ಟಿದ ವರ್ಷ ಮೊದಲನೇ ಬಾರಿ ನಮ್ಮ ತಂದೆ ಶಾಸಕರಾಗಿದ್ದರು. ಈಗ ಯೋಗ ಹೇಗೆ ಬಂದಿದೆ ಎಂದರೆ ಮುಂದೆ ಪ್ರಧಾನಿಯಾಗಲೂಬಹುದು’ ಎಂದು ಕಾಂಗ್ರೆಸ್ ಅಭ್ಯರ್ಥಿ ಸಂಯುಕ್ತಾ ಪಾಟೀಲ ಹೇಳಿದರು.
ಬಾಗಲಕೋಟೆಯಲ್ಲಿ ಭಾನುವಾರ ಬಾಗಲಕೋಟೆ ವಿಧಾನಸಭಾ ಕ್ಷೇತ್ರ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ‘ಸಣ್ಣಾಕಿ ಇದ್ದಾಗ ಟೀಚರ್ ಮುಂದೆ ಏನು ಆಗುತ್ತಿ?’ ಎಂದು ಕೇಳುತ್ತಿದ್ದರು. ‘ಭಾರತ ದೇಶದ ಪ್ರಧಾನಿಯಾಗುತ್ತೇನೆ’ ಎನ್ನುತ್ತಿದ್ದೆ. ಮುಂದೆ ಅದು ನಿಜವಾಗಲೂಬಹುದು’ ಎಂದರು.
ಸಂಯುಕ್ತಾ ಪಾಟೀಲ ತಂದೆ, ಸಚಿವ ಶಿವಾನಂದ ಪಾಟೀಲ ಮಾತನಾಡಿ, ‘ಯೋಗಗಳು ಬರುತ್ತವೆ, ಹೋಗುತ್ತವೆ. ಬಸವಣ್ಣನವರ ಕಾಯಕವೇ ಕೈಲಾಸ ಎನ್ನುವುದರಲ್ಲಿ ನಂಬಿಕೆ ಇಟ್ಟವನು. ಪರಿಶ್ರಮವಿದ್ದರೆ ಸೋಲು, ಗೆಲುವಾಗಿ ಪರಿವರ್ತನೆಯಾಗುತ್ತದೆ’ ಎಂದರು.
ಕೆಪಿಸಿಸಿಗೆ ದೂರು: ‘ಕಾಂಗ್ರೆಸ್ ಟಿಕೆಟ್ ತಪ್ಪಲು ಶಾಸಕರು ಕಾರಣ’ ಎಂದು ಟಿಕೆಟ್ ಆಕಾಂಕ್ಷಿಯಾಗಿದ್ದ ವೀಣಾ ಕಾಶಪ್ಪನವರ ಹಾಗೂ ಬೆಂಬಲಿಗರು ಸುಳ್ಳು ಆರೋಪ ಮಾಡುತ್ತಿದ್ದಾರೆ. ಇದನ್ನು ಮುಂದುವರೆಸಿದರೆ ಕೆಪಿಸಿಸಿ, ಎಐಸಿಸಿಗೆ ದೂರು ನೀಡಬೇಕಾಗುತ್ತದೆ ಎಂದು ಶಾಸಕ ಜೆ.ಟಿ. ಪಾಟೀಲ ಎಚ್ಚರಿಸಿದರು.
‘ಯಾವುದೇ ತಪ್ಪು ಮಾಡದೆ ನಾನು ಹಾಗೂ ವೇದಿಕೆ ಮೇಲಿರುವ ಶಾಸಕರು ಆರೋಪ ಹೊರಲು ಸಿದ್ಧರಿಲ್ಲ. ನಾವು ಕಾರಣ ಎಂದು ಸಾಬೀತು ಮಾಡಿದರೆ ರಾಜೀನಾಮೆ ನೀಡಲೂ ಸಿದ್ಧ’ ಎಂದು ಸವಾಲು ಹಾಕಿದರು.