ಮುಂಬೈ: ಪಾನ್ ಮಸಾಲ ಬ್ರಾಂಡ್ನ ರಾಯಭಾರಿಯಾಗಿ ಕಾಣಿಸಿಕೊಂಡಿದ್ದಕ್ಕಾಗಿ ಹಿಂದಿಯ ಸೂಪರ್ ಸ್ಟಾರ್ ಅಕ್ಷಯ್ ಕುಮಾರ್ ಗುರುವಾರ ತಮ್ಮ ಅಭಿಮಾನಿಗಳಲ್ಲಿ ಕ್ಷಮೆಯಾಚಿಸಿದ್ದಾರೆ. ಅಲ್ಲದೆ, ಆ ಜಾಹೀರಾತಿನ ಒಪ್ಪಂದ ಕಡಿದುಕೊಳ್ಳುವುದಾಗಿ ಹೇಳಿದ್ದಾರೆ.
ಎಂದಿಗೂ ನಾನು ತಂಬಾಕನ್ನು ಉತ್ತೇಜಿಸುವುದಿಲ್ಲ ಎಂದು ಪ್ರತಿಜ್ಞೆ ಮಾಡಿದ್ದ ಹಳೆಯ ವಿಡಿಯೊವನ್ನು ಪೋಸ್ಟ್ ಮಾಡಿದ್ದ ಸಾಮಾಜಿಕ ಮಾಧ್ಯಮ ಬಳಕೆದಾರರು ಅಕ್ಷಯ್ ಕುಮಾರ್ ಅವರ ವಿರುದ್ಧ ತೀವ್ರ ಟೀಕೆಗೈದಿದ್ದರು.
‘ನನ್ನನ್ನು ಕ್ಷಮಿಸಿ’ ಎಂದು ಟ್ವಿಟರ್ ಪೋಸ್ಟ್ ಮೂಲಕ 54 ವರ್ಷದ ನಟ ಅಭಿಮಾನಿಗಳ ಕ್ಷಮೆ ಕೇಳಿದ್ದಾರೆ.
ತಂಬಾಕು ಬ್ರಾಂಡ್ನಿಂದ ಹಿಂದೆ ಸರಿಯಲು ನಿರ್ಧರಿಸಿದ್ದೇನೆ. ಅದರಿಂದ ಪಡೆದ ಸಂಪೂರ್ಣ ಸಂಭಾವನೆಯನ್ನು ಯೋಗ್ಯ ಉದ್ದೇಶಕ್ಕಾಗಿ ದಾನ ಮಾಡುವುದಾಗಿ ಅವರು ಹೇಳಿದ್ದಾರೆ.
‘ನನ್ನ ಎಲ್ಲಾ ಅಭಿಮಾನಿಗಳು ಮತ್ತು ಹಿತೈಷಿಗಳೇ ನಾನು ನಿಮ್ಮಲ್ಲಿ ಕ್ಷಮೆಯಾಚಿಸಲು ಬಯಸುತ್ತೇನೆ. ಕಳೆದ ಕೆಲವು ದಿನಗಳಿಂದ ನಿಮ್ಮ ಪ್ರತಿಕ್ರಿಯೆಗಳು ನನ್ನನ್ನು ಆಳವಾಗಿ ಪ್ರಭಾವಿಸಿದೆ. ನಾನು ತಂಬಾಕನ್ನು ಎಂದಿಗೂ ಉತ್ತೇಜಿಸಿಲ್ಲ ಮತ್ತು ನಾನು ಜಾಹೀರಾತು ಮಾಡುತ್ತಿರುವ ಬ್ರಾಂಡ್ ಬಗೆಗಿನ ನಿಮ್ಮ ಭಾವನೆಗಳನ್ನು ನಾನು ಗೌರವಿಸುತ್ತೇನೆ’ ಎಂದು ಹೇಳಿದ್ದಾರೆ.
‘ವಿನಮ್ರತೆಯಿಂದ ನಾನು ಹಿಂದೆ ಸರಿಯುತ್ತೇನೆ. ನಾನು ಪಡೆದಿರುವ ಸಂಪೂರ್ಣ ಸಂಭಾವನೆಯನ್ನು ಯೋಗ್ಯ ಉದ್ದೇಶಕ್ಕಾಗಿ ನೀಡಲು ನಿರ್ಧರಿಸಿದ್ದೇನೆ. ನನ್ನ ಒಪ್ಪಂದದ ಕಾನೂನು ಅವಧಿ ಮುಗಿಯುವವರೆಗೆ ಬ್ರ್ಯಾಂಡ್ ಜಾಹೀರಾತುಗಳನ್ನು ಪ್ರಸಾರ ಮಾಡುವುದನ್ನು ಮುಂದುವರಿಸಬಹುದು’ ಎಂದು ಅಕ್ಷಯ್ ಕುಮಾರ್ ಹೇಳಿದ್ದಾರೆ.
‘ನಾನು ಭವಿಷ್ಯದ ಆಯ್ಕೆಗಳನ್ನು ಮಾಡುವಾಗ ಅತ್ಯಂತ ಜಾಗರೂಕರಾಗಿರುತ್ತೇನೆ ಎಂದು ಭರವಸೆ ನೀಡುತ್ತೇನೆ. ಪ್ರತಿಯಾಗಿ ನಾನು ನಿಮ್ಮ ಪ್ರೀತಿ ಮತ್ತು ಹಾರೈಕೆಗಳನ್ನು ಬಯಸುತ್ತೇನೆ’ ಎಂದು ಅವರು ಹೇಳಿದ್ದಾರೆ
ಈ ಹಿಂದೆ, ಮೆಗಾಸ್ಟಾರ್ ಅಮಿತಾಬ್ ಬಚ್ಚನ್ ಕೂಡ ಪಾನ್ ಮಸಾಲಾ ಬ್ರಾಂಡ್ನ ಜಾಹೀರಾತು ಪ್ರಚಾರದಿಂದ ಹಿಂದೆ ಸರಿದಿದ್ದರು ಮತ್ತು ಅದರಿಂದ ಪಡೆದ ಹಣವನ್ನು ಹಿಂದಿರುಗಿಸಿರುವುದಾಗಿ ಹೇಳಿದ್ದರು.