ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುನೀತ್ ರಾಜ್​ಕುಮಾರ್ ಜನ್ಮದಿನ: ಬೊಮ್ಮಾಯಿ, ಸಿದ್ದರಾಮಯ್ಯ ಸೇರಿ ಗಣ್ಯರಿಂದ ಸ್ಮರಣೆ

Last Updated 17 ಮಾರ್ಚ್ 2023, 6:25 IST
ಅಕ್ಷರ ಗಾತ್ರ

ಬೆಂಗಳೂರು: ನಟ ದಿವಂಗತ ಪುನೀತ್‌ ರಾಜ್‌ಕುಮಾರ್‌ ಅವರ ಜನ್ಮದಿನ ಇಂದು (ಮಾರ್ಚ್‌ 17). ಪುನೀತ್‌ ಅವರ ನೆನಪಿನಲ್ಲಿ ರಾಜ್ಯ ಸರ್ಕಾರ ಘೋಷಿಸಿದಂತೆ ಇಂದು ‘ಸ್ಫೂರ್ತಿ ದಿನ’. ಸ್ಯಾಂಡಲ್‌ವುಡ್‌ನ ಪವರ್‌ಸ್ಟಾರ್‌ ಭೌತಿಕವಾಗಿ ನಮ್ಮ ನಡುವಿಲ್ಲದಿದ್ದರೂ ಅವರ ‘ಪವರ್’ ಇನ್ನೂ ಇದೆ. ಇದಕ್ಕೆ ಸಾಕ್ಷ್ಯ ಎಂಬಂತೆ ಚಂದನವನದ ಯಾವುದೇ ಕಾರ್ಯಕ್ರಮವಿರಲಿ ‘ಅಪ್ಪು’ ಎಂಬ ಪದವಿಲ್ಲದೆ ಆರಂಭವಾಗುವುದಿಲ್ಲ; ಕಂಠೀರವ ಸ್ಟುಡಿಯೊದಲ್ಲಿರುವ ಅವರ ಸಮಾಧಿ ಸ್ಥಳವಂತೂ ಅಭಿಮಾನಿಗಳಿಗೆ ದೇವಸ್ಥಾನದಂತಾಗಿದೆ. ಅಪ್ಪು ಅಗಲಿ ವರ್ಷ ಉರುಳಿದರೂ ಇಲ್ಲಿಗೆ ಆಗಮಿಸುವ ‘ಅಭಿಮಾನಿ ದೇವರು’ಗಳ ಸಂಖ್ಯೆ ಇಳಿಮುಖವಾಗಿಲ್ಲ.

ಪುನೀತ್ ಜನ್ಮದಿನದ ಪ್ರಯುಕ್ತ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸೇರಿದಂತೆ ಚಿತ್ರರಂಗದ ಗಣ್ಯರು ಶುಭಾಶಯ ತಿಳಿಸುತ್ತಿದ್ದಾರೆ.

‘ಅತಿ ಚಿಕ್ಕ ವಯಸ್ಸಿನಲ್ಲಿಯೇ ಅಗಾಧವಾದ ಸಾಧನೆಗೈದು, ಎಲ್ಲರಿಗೂ ಮಾದರಿಯಾಗಿರುವ ಪ್ರೀತಿಯ ಅಪ್ಪು, ಕರ್ನಾಟಕ ರತ್ನ ಪುನೀತ್ ರಾಜಕುಮಾರ್ ಅವರ ಜನ್ಮಸ್ಮರಣೆಯಂದು ಗೌರವಪೂರ್ವಕ ನಮನಗಳು. ‘ಅಪ್ಪು’ ಸದಾ ಅಜರಾಮರ’ ಎಂದು ಸಿಎಂ ಬಸವರಾಜ ಬೊಮ್ಮಾಯಿ ಟ್ವೀಟ್ ಮಾಡಿದ್ದಾರೆ.

‘ಪ್ರತಿಭಾವಂತ ನಟನಾಗಿ, ಹೃದಯವಂತ ಸಮಾಜ ಸೇವಕನಾಗಿ ಕೋಟ್ಯಂತರ ಜನರ ಮನಸ್ಸಿಗೆ ಮುದ ನೀಡಿದ, ಸರಳತೆ‌,‌ ಸಜ್ಜನಿಕೆ ಮತ್ತು ಮಾನವೀಯತೆಗೆ ಮತ್ತೊಂದು ಹೆಸರಾಗಿದ್ದ ‌ಕನ್ನಡಿಗರೆಲ್ಲರ ಮನೆ ಮಗ ಪ್ರೀತಿಯ ಅಪ್ಪು ಅವರನ್ನು ಅವರ ಜನ್ಮದಿನದಂದು ಗೌರವದಿಂದ ನೆನೆಯುತ್ತೇನೆ’ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.

‘ಪವರ್ ಸ್ಟಾರ್ ಉದಯಿಸಿದ ದಿನವಿಂದು. ಬಾಲನಟನಾಗಿ, ಗಾಯಕನಾಗಿ, ನಾಯಕನಾಗಿ ಕನ್ನಡಿಗರ ಮನೆ-ಮನಗಳನ್ನು ಆಳಿದ ಪುನೀತ್ ರಾಜ್‌ಕುಮಾರ್ ಅವರು ಕನ್ನಡ ಚಿತ್ರರಂಗಕ್ಕೆ ಸಲ್ಲಿಸಿದ ಸೇವೆ ಅಪಾರ. ಮರೆಯಾದ ಮಾಣಿಕ್ಯ ನಮ್ಮೆಲ್ಲರ ನೆನಪಲ್ಲಿ ಎಂದೆಂದಿಗೂ ಅಜರಾಮರ.‌ ಪ್ರೀತಿಯ ಅಪ್ಪು ಅವರ ಹುಟ್ಟುಹಬ್ಬದಂದು ಹೃದಯಾಂತರಾಳದ ನಮನಗಳು’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಟ್ವೀಟ್ ಮಾಡಿದ್ದಾರೆ.

‘ಕನ್ನಡ ಚಿತ್ರರಂಗದ ಪ್ರಖ್ಯಾತ ನಟರು, ಕರ್ನಾಟಕ ರತ್ನ, ಮರೆಯಲಾಗದ ಮಾಣಿಕ್ಯ ಡಾ.ಪುನೀತ್ ರಾಜ್‌ಕುಮಾರ್ ಅವರ ಜನ್ಮಜಯಂತಿಯಂದು ಅವರಿಗೆ ಗೌರವ ನಮನಗಳು. ಕನ್ನಡಿಗರ ಮನೆ-ಮನಸ್ಸುಗಳಲ್ಲಿ ಶಾಶ್ವತವಾಗಿ ನೆಲೆಸಿರುವ ಪುನೀತ್ ಅವರ ಕಲಾ ಕ್ಷೇತ್ರದಲ್ಲಿನ ಸಾಧನೆ, ಸಾಮಾಜಿಕ ಕಾರ್ಯ,‌ ನಗು ಹಾಗೂ ಜೀವನ ಪ್ರೀತಿ ಪ್ರತಿಯೊಬ್ಬರಿಗೂ ಸ್ಫೂರ್ತಿದಾಯಕ’ ಎಂದು ಆರೋಗ್ಯ ಸಚಿವ ಡಾ.ಕೆ ಸುಧಾಕರ್ ಟ್ವೀಟ್ ಮಾಡಿದ್ದಾರೆ.

‘ಕರುನಾಡಿನ ಮನೆ ಮಗ ಡಾ. ಪುನೀತ್‌ ರಾಜ್‌ಕುಮಾರ್‌ ಅವರ ಜನ್ಮ ಸ್ಮರಣೆಯಿಂದು. ನಿಷ್ಕಲ್ಮಶ ನಗು ಹಾಗೂ ನಿಸ್ವಾರ್ಥ ಸೇವೆಯ ಮೂಲಕ ಜನಮಾನಸದಲ್ಲಿ ಜೀವಂತವಾಗಿರುವ ನಮ್ಮೆಲ್ಲರ ಹೆಮ್ಮೆಯ ಅಪ್ಪು ಯುವಜನತೆಗೆ ಸದಾ ಸ್ಪೂರ್ತಿ’ ಎಂದು ಉನ್ನತ ಶಿಕ್ಷಣ ಸಚಿವ ಸಿ.ಎನ್‌. ಅಶ್ವತ್ಥನಾರಾಯಣ ಟ್ವೀಟ್ ಮಾಡಿದ್ದಾರೆ.

ಇವೆಲ್ಲವುಗಳ ನಡುವೆ ‘ಅಪ್ಪು’ವನ್ನು ಅಮರವಾಗಿಸುವ ಕಾರ್ಯಕ್ರಮಗಳನ್ನು ಅಭಿಮಾನಿಗಳು ಆಯೋಜಿಸುತ್ತಿದ್ದಾರೆ. ರಾಜ್ಯದ ಹಲವೆಡೆ ರಕ್ತದಾನ, ಅನ್ನದಾನವೇರ್ಪಡಿಸಿ, ನೇತ್ರದಾನದ ಪ್ರತಿಜ್ಞೆಯನ್ನು ಅಭಿಮಾನಿಗಳು ತೆಗೆದುಕೊಳ್ಳುತ್ತಿದ್ದಾರೆ. ‌

ಮಾರ್ಚ್‌ 17ರಂದು ಬಿಡುಗಡೆಯಾಗುತ್ತಿರುವ ‘ಕಬ್ಜ’ ಸಿನಿಮಾವನ್ನು ನಿರ್ದೇಶಕ ಆರ್‌.ಚಂದ್ರು ಅವರು ಪುನೀತ್‌ ರಾಜ್‌ಕುಮಾರ್‌ ಅವರಿಗೆ ಅರ್ಪಿಸಿದ್ದಾರೆ. ಜೊತೆಗೆ ಪಿಆರ್‌ಕೆ ಪ್ರೊಡಕ್ಷನ್ಸ್‌ನಡಿ, ಅಮೋಘವರ್ಷ ನಿರ್ದೇಶನದ ಪುನೀತ್‌ ಪಾಲ್ಗೊಂಡ ಡಾಕ್ಯೂಫಿಲಂ ‘ಗಂಧದಗುಡಿ’ ಇಂದು ಅಮೆಜಾನ್ ಪ್ರೈಮ್ ವಿಡಿಯೊದಲ್ಲಿ ಸ್ಟ್ರೀಮ್‌ ಆಗಲಿದೆ. ಬೆಂಗಳೂರಿನ ಗಾಂಧಿನಗರದಲ್ಲಿರುವ ಸಂತೋಷ್‌ ಚಿತ್ರಮಂದಿರದಲ್ಲಿ ಅಪ್ಪು ಅಭಿನಯದ ‘ಯುವರತ್ನ’ ಸಿನಿಮಾ ರಿರಿಲೀಸ್‌ ಆಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT