ಈ ಘಟನೆ ವಿವರಿಸಿ ನಟ ಚೇತನ್ಚಂದ್ರ ಅವರು ವಿಡಿಯೊ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ಚೇತನ್ಚಂದ್ರ ಅವರು ಕಗ್ಗಲಿಪುರ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.
‘ಸ್ನೇಹಿತ ಲಕ್ಷ್ಮಣ್ ಜತೆಗೆ ಭಾನುವಾರ ಕನಕಪುರಕ್ಕೆ ತೆರಳಿದ್ದೆ. ಅದೇ ದಿನ ರಾತ್ರಿ 8.30ರ ಸುಮಾರಿಗೆ ಸಾತನೂರು ರಸ್ತೆಯ ಮೂಲಕ ನಗರಕ್ಕೆ ಕಾರಿನಲ್ಲಿ ಬರುತ್ತಿದ್ದಾಗ ಈ ಘಟನೆ ನಡೆದಿದೆ. ಮಾರ್ಗಮಧ್ಯದಲ್ಲಿ ಬೇಕರಿಯೊಂದರಲ್ಲಿ ತಿನಿಸು ಖರೀದಿಸಿ ಅಲ್ಲಿಂದ ತೆರಳಿದೆವು. ವ್ಯಕ್ತಿಯೊಬ್ಬ ಬೈಕ್ನಲ್ಲೇ ನಮ್ಮನ್ನೇ ಹಿಂಬಾಲಿಸುತ್ತಿದ್ದ. ಮಾರ್ಗದ ಉದ್ದಕ್ಕೂ ಸುಮ್ಮನೇ ಹಾರ್ನ್ ಮಾಡುವುದು, ಕಾರಿಗೆ ಒದೆಯುವುದನ್ನು ಮಾಡುತ್ತಿದ್ದ. ನಿರ್ಜನ ಪ್ರದೇಶವಾಗಿದ್ದರಿಂದ ನಾವು ಕಾರು ನಿಲುಗಡೆ ಮಾಡದೇ ತೆರಳಿದೆವು. ಟೋಲ್ ದಾಟಿದ ಮೇಲೂ ಮತ್ತೆ ಹಿಂಬಾಲಿಸಿದ. ಮಾರ್ಗಮಧ್ಯದ ಗ್ರಾಮವೊಂದರಲ್ಲಿ ಕಾರನ್ನು ನಿಲುಗಡೆ ಮಾಡಲಾಯಿತು. ಅಲ್ಲಿ 15 ರಿಂದ 20 ಮಂದಿ ಗುಂಪು ಕೂಡಿಕೊಂಡು ಥಳಿಸಿ ಚಿನ್ನದ ಸರ ಕಸಿದುಕೊಂಡರು. ಅಲ್ಲದೇ ಕಾರಿನಲ್ಲಿದ್ದ ₹15ರಿಂದ ₹20 ಸಾವಿರವನ್ನು ತೆಗೆದುಕೊಂಡು ಪರಾರಿಯಾದರು’ ಎಂದು ಚೇತನ್ಚಂದ್ರ ದೂರಿನಲ್ಲಿ ತಿಳಿಸಿದ್ದಾರೆ.