‘ಗೋವಿಂದ ಗೋವಿಂದ’ ತಿಲಕ್ ನಿರ್ದೇಶನದ ಚಿತ್ರ. ಕಿರುತೆರೆಯಲ್ಲಿ ಹಲವು ಧಾರಾವಾಹಿಗಳಿಗೆ ಆ್ಯಕ್ಷನ್ ಕಟ್ ಹೇಳಿರುವ ಅವರಿಗೆ ಹಿರಿತೆರೆಯ ನಿರ್ದೇಶನ ಹೊಸದು. ಸುಮಂತ್ ಶೈಲೇಂದ್ರ ಇದರ ನಾಯಕ. ಹೀರೊ ಆಗಿ ಅವರಿಗೆ ಇದು ಏಳನೇ ಚಿತ್ರ. ಇದರಲ್ಲಿ ಅವರದು ಅನುತ್ತೀರ್ಣಗೊಂಡ ಪ್ರಥಮ ಪಿಯುಸಿ ವಿದ್ಯಾರ್ಥಿಯ ಪಾತ್ರವಂತೆ.
‘ಹುಂಡಿ ನಮ್ದು ಕಾಸು ನಿಮ್ದು’ ಎಂಬ ಅಡಿಬರಹದ ಮೂಲಕ ಚಿತ್ರತಂಡ ಕಾಮಿಡಿ ಕಥೆ ಹೇಳಲು ಹೊರಟಿದೆ. ಅದು ಹುಡುಗರ ಗುಂಪು. ಜೀವನದಲ್ಲಿ ಅವರಿಗೆ ಗುರಿ ಎಂಬುದೇ ಇರುವುದಿಲ್ಲ. ನಾಯಕಿಯನ್ನು ಡಾನ್ಸರ್ ಮಾಡಬೇಕೆಂಬುದು ಅವರ ಕನಸು. ಆಕೆಯನ್ನು ಅಪಹರಿಸಿ ಅವಳ ತಂದೆಯಿಂದ ಹಣ ಪಡೆದು ನಗರಕ್ಕೆ ಕಳುಹಿಸುವ ಯೋಜನೆ ಅವರದು. ಆದರೆ, ದುಷ್ಕರ್ಮಿಗಳು ಆಕೆಯನ್ನು ಅಪಹರಿಸುತ್ತಾರೆ. ಆಕೆಯ ಬಿಡುಗಡೆಗೆ ಹೇಗೆಲ್ಲಾ ಹಣ ಹೊಂದಿಸುತ್ತಾರೆ ಎನ್ನುವುದು ಈ ಚಿತ್ರದ ಹೂರಣ.
ಈಗಾಗಲೇ, ಸಿನಿಮಾದ ಮುಕ್ಕಾಲು ಭಾಗದಷ್ಟು ಚಿತ್ರೀಕರಣ ಪೂರ್ಣಗೊಂಡಿದೆ. ವಿಜಯಪುರ, ಚಿಂತಾಮಣಿ ಮತ್ತು ಬೆಂಗಳೂರಿನಲ್ಲಿ ಶೂಟಿಂಗ್ ನಡೆಸಲಾಗಿದೆ. ಶೀಘ್ರವೇ, ಎರಡು ಹಾಡುಗಳ ಚಿತ್ರೀಕರಣಕ್ಕೆ ಚಿತ್ರತಂಡ ಸಿದ್ಧತೆ ನಡೆಸಿದೆ.
ಕವಿತಾ ಗೌಡ ಈ ಚಿತ್ರದ ನಾಯಕಿ. ನಾಲ್ಕು ಹಾಡುಗಳಿಗೆ ಹಿತನ್ ಹಾಸನ್ ಸಂಗೀತ ಸಂಯೋಜಿಸಿದ್ದಾರೆ. ಕೆ.ಎಸ್. ಚಂದ್ರಶೇಖರ್ ಅವರಛಾಯಾಗ್ರಹಣವಿದೆ. ಸಂಕಲನ ಸಿ. ರವಿಚಂದ್ರನ್ ಅವರದು. ಥ್ರಿಲ್ಲರ್ ಮಂಜು ಸಾಹಸ ಸಂಯೋಜಿಸಿದ್ದಾರೆ. ಮೊದಲ ಬಾರಿಗೆ ಎಸ್. ಶೈಲೇಂದ್ರಬಾಬು ಪಾಲುದಾರಿಕೆಯಲ್ಲಿ ಬಂಡವಾಳ ಹೂಡಿದ್ದಾರೆ. ಅವರೊಟ್ಟಿಗೆ ರವಿ ಆರ್. ಗರಣಿ ಮತ್ತು ಕಿಶೋರ್ ಎಂ.ಕೆ. ಮಧುಗಿರಿ ಕೈಜೋಡಿಸಿದ್ದಾರೆ.