ಬೆಂಗಳೂರು: ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ–ಅಂಬೇಡ್ಕರ್ (ಆರ್ಪಿಐ) ಪಕ್ಷವು ಬುಧವಾರ ರಾಜ್ಯದ 10 ಲೋಕಸಭಾ ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರುಗಳನ್ನು ಪ್ರಕಟಿಸಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಮಹೇಶ ಗೋರನಾಳಕರ್, ‘ಕಾಂಗ್ರೆಸ್ ಮತ್ತು ಬಿಜೆಪಿ ಒಂದು ನಾಣ್ಯದ ಎರಡು ಮುಖಗಳಾಗಿವೆ. ಕಾಂಗ್ರೆಸ್ 65 ವರ್ಷಗಳ ಕಾಲ ಆಡಳಿತ ನಡೆಸಿದೆ. ಆದರೆ, ಸಂವಿಧಾನವನ್ನು ಸಂಪೂರ್ಣವಾಗಿ ಜಾರಿಗೊಳಿಸುವಲ್ಲಿ ವಿಫಲವಾಗಿದೆ. ಅದೇ ಮಾರ್ಗದಲ್ಲಿ ಬಿಜೆಪಿ ನಡೆಯುತ್ತಿದ್ದು, ಸಂವಿಧಾನ ಬದಲಾಯಿಸುವ ಮಾತುಗಳನ್ನಾಡುತ್ತಿದೆ. ಆದ್ದರಿಂದ, ಲೋಕಸಭಾ ಚುನಾವಣೆಯಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಅವರ ತತ್ವ ಸಿದ್ಧಾಂತಗಳನ್ನು ಪಾಲಿಸುವ ಆರ್ಪಿಐ ಪಕ್ಷದ ಅಭ್ಯರ್ಥಿಗಳನ್ನು ಬೆಂಬಲಿಸಿ’ ಎಂದು ಮನವಿ ಮಾಡಿದರು.
ಅಭ್ಯರ್ಥಿಗಳ ಪಟ್ಟಿ: ‘ಜಿತೇಂದ್ರ ಕಾಂಬ್ಳೆ (ವಿಜಯಪುರ), ಶಂಕರ್ ವೆಂಕಪ್ಪ ನಾಯಕರ್ (ಬಾಗಲಕೋಟೆ), ರಮೇಶ್ ನಾಟೇಕರ್ (ಕಲಬುರಗಿ), ಮಹೇಶ ಗೋರನಾಳಕರ್ (ಬೀದರ್), ತಿಮ್ಮಣ್ಣ ಬಿಲ್ಲವ (ಯಾದಗಿರಿ), ಹೆಬ್ಬಾಳ್ ವೆಂಕಟೇಶ್ (ಬೆಂಗಳೂರು ಉತ್ತರ), ವೆಂಕಟೇಶ್ ಪ್ರಸಾದ್ (ಬೆಂಗಳೂರು ಕೇಂದ್ರ), ಅಂಬಣ್ಣ ಕುಕನೂರ್ (ಕೊಪ್ಪಳ), ಎನ್.ಜೆ. ನರಸಿಂಹಮೂರ್ತಿ (ಕೋಲಾರ), ಸುಲೇಮಾನ್ ಜಮಾದಾರ್(ಬೆಳಗಾವಿ) ಲೋಕಸಭಾ ಕ್ಷೇತ್ರಗಳಲ್ಲಿ ಸ್ಪರ್ಧಿಸಲಿದ್ದಾರೆ’ ಎಂದು ಅವರು ಮಾಹಿತಿ ನೀಡಿದರು.