ಬೆಂಗಳೂರು: ‘ಕರ್ನಾಟಕದಲ್ಲಿನ ಕಾಂಗ್ರೆಸ್ ಸರ್ಕಾರದ ನೀತಿಗಳು ಅತ್ಯಂತ ಅಪಾಯಕಾರಿಯಾಗಿವೆ. ಇದರಿಂದಾಗಿ ಇಲ್ಲಿನ ಬೀದಿಗಳಲ್ಲಿ ಬಾಂಬ್ ಸ್ಫೋಟವಾಗುತ್ತಿವೆ’ ಎಂದು ಪ್ರಧಾನಿ ನರೇಂದ್ರ ಮೋದಿ ವಾಗ್ದಾಳಿ ನಡೆಸಿದರು.
ಲೋಕಸಭಾ ಚುನಾವಣಾ ಪ್ರಚಾರಕ್ಕಾಗಿ ಎರಡನೇ ಬಾರಿ ರಾಜ್ಯ ಪ್ರವಾಸ ಕೈಗೊಂಡಿದ್ದ ಅವರು, ಚಿಕ್ಕಬಳ್ಳಾಪುರ ಮತ್ತು ಬೆಂಗಳೂರಿನಲ್ಲಿ ಶನಿವಾರ ಸಾರ್ವಜನಿಕ ಸಭೆಗಳಲ್ಲಿ ಮಾತನಾಡಿದರು. ಚಿಕ್ಕಬಳ್ಳಾಪುರದಲ್ಲಿ ಕಾಂಗ್ರೆಸ್ನ ಕೇಂದ್ರ ನಾಯಕರನ್ನು ಗುರಿಯಾಗಿಸಿ ಟೀಕಾಪ್ರಹಾರ ನಡೆಸಿದರು. ತಮ್ಮನ್ನು ಅಧಿಕಾರದಿಂದ ಕೆಳಗಿಳಿಸಲು ಕಾಂಗ್ರೆಸ್ ಮತ್ತು ‘ಇಂಡಿ’ ಮೈತ್ರಿಕೂಟದ ನಾಯಕರ ಜತೆ ವಿದೇಶಿ ಶಕ್ತಿಗಳು ಸೇರಿಕೊಂಡು ಸಂಚು ನಡೆಸುತ್ತಿವೆ ಎಂದು ದೂಷಿಸಿದರು.
ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ ಬಿಜೆಪಿ ವಿಜಯ ಸಂಕಲ್ಪ ಸಮಾವೇಶದಲ್ಲಿ, ರಾಜ್ಯದಲ್ಲಿ ಇತ್ತೀಚೆಗೆ ನಡೆದ ಕೆಲವು ಪ್ರಕರಣಗಳನ್ನು ತಳಕು ಹಾಕಿ ರಾಜ್ಯದ ಕಾಂಗ್ರೆಸ್ ಸರ್ಕಾರದ ವಿರುದ್ಧ ನೇರ ಆರೋಪ ಮಾಡಿದರು.
‘ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರವು ಯಾವ ವಿಚಾರ ಮತ್ತು ಮಾನಸಿಕತೆಯನ್ನು ಪ್ರೋತ್ಸಾಹಿಸುತ್ತಿದೆಯೋ ಅವು ಅತ್ಯಂತ ಅಪಾಯಕಾರಿಯಾಗಿವೆ. ನಮ್ಮ ಹೆಣ್ಣು ಮಕ್ಕಳ ಮೇಲೆ ಹಲ್ಲೆಗಳಾಗುತ್ತಿವೆ. ಮಾರುಕಟ್ಟೆಗಳಲ್ಲಿ ಬಾಂಬ್ ಇಡಲಾಗುತ್ತಿದೆ. ಭಜನೆ ಮಾಡುವವರೆ ಮೇಲೆ ಹಲ್ಲೆಗಳಾಗುತ್ತಿವೆ. ಭಜನೆ, ಕೀರ್ತನೆ ಕೇಳುವವರ ಮೇಲೂ ದಾಳಿಗಳಾಗುತ್ತಿವೆ. ಈ ಎಲ್ಲದಕ್ಕೂ ಕಾಂಗ್ರೆಸ್ ಸರ್ಕಾರದ ಧೋರಣೆಗಳೇ ಕಾರಣ’ ಎಂದರು.
‘ಕರ್ನಾಟಕದ ಕಾಂಗ್ರೆಸ್ ಸರ್ಕಾರವು ಯಾವ ರೀತಿಯ ಮಾನಸಿಕತೆಯನ್ನು ಪ್ರೋತ್ಸಾಹಿಸುತ್ತಿದೆ ಎಂಬುದನ್ನು ಗಮನಿಸಿಬೇಕಿದೆ. ಇವು ಸಾಮಾನ್ಯ ಘಟನೆಗಳಲ್ಲ. ಬೆಂಗಳೂರು ಮತ್ತು ಕರ್ನಾಟಕದ ಸಹೋದರರು ಕಾಂಗ್ರೆಸ್ ಬಗ್ಗೆ ಬಹಳ ಎಚ್ಚರದಿಂದ ಇರಬೇಕು’ ಎಂದು ಹೇಳಿದರು.
ಕಾಂಗ್ರೆಸ್ ಪಕ್ಷ ಮತ್ತು ‘ಇಂಡಿ’ ಮೈತ್ರಿಕೂಟ ಯುವಜನರು, ಬಡವರು, ಮಧ್ಯಮವರ್ಗ, ರೈತರ ವಿರೋಧಿಗಳು. ತೆರಿಗೆದಾರರು, ಉದ್ಯಮಶೀಲತೆ, ಖಾಸಗಿ ವಲಯದ ಉದ್ದಿಮೆಗಳು, ಆಸ್ತಿ ಸೃಜನೆಯ ವಿರೋಧಿಗಳು ಕೂಡ ಹೌದು. ಆಡಳಿತದಲ್ಲಿ ತಂತ್ರಜ್ಞಾನದ ವಿರೋಧಿಗಳೂ ಆಗಿದ್ದಾರೆ ಎಂದು ಪ್ರಧಾನಿ ಟೀಕಿಸಿದರು.