ಬಾಗಲಕೋಟೆ: ಮಗಳ ಚುನಾವಣೆಗಾಗಿ ಸಕ್ಕರೆ ಕಾರ್ಖಾನೆಗಳಿಂದ ಹಣ ಕೇಳಿರುವುದನ್ನು ಶಾಸಕ ಬಸನಗೌಡ ಪಾಟೀಲ ಯತ್ನಾಳ ಸಾಬೀತು ಮಾಡಿದರೆ ರಾಜಕೀಯ ನಿವೃತ್ತಿ ತೆಗೆದುಕೊಳ್ಳುತ್ತೇನೆ ಎಂದು ಸಚಿವ ಶಿವಾನಂದ ಪಾಟೀಲ ಸವಾಲು ಹಾಕಿದರು.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಣ ಕೇಳಿರುವುದನ್ನು ಸಾಬೀತು ಮಾಡಬೇಕು. ಇಲ್ಲವೇ ಅವರು ರಾಜಕೀಯದಿಂದ ನಿವೃತ್ತರಾಗಬೇಕು ಎಂದರು.
ಚಿಲ್ಲರೆ ರಾಜಕಾರಣ ಮಾಡಲು ನನಗೆ ಬರುವುದಿಲ್ಲ. ಬಿಜೆಪಿಯನ್ನು ಹೆಚ್ಚು ಬೈದವರು ಯಾರಾದರೂ ಇದ್ದರೆ, ಅವರು ಯತ್ನಾಳ ಎಂದು ಟೀಕಿಸಿದರು.
ಗಂಡಸಾಗಿದ್ದರೆ ಯತ್ನಾಳ ಅವರು ವಿಜಯಪುರ ನಗರದಿಂದ ಪಕ್ಷೇತರರಾಗಿ ನಿಲ್ಲಲಿ. ನಾನೂ ಪಕ್ಷೇತರನಾಗಿ ನಿಲ್ಲುತ್ತೇನೆ. ನನಗಿಂತ ಅವರು ಒಂದು ಮತ ಹೆಚ್ಚಿಗೆ ಪಡೆದರೂ ರಾಜಕೀಯ ನಿವೃತ್ತಿ ಪಡೆಯುತ್ತೇನೆ. ಇಲ್ಲದಿದ್ದರೆ, ಅವರು ನಿವೃತ್ತರಾಗಲಿ ಎಂದು ಸವಾಲು ಹಾಕಿದರು.