ದೇವನಹಳ್ಳಿ: ದೇಶದ ಜನರ ಖಾತೆಗೆ ₹15ಲಕ್ಷ ಹಣ ಹಾಕುತ್ತೇವೆ ಎಂದು ಹೇಳಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ರಾಜ್ಯದ ಜನರಿಗೆ ಚೋಂಬು ನೀಡಿದೆ ಎಂದು ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಲೇವಡಿ ಮಾಡಿದರು.
ಪಟ್ಟಣದ ಕಾಂಗ್ರೆಸ್ ಕಚೇರಿಗೆ ಶನಿವಾರ ಭೇಟಿ ನೀಡಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ಯುವಕರಿಗೆ ಪ್ರತಿವರ್ಷ 2ಕೋಟಿ ಉದ್ಯೋಗ ಸೃಷ್ಟಿ ಮಾಡುತ್ತೇವೆ ಎಂದು ಈಗ ಚೋಂಬು ನೀಡಿದ್ದಾರೆ' ಎಂದು ಟೀಕಿಸಿದರು.
2022ರ ವೇಳೆಗೆ ಕೃಷಿಕರ ಆದಾಯ ದ್ವಿಗುಣ ಮಾಡುತ್ತೇವೆ ಎಂದು ಮೋದಿ, ಸಂಪೂರ್ಣ ಖಾಲಿ ಚೋಂಬು ನೀಡಿದ್ದಾರೆ. ₹17ಸಾವಿರ ಕೋಟಿ ಬರ ನಿರ್ವಹಣೆಗೆ ಹಣ ಕೇಳಿದರೆ ಅದಕ್ಕೂ ಚೋಂಬು ನೀಡಿದ್ದಾರೆ ಎಂದು ಲೇವಡಿ ಮಾಡಿದರು.
15ನೇ ಹಣಕಾಸು ಯೋಜನೆಯಲ್ಲಿ ₹60ಸಾವಿರ ಕೋಟಿ ಕೇಳಿದ್ದೇವೆ. ರಾಜ್ಯಕ್ಕೆ ನ್ಯಾಯಯುತವಾದ ತೆರಿಗೆ ಪಾಲು ಕೇಳಿದ್ದರೆ ಅವರು ಜನರಿಗೆ ಖಾಲಿ ಚೋಂಬು ನೀಡಿದ್ದಾರೆ. ಚಿಕ್ಕಬಳ್ಳಾಪುರದಲ್ಲೂ ಜನರಿಗೆ ಖಾಲಿ ಚೋಂಬು ಕೊಟ್ಟು ಹೋಗಿದ್ದಾರೆ ಎಂದರು.
ರಾಜ್ಯದ ಕಾಂಗ್ರೆಸ್ ಸರ್ಕಾರ ನೀಡಿರುವ ಎಲ್ಲ ಭರವಸೆ ಈಡೇರಿಸುತ್ತಿದೆ. ಪಂಚ ಗ್ಯಾರಂಟಿಯಡಿ ಗೃಹಲಕ್ಷ್ಮಿ ಯೋಜನೆ ಮೂಲಕ ಮಹಿಳೆಯರ ಆರ್ಥಿಕ ಬಲವರ್ಧನೆಗೆ ಪ್ರೋತ್ಸಾಹ ನೀಡಲಾಗಿದೆ ಎಂದರು.
ಗೃಹ ಜ್ಯೋತಿಯಿಂದಾಗಿ ರಾಜ್ಯದ 1.87 ಲಕ್ಷ ಮಾಲೀಕರು ಪ್ರಯೋಜನೆ ಪಡೆದುಕೊಂಡಿದ್ದಾರೆ. ಅನ್ನಭಾಗ್ಯ ಮೂಲಕ 4.49 ಲಕ್ಷ ಕುಂಟುಬಗಳು ಅಕ್ಕಿ ಹಾಗೂ ಸಹಾಯಧನ ದೊರೆಯುವಂತೆ ಮಾಡಲಾಗಿದೆ. ನಿತ್ಯ 35 ಲಕ್ಷ ಮಹಿಳೆಯರು ಶಕ್ತಿ ಯೋಜನೆಯಡಿ ಬಸ್ನಲ್ಲಿ ಪ್ರಯಾಣ ಮಾಡುತ್ತಿದ್ದು, ಯುವ ನಿಧಿಯಿಂದ 1.5ಲಕ್ಷ ಯುವಕರಿಗೆ ಅನುಕೂಲವಾಗಿದೆ ಎಂದರು.
ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್.ಮುನಿಯಪ್ಪ, ದೊಡ್ಡಬಳ್ಳಾಪುರ ಮಾಜಿ ಶಾಸಕ ವೆಂಕಟರಮಣಯ್ಯ, ಬಯಾಪ್ಪ ಅಧ್ಯಕ್ಷ ವಿ.ಶಾಂತಕುಮಾರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಸನ್ನಕುಮಾರ್ ಸೇರಿದಂತೆ ಇತರರು ಇದ್ದರು.