ಶಿರಸಿ: ಉದ್ಯೋಗಕ್ಕಾಗಿ ಊರು ತೊರೆದವರನ್ನು ಈಗ ‘ಸರ್ಚ್ ಟೀಂ‘ ಸದಸ್ಯರು ಹುಡುಕುತ್ತಿದ್ದಾರೆ. ಕ್ಷೇತ್ರದ ಪ್ರತಿ ಮನೆಯ ಕದ ಬಡಿದು ಮತದಾರರ ಮಾಹಿತಿ ಸಂಗ್ರಹಿಸುವಲ್ಲಿ ವಿವಿಧ ಪಕ್ಷಗಳ ಕಾರ್ಯಕರ್ತರೂ ನಿರತರಾಗಿದ್ದಾರೆ!
2018ರ ವಿಧಾನಸಭೆ ಚುನಾವಣೆ ವೇಳೆ ಉತ್ತರ ಕನ್ನಡ ಜಿಲ್ಲೆಯ 6 ವಿಧಾನಸಭೆ ಕ್ಷೇತ್ರಗಳ ವ್ಯಾಪ್ತಿಯಲ್ಲಿ 15,300ಕ್ಕೂ ಹೆಚ್ಚು ಜನರು ಉದ್ಯೋಗದ ಕಾರಣದಿಂದಾಗಿ ಹೊರ ಪ್ರದೇಶದಲ್ಲಿ ನೆಲೆಸಿರುವುದನ್ನು ಪಕ್ಷದ ಕಾರ್ಯಕರ್ತರು ಗುರುತಿಸಿದ್ದರು. ಐದು ವರ್ಷಗಳ ಅವಧಿಯಲ್ಲಿ ಜಿಲ್ಲೆಯಲ್ಲಿ ಆ ಪ್ರಮಾಣ ಅಂದಾಜು ಶೇ 25ಕ್ಕಿಂತ ಹೆಚ್ಚಿದೆ.
ಮತದಾನದ ಹಕ್ಕು ಜಿಲ್ಲೆಯಲ್ಲಿಯೇ ಇರುವ, ಉದ್ಯೋಗಕ್ಕಾಗಿ ಜಿಲ್ಲೆಯನ್ನು ಬಿಟ್ಟು ಹೋಗಿರುವ ಮತದಾರರ ಸಂಖ್ಯೆ 19 ಸಾವಿರ ದಾಟಿದೆ ಎಂದು ವಿವಿಧ ಪಕ್ಷಗಳ ಸಮೀಕ್ಷೆಗಳು ಹೇಳುತ್ತಿವೆ. ಅಭ್ಯರ್ಥಿಗಳ ಕಣ್ಣು ಈ ನಗರ ವಲಸಿಗ ಮತದಾರರ ಮೇಲಿದೆ.
ಇವರನ್ನು ಸೆಳೆಯಲು ಪಕ್ಷಗಳ ಪ್ರಮುಖರು, ಸ್ನೇಹ ಸಮ್ಮಿಲನದ ಹೆಸರಲ್ಲಿ ಅವರೆಲ್ಲರನ್ನು ಒಂದೆಡೆ ಸೇರಿಸುವ ಹಾಗೂ ಸಂಪರ್ಕ ಸಾಧಿಸುವ ಹೊಸ ತಂತ್ರ ರಚಿಸಿದ್ದಾರೆ. ಅದಕ್ಕಾಗಿಯೇ ಪಕ್ಷದ ಜಿಲ್ಲಾ ಪ್ರಮುಖರನ್ನು ಒಳಗೊಂಡ ‘ಸರ್ಚ್ ಟೀಂ’ ಸಿದ್ಧವಾಗಿದೆ.
ಪ್ರಚಾರಕ್ಕೆ ಮನೆ ಮನೆಗೆ ಹೋಗುವ ಕಾರ್ಯಕರ್ತರು, ಹೊರಗೆ ಕೆಲಸ ಮಾಡುವವರ ಫೋನ್ ನಂಬರ್ ಪಡೆದು, ಬೂತ್ ಸಮಿತಿ ಮೂಲಕ ಸರ್ಚ್ ಟೀಂ ಗೆ ಮಾಹಿತಿ ನೀಡುತ್ತಿದ್ದಾರೆ.
‘ಈಗಾಗಲೇ ನಗರಗಳಿಗೆ ವಲಸೆ ಹೋಗಿರುವ ಜಿಲ್ಲೆ ವ್ಯಾಪ್ತಿಯ 12 ಸಾವಿರ ಮತದಾರರ ಮಾಹಿತಿ ಪಕ್ಷದ ಬಳಿ ಇದೆ. ಉಳಿದಂತೆ ನಿತ್ಯವೂ ಹೊಸ ಸೇರ್ಪಡೆಯಾಗುತ್ತಿದೆ. ಆ ಮತದಾರರನ್ನು ಪಕ್ಷದ ಅಭ್ಯರ್ಥಿಯತ್ತ ಸೆಳೆಯಲು, ಮತದಾನದಲ್ಲಿ ಪಾಲ್ಗೊಳ್ಳಲು ಕಾರ್ಯತಂತ್ರ ಸಿದ್ಧವಾಗಿದೆ’ ಎಂಬುದು ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷದ ಸರ್ಚ್ ಟೀಂ ಮುಖ್ಯಸ್ಥರ ಮಾತು.
‘ಸ್ನೇಹ ಸಮ್ಮಿಲನಕ್ಕೆ ಸ್ಥಳ ನಿಗದಿ ಮಾಡಿ, ನಿಗದಿತ ದಿನ ಕರೆಸಿ ಮನವೊಲಿಸುವ ಪ್ರಯತ್ನ ಮಾಡಲಾಗುವುದು. ಮತದಾನದ ದಿನ ಕ್ಷೇತ್ರಕ್ಕೆ ಸಾಮೂಹಿಕವಾಗಿ ಕರೆತರುವ ವ್ಯವಸ್ಥೆ ಮಾಡಲು ತಂಡ ಸಿದ್ಧವಾಗಿದೆ’ ಎಂದು ಅವರು ಮಾಹಿತಿ ನೀಡಿದರು.
ಸರ್ವೆ ಪ್ರಕಾರ ನಗರ ವಲಸಿಗರ ಪಟ್ಟಿ
ಕ್ಷೇತ್ರ ; ಅಂದಾಜು ಸಂಖ್ಯೆ ಶಿರಸಿ ; 3,300 ಯಲ್ಲಾಪುರ ; 2,400 ಹಳಿಯಾಳ ; 1,700 ಕಾರವಾರ ; 1,600 ಕುಮಟಾ ; 1,400 ಭಟ್ಕಳ ; 1,600