ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನಕಪುರ ಕ್ಷೇತ್ರ: ಡಿಕೆಶಿಗೆ ದಾಖಲೆ ಅಂತರದ ಜಯ

ಸತತ ಎಂಟನೇ ಗೆಲುವಿನ ಶ್ರೇಯ
Published 13 ಮೇ 2023, 19:33 IST
Last Updated 13 ಮೇ 2023, 19:33 IST
ಅಕ್ಷರ ಗಾತ್ರ

ರಾಮನಗರ: ಕನಕಪುರದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ 1.22 ಲಕ್ಷ ಮತಗಳ ಅಂತರದಿಂದ ಗೆಲುವು ದಾಖಲಿಸಿದ್ದಾರೆ. ಇದು ಈ ಬಾರಿಯ ಚುನಾವಣೆಯಲ್ಲೇ ಗರಿಷ್ಠ ಅಂತರದ ಗೆಲುವಿನ ದಾಖಲೆಯಾಗಿದೆ.

ಶಿವಕುಮಾರ್‌ರನ್ನು ಕನಕಪುರದಲ್ಲಿಯೇ ಕಟ್ಟಿಹಾಕುವ ಸಲುವಾಗಿ ಇನ್ನಿಲ್ಲದ ಪ್ರಯತ್ನ ನಡೆಸಿದ್ದ ಬಿಜೆಪಿ ಹೈಕಮಾಂಡ್ ಸಚಿವ ಆರ್. ಅಶೋಕ ಅವರನ್ನು ಕಣಕ್ಕೆ ಇಳಿಸಿತ್ತು. ಆದರೆ, ಕೇವಲ 19,753 ಮತಗಳೊಂದಿಗೆ ಮೂರನೇ ಸ್ಥಾನಕ್ಕೆ ಕುಸಿದ ಆರ್‌. ಅಶೋಕ ಸೇರಿದಂತೆ ಕಣದಲ್ಲಿದ್ದ ಯಾರೂ ಠೇವಣಿ ಉಳಿಸಿಕೊಳ್ಳಲು ಸಾಧ್ಯವಾಗಿಲ್ಲ. ಜೆಡಿಎಸ್‌ ಅಭ್ಯರ್ಥಿ ಬಿ. ನಾಗರಾಜು 20,631 ಮತ ಪಡೆದು ಎರಡನೇ ಸ್ಥಾನದಲ್ಲಿದಿದ್ದಾರೆ.

ಡಿ.ಕೆ. ಸಹೋದರರು ಕನಕಪುರದಲ್ಲಿ ಅಬೇಧ್ಯ ಕೋಟೆ ನಿರ್ಮಿಸಿಕೊಂಡಿದ್ದು ಅದನ್ನು ಬೇಧಿಸಲು ಪ್ರತಿಪಕ್ಷಗಳಿಗೆ ಆಗಿಲ್ಲ. ಈ ಬಾರಿ ಡಿ.ಕೆ. ಸಹೋದರರು ರೂಪಿಸಿದ ತಂತ್ರ ಯಶಸ್ಸು ಕಂಡಿದೆ. ಬಿಜೆಪಿಗೆ ಬೂತ್‌ ಮಟ್ಟದಲ್ಲಿ ಸಂಘಟನೆಯ ಕೊರತೆ ಕಾಡಿದೆ. ಜೆಡಿಎಸ್‌ ನಾಯಕರ ನಿರ್ಲಕ್ಷ್ಯದಿಂದಾಗಿ ಆ ಪಕ್ಷದ ಮತಗಳೂ ಕಡಿಮೆ ಆಗಿವೆ.

ಎಂಟನೇ ಜಯ: ಅಂದ ಹಾಗೇ, ವಿಧಾನಸಭೆ ಚುನಾವಣೆಯಲ್ಲಿ ಶಿವಕುಮಾರ್‌ಗೆ ಇದು ಸತತ ಎಂಟನೇ ಗೆಲುವು. 1985ರಲ್ಲಿ ಸಾತನೂರು ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಎಚ್‌.ಡಿ. ದೇವೇಗೌಡರ ಎದುರು ಸೋಲು ಕಂಡಿದ್ದ ಡಿಕೆಶಿ 1989ರಿಂದ 2004ರವರೆಗೆ ಅದೇ ಕ್ಷೇತ್ರದಿಂದ ನಾಲ್ಕು ಬಾರಿ ಸತತವಾಗಿ ಆಯ್ಕೆ ಆಗಿದ್ದಾರೆ. 2008ರ ಕ್ಷೇತ್ರ ಪುನರ್ ವಿಂಗಡನೆ ಸಂದರ್ಭ ಸಾತನೂರು ಕ್ಷೇತ್ರವು ಕನಕಪುರ ಕ್ಷೇತ್ರದಲ್ಲಿ ವಿಲೀನ ಆಗಿದ್ದು, ಕನಕಪುರಕ್ಕೆ ವಲಸೆ ಬಂದ ಶಿವಕುಮಾರ್ ಇಲ್ಲಿಯೂ ಗೆಲುವಿನ ಓಟ ಮುಂದುವರಿಸಿದ್ದಾರೆ. 2008ರಿಂದ ಈವರೆಗೆ ಕನಕಪುರದಲ್ಲಿ ಅವರನ್ನು ಮಣಿಸಲು ಯಾರಿಗೂ ಸಾಧ್ಯವಾಗಿಲ್ಲ.

ಐದನೇ ಮುಖ್ಯಮಂತ್ರಿ ಆಗುತ್ತಾರ?

ಕಾಂಗ್ರೆಸ್ ಬಹುಮತ ಗಳಿಸಿದ ಬೆನ್ನಲ್ಲೇ ಡಿಕೆಶಿ ಮುಖ್ಯಮಂತ್ರಿ ಹುದ್ದೆಗೇರಲು ಪ್ರಯತ್ನ ನಡೆಸಿದ್ದಾರೆ. ಹಾಗೇನಾದರೂ ಆದಲ್ಲಿ ರಾಮನಗರ ಜಿಲ್ಲೆಯಿಂದ ಆಯ್ಕೆಯಾದ ಐದನೇ ಮುಖ್ಯಮಂತ್ರಿ ಎಂಬ ಶ್ರೇಯ ಅವರದ್ದಾಗಲಿದೆ. ವಿಧಾನಸೌಧ ನಿರ್ಮಾತೃ ರಾಜ್ಯದ ಎರಡನೇ ಮುಖ್ಯಮಂತ್ರಿ ಕೆಂಗಲ್ ಹನುಮಂತಯ್ಯ ರಾಮನಗರದವರು. 1983ರಲ್ಲಿ ಕನಕಪುರದಲ್ಲಿ ಉಪ ಚುನಾವಣೆ ಗೆದ್ದು ರಾಮಕೃಷ್ಣ ಹೆಗಡೆ ಮುಖ್ಯಮಂತ್ರಿ ಆಗಿದ್ದರು. 1994ರಲ್ಲಿ ಎಚ್‌.ಡಿ. ದೇವೇಗೌಡ ಹಾಗೂ 2004 ಮತ್ತು 2018ರಲ್ಲಿ ಎಚ್‌.ಡಿ. ಕುಮಾರಸ್ವಾಮಿ ರಾಮನಗರದಿಂದ ಆಯ್ಕೆಯಾಗಿ ರಾಜ್ಯದ ಮುಖ್ಯಮಂತ್ರಿಯಾಗಿ ಆಡಳಿತ ನಡೆಸಿದ್ದರು.

ಕುಸಿದ ಎಚ್‌ಡಿಕೆ ಗೆಲುವಿನ ಅಂತರ

ರಾಮನಗರ: ತೀವ್ರ ಕುತೂಹಲ ಕೆರಳಿಸಿದ್ದ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಪ್ರಚಾರದ ಹೊರತಾಗಿಯೂ ಬಿಜೆಪಿ ಅಭ್ಯರ್ಥಿ ಸಿ.ಪಿ. ಯೋಗೇಶ್ವರ್‌ ಸೋಲು ಕಂಡಿದ್ದಾರೆ.

ಜೆಡಿಎಸ್ ನಾಯಕ ಎಚ್‌.ಡಿ. ಕುಮಾರಸ್ವಾಮಿ ಸಮಾಧಾನಕರ ಗೆಲುವು ದಾಖಲಿಸಿದ್ದಾರೆ. ಆದರೆ, ಕಳೆದ ಬಾರಿ ಇಲ್ಲಿಂದ 22 ಸಾವಿರ ಮತಗಳ ಅಂತರದಿಂದ ಗೆದ್ದಿದ್ದ ಕುಮಾರಸ್ವಾಮಿ ಗೆಲುವಿನ ಅಂತರ ಈ ಬಾರಿ 15,915ಕ್ಕೆ ಇಳಿದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT