ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೃಥ್ವಿ ಅಂಬಾರ್‌ ಎಂದರೆ ‘ಭುವನಂ ಗಗನಂ’!

Last Updated 26 ಜೂನ್ 2022, 10:04 IST
ಅಕ್ಷರ ಗಾತ್ರ

‘ದಿಯಾ’ ಸಿನಿಮಾದ ‘ಆದಿ’ ಖ್ಯಾತಿಯ ನಟ ಪೃಥ್ವಿ ಅಂಬಾರ್‌ ಹಾಗೂ ‘ರತ್ನನ್‌ ಪ್ರಪಂಚ’ ಸಿನಿಮಾದ ‘ಉಡಾಳ್‌ ಬಾಬುರಾವ್‌’ ಖ್ಯಾತಿಯ ನಟ ಪ್ರಮೋದ್‌ ಜೊತೆಯಾಗಿ ತೆರೆ ಮೇಲೆ ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಸುದ್ದಿ ಗಾಂಧಿನಗರದಲ್ಲಿ ಕೆಲ ತಿಂಗಳ ಹಿಂದೆಯೇ ಹರಿದಾಡಿತ್ತು. ಇದೀಗ ಅವರಿಬ್ಬರೂ ಜೊತೆಯಾಗಿ ನಟಿಸುತ್ತಿರುವ ಸಿನಿಮಾ ಶೀರ್ಷಿಕೆ ಅನಾವರಣವಾಗಿದೆ. ‘ಭುವನಂ ಗಗನಂ’ ಎಂಬ ಸಿನಿಮಾ ಸೆಟ್ಟೇರಿದ್ದು, ಗಿರೀಶ್ ಮೂಲಿಮನಿ ಚಿತ್ರಕ್ಕೆ ಆ್ಯಕ್ಷನ್‌ ಕಟ್‌ ಹೇಳುತ್ತಿದ್ದಾರೆ.

ಎಂ. ಮುನೇಗೌಡ ಸಾರಥ್ಯದ ಎಸ್‌ವಿಸಿ ಫಿಲ್ಮ್ಸ್‌ನ ಚೊಚ್ಚಲ ಚಿತ್ರ ಇದಾಗಿದ್ದು, ಬೆಂಗಳೂರಿನ ಕಂಠೀರವ ಸ್ಟುಡಿಯೊದಲ್ಲಿ ಇತ್ತೀಚೆಗೆ ಚಿತ್ರದ ಮುಹೂರ್ತ ನಡೆಯಿತು. ‘ರಾಜರು’ ಎಂಬ ಚಿತ್ರ ನಿರ್ದೇಶನ ಮಾಡಿದ್ದ ಗಿರೀಶ್‌ ಅವರೇ ‘ಭುವನಂ ಗಗನಂ’ ಸಿನಿಮಾಗೆ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ.

ಚಿತ್ರದ ಕಥೆಯ ಕುರಿತು ಮಾತನಾಡಿದ ಪ್ರಮೋದ್‌, ‘ಕ್ಲಾಸ್ ಲವ್‌ಸ್ಟೋರಿ ಕಥೆ ಹೊಂದಿರುವ ಸಿನಿಮಾ ಹುಡುಕುತ್ತಿದ್ದೆ. ಈ ಕಥೆ ಕೇಳಿ ಇಷ್ಟವಾಯಿತು. ಈ ಸಿನಿಮಾದಲ್ಲಿ ನಾನು ಬೇರೆ ರೀತಿಯೇ ಕಾಣಿಸುತ್ತೇನೆ. ಇಡೀ ಸಿನಿಮಾ ನನಗೆ ಬೇರೆಯೇ ಗುರುತು ನೀಡಲಿದೆ ಎನ್ನುವ ನಂಬಿಕೆಯ ಮೇಲೆ ಈ ಸಿನಿಮಾ ಒಪ್ಪಿಕೊಂಡಿದ್ದೇನೆ’ ಎಂದರು.

‘ಯಾವುದೇ ಸಿನಿಮಾವಾಗಲಿ, ಸಿನಿಮಾ ಬಗ್ಗೆ ಅತ್ಯುತ್ಸಾಹವಿರುವ ನಿರ್ಮಾಪಕರು, ನಿರ್ದೇಶಕರು ಬೇಕು. ಅಂಥ ತಂಡ ಇದಾಗಿದೆ. ಚಿತ್ರದ ಶೀರ್ಷಿಕೆ ನನಗೆ ಬಹಳ ಇಷ್ಟವಾಯ್ತು. ನನ ಹೆಸರಿನ ಅರ್ಥ ಕೂಡ ‘ಭುವನಂ ಗಗನಂ’. ಕಥೆ ಕೇಳಿದಾಗ ನನಗೆ ಬಹಳ ಕನೆಕ್ಟ್ ಆಗಿತ್ತು. ಪ್ರಮೋದ್ ಒಬ್ಬರು ಅದ್ಭುತ ಕಲಾವಿದ’ ಎಂದರು ಪೃಥ್ವಿ ಅಂಬಾರ್‌.

‘ಭುವನಂ ಗಗನಂ’ ಸಿನಿಮಾ ಲವ್, ರೊಮ್ಯಾನ್ಸ್, ಕೌಟುಂಬಿಕ ಕಥಾಹಂದರದ ಸಿನಿಮಾವಾಗಿದ್ದು, ನಗರ, ಹಳ್ಳಿ ಎರಡೂ ಬ್ಯಾಕ್‌ಡ್ರಾಪ್‌ನಲ್ಲಿ ನಡೆಯುವ ಕಥೆಯಾಗಿದೆ. ಪ್ರಮೋದ್‌ಗೆ ಜೋಡಿಯಾಗಿ ‘ಲವ್ ಮಾಕ್ಟೇಲ್’ ಖ್ಯಾತಿಯ ರೆಚೆಲ್ ಡೇವಿಡ್, ಪೃಥ್ವಿಗೆ ಜೋಡಿಯಾಗಿ ‘ವಾಮನ’ ಸಿನಿಮಾದ ನಾಯಕಿ ರಚನಾ ರೈ ನಟಿಸುತ್ತಿದ್ದಾರೆ. ಜುಲೈ 1ರಿಂದ ಸಿನಿಮಾದ ಶೂಟಿಂಗ್ ಆರಂಭವಾಗಲಿದ್ದು, ಅಚ್ಯುತ್ ಕುಮಾರ್, ಶರತ್ ಲೋಹಿತಾಶ್ವ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಸುಜಯ್ ಕುಮಾರ್ ಬಾವಿಕಟ್ಟಿ ಛಾಯಾಗ್ರಹಣ, ಗುಮ್ಮಿನೇನಿ ವಿಜಯ್ ಸಂಗೀತ ನಿರ್ದೇಶನ ಹಾಗೂ ಸುನೀಲ್ ಕಶ್ಯಪ್ ಸಂಕಲನ ಚಿತ್ರಕ್ಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT