ಬೀದರ್: ‘ಬಿಜೆಪಿ–ಜೆಡಿಎಸ್ ಮೈತ್ರಿ ಅವಕಾಶವಾದಿ ರಾಜಕಾರಣ’ ಎಂದು ಪರಿಸರ, ಅರಣ್ಯ ಮತ್ತು ಜೀವಿಶಾಸ್ತ್ರ ಖಾತೆ ಸಚಿವ ಈಶ್ವರ ಬಿ. ಖಂಡ್ರೆ ಹೇಳಿದರು.
ಬಿಜೆಪಿ–ಜೆಡಿಎಸ್ ಮೈತ್ರಿ ಅವಕಾಶವಾದಿ ಆಗಿರುವುದರಿಂದ ಅದು ಕೊನೆಯ ವರೆಗೆ ಇರುವುದಿಲ್ಲ. ರಾಜ್ಯದ ಜನತೆಗೆ ಇದೆಲ್ಲ ಗೊತ್ತಿದೆ ಎಂದು ನಗರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಜಗತ್ತಿನ ಅತಿದೊಡ್ಡ ಭ್ರಷ್ಟಾಚಾರ: ಚುನಾವಣಾ ಬಾಂಡ್ ಮೂಲಕ ಕೋಟ್ಯಂತರ ರೂಪಾಯಿ ಪಡೆದಿರುವ ಬಿಜೆಪಿ ಜಗತ್ತಿನ ಅತಿದೊಡ್ಡ ಭ್ರಷ್ಟಾಚಾರ ಎಸಗಿದೆ. ಬಾಂಡ್ ಖರೀದಿಸಿ ಬಿಜೆಪಿಗೆ ದೇಣಿಗೆ ಕೊಟ್ಟಿದ್ದವರಿಗೆ ಸಾವಿರಾರು ಕೋಟಿ ರೂಪಾಯಿ ಕಾಮಗಾರಿಗಳನ್ನು ಕೊಟ್ಟು ಅನುಕೂಲ ಮಾಡಿಕೊಡಲಾಗಿದೆ. ಯಾವ ಆಧಾರದ ಮೇಲೆ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರನ್ನು ಬಂಧಿಸಿದ್ದಾರೆ ಎಂದರು ಪ್ರಶ್ನಿಸಿದರು.
ಬಿಜೆಪಿ ಸೇರಿ ಸ್ವಚ್ಛರಾದರೆ? ಭ್ರಷ್ಟಾಚಾರದ ಆರೋಪ ಹೊಂದಿರುವ ಕಾಂಗ್ರೆಸ್, ಎಎಪಿಯ ಮುಖಂಡರು ಬಿಜೆಪಿಗೆ ಸೇರಿದ ನಂತರ ಸ್ವಚ್ಛರಾದರೆ? ಎಲ್ಲೂ ನಮಗೆ ‘ಲೆವಲ್ ಪ್ಲೇಯಿಂಗ್ ಫೀಲ್ಡ್’ ಇಲ್ಲ. ದೇಶದಲ್ಲಿ ಎಂದೂ ಈ ಪರಿಸ್ಥಿತಿ ಬಂದಿರಲಿಲ್ಲ. ಪ್ರತಿಪಕ್ಷದವರಿಗೆ ಸಂಪನ್ಮೂಲ ಇಲ್ಲದಂತೆ ನೋಡಿಕೊಳ್ಳುವ ತಂತ್ರ ಬಿಜೆಪಿ ಮಾಡುತ್ತಿದೆ ಎಂದು ಆರೋಪಿಸಿದರು.