ಬೆಂಗಳೂರು: ಬಿಸಿಲು ಮತ್ತು ಮಳೆ ನಡುವೆಯೂ ಸೋಮವಾರ ಚುನಾವಣಾ ಪ್ರಚಾರ ಬಿರುಸಿನಿಂದ ನಡೆಯಿತು.
ಮಧ್ಯಾಹ್ನದ ನಂತರ ನಗರದ ಬಹುತೇಕ ಭಾಗದಲ್ಲಿ ಜೋರು ಮಳೆ ಸುರಿಯಿತು. ಇದರ ನಡುವೆಯೇ ಪ್ರಚಾರವನ್ನು ಅಭ್ಯರ್ಥಿಗಳು ಮಾಡಿದರು.
ಕಾರ್ಮಿಕರ ದಿನವಾಗಿದ್ದರಿಂದ ಸರ್ಕಾರಿ ರಜೆ ಇತ್ತು. ಸರ್ಕಾರಿ ನೌಕರರು ಮತ್ತು ಕಾರ್ಮಿಕ ಸಮುದಾಯ ಮನೆಯಲ್ಲೇ ಇರುವುದರಿಂದ ಅವರನ್ನು ಸಂಪರ್ಕಿಸುವುದು ಸುಲಭ ಎಂಬ ಕಾರಣಕ್ಕೆ ಎಲ್ಲಾ ಪಕ್ಷದ ಅಭ್ಯರ್ಥಿಗಳು ಮತದಾರ ಮನೆ ಬಾಗಿಲಿಗೆ ತೆರಳಿದ್ದರು.
ಬಿಜೆಪಿ ಅಭ್ಯರ್ಥಿ ಮುನಿರತ್ನ ಪರವಾಗಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ರೋಡ್ ಶೋ ನಡೆಸಿದರು. ಮತದಾನಕ್ಕೆ ಒಂಬತ್ತು ದಿನಗಳು ಮಾತ್ರ ಬಾಕಿ ಇದ್ದು, ಮತದಾರರನ್ನು ಸೆಳೆಯುವ ಅಂತಿಮ ಹಂತದ ಕಸರತ್ತುಗಳನ್ನು ಎಲ್ಲಾ ಪಕ್ಷಗಳ ಮುಖಂಡರು ಮತ್ತು ಅಭ್ಯರ್ಥಿಗಳು ನಡೆಸುತ್ತಿದ್ದಾರೆ.
ಕೆಂಗೇರಿಯಲ್ಲಿ ಬಿಜೆಪಿ ಅಭ್ಯರ್ಥಿ ಎಸ್.ಟಿ.ಸೋಮಶೇಖರ್ ಪರ ಪ್ರಚಾರ ನಡೆಸಿದ ಜೆ.ಪಿ. ನಡ್ಡಾ ಅವರು, ‘ರಾಜಕೀಯ ಲಾಭಕ್ಕಾಗಿ ಸಿದ್ಧಾಂತವನ್ನು ಅಡವಿಡುವ ಜೆಡಿಎಸ್ ನಾಯಕರಿಂದ ರಾಜ್ಯದ ಅಭಿವೃದ್ಧಿ ಸಾಧ್ಯವಿಲ್ಲ. ಮೋದಿ ನೇತೃತ್ವದ ಸಶಕ್ತ ಹಾಗೂ ಡಬಲ್ ಇಂಜಿನ್ ಸರ್ಕಾರಕ್ಕೆ ಬೆಂಬಲ ನೀಡುವ ಮೂಲಕ ರಾಜ್ಯದ ಅಭಿವೃದ್ಧಿಗೆ ಬಿಜೆಪಿ ಬೆಂಬಲಿಸಬೇಕು. ಎಂದು ಹೇಳಿದರು.
‘2014ರ ನಂತರ ದೇಶವು ಹಲವು ಕ್ಷೇತ್ರದಲ್ಲಿ ಪಾರಮ್ಯ ಸಾಧಿಸಿದೆ. ಆಟೋಮೊಬೈಲ್, ಸಾಫ್ಟ್ವೇರ್ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಸ್ವಾವಲಂಬನೆ ಸಾಧಿಸಿದೆ. ಮತ್ತೆ ವಿರೋಧ ಪಕ್ಷಗಳಿಗೆ ಅಧಿಕಾರ ವರ್ಗಾವಣೆ ಆದರೆ ಎಲ್ಲಾ ಅಭಿವೃದ್ಧಿ ಕಾರ್ಯಗಳಿಗೆ ಹಿನ್ನಡೆಯಾಗುವುದು ನಿಶ್ಚಿತ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.