ಮಹಾರಾಷ್ಟ್ರದ ಅಮರಾವತಿ ಲೋಕಸಭಾ ಕ್ಷೇತ್ರದಿಂದ 2019ರಲ್ಲಿ ಪಕ್ಷೇತರರಾಗಿ ಸ್ಪರ್ಧಿಸಿ ಗೆದ್ದಿದ್ದ ನವನೀತ್ ಕೌರ್ ರಾಣಾ ಅವರು, ಈ ಬಾರಿ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ಕಳೆದ ಚುನಾವಣೆಯಲ್ಲಿ ನವನೀತ್ ಅವರು 36,951 ಮತಗಳ ಅಂತರದಿಂದ ಶಿವಸೇನಾದ ಆನಂದ ರಾವ್ ಅಡ್ಸುಲ್ ಅವರನ್ನು ಸೋಲಿಸಿದ್ದರು. ರಾಜಕೀಯ ಪ್ರವೇಶಿಸುವುದಕ್ಕೂ ಮೊದಲು ನವನೀತ್ ಅವರು ತೆಲುಗು ಸಿನಿಮಾ ರಂಗದಲ್ಲಿ ನಟಿಯಾಗಿದ್ದರು. 2014ರಲ್ಲಿ ಇದೇ ಕ್ಷೇತ್ರದಿಂದ ಎನ್ಸಿಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಪರಾಭವಗೊಂಡಿದ್ದರು. ಇವರ ಪತಿ ರವಿ ರಾಣಾ ಅವರು ಶಾಸಕರಾಗಿದ್ದಾರೆ. 2022ರಲ್ಲಿ ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿದ್ದ ಉದ್ಧವ್ ಠಾಕ್ರೆ ಅವರ ಮನೆಯ ಮುಂದೆ ಹನುಮಾನ್ ಚಾಲೀಸಾ ಪಠಿಸಿ ಪ್ರತಿಭಟಿಸಿದ್ದಕ್ಕೆ, ನವನೀತ್ ಮತ್ತು ರವಿ ರಾಣಾ ಅವರನ್ನು ಪೊಲೀಸರು ಬಂಧಿಸಿದ್ದರು. ನವನೀತ್ ಅವರು ಈಚೆಗೆ ಬಿಜೆಪಿಗೆ ಸೇರಿದ್ದರು.