ಬಾಲಿವುಡ್ನಲ್ಲಿ ‘ಜೋಧಾ ಅಕ್ಬರ್’, ‘ಬಾಜೀರಾವ್ ಮಸ್ತಾನಿ’, ‘ಪದ್ಮಾವತ್’ನಂತಹ ಸಾಲು ಸಾಲು ಐತಿಹಾಸಿಕ ಸಿನಿಮಾಗಳು ಬರುತ್ತಲೇ ಇವೆ. ಇವುಸಿನಿಪ್ರಿಯರ ರಂಜಿಸುವಲ್ಲಿ ಕೂಡ ಸಫಲವಾಗುತ್ತಿವೆ. ಆದ್ರೆ ಅರ್ಜುನ್ ಕಪೂರ್ ಅಭಿನಯದ‘ಪಾಣಿಪತ್’ ಚಿತ್ರಕ್ಕೆ ನಿರೀಕ್ಷಿಸಿದಷ್ಟು ಮೆಚ್ಚುಗೆ ಸಿಗುತ್ತಿಲ್ಲ. ಬಾಕ್ಸ್ ಆಫೀಸ್ನಲ್ಲೂ ಉತ್ತಮ ಗಳಿಕೆ ಲಕ್ಷಣಗಳು ಕಾಣುತ್ತಿಲ್ಲ. ಈಗ ಈ ಚಿತ್ರಕ್ಕೆ ರಾಜಸ್ತಾನದ ರಾಜ ಸೂರಜ್ಮಲ್ ವಿವಾದ ಕಂಟಕವಾಗಿ ಪರಿಣಮಿಸಿದೆ.
ಅಶುತೋಷ್ ಗಾವರಿಕರ್ ನಿರ್ದೇಶನದ ‘ಪಾಣಿಪತ್’ ಸಿನಿಮಾದಲ್ಲಿ ಘಟನೆಗಳನ್ನು ತಪ್ಪಾಗಿ ತೋರಿಸಲಾಗಿದೆ ಎಂದು ಪ್ರೇಕ್ಷಕರು ರೊಚ್ಚಿಗೆದ್ದಿದ್ದಾರೆ. ಸಿನಿಮಾದಲ್ಲಿ ರಾಜಸ್ತಾನದ ಮಹಾರಾಜ ಸೂರಜ್ಮಲ್ ಒಬ್ಬ ದುರಾಸೆಯುಳ್ಳ ರಾಜ ಎಂದು ಬಿಂಬಿಸಲಾಗಿದೆ. ನೈಜವಾಗಿ ಸೂರಜ್ಮಲ್ ಹಾಗಿರಲಿಲ್ಲ ಎಂದು ವಿರೋಧ ಕೇಳಿಬಂದಿದೆ.
ಮರಾಠ ರಾಜ ಸದಾಶಿವ ರಾವ್ ಬಾವ್ (ಅರ್ಜುನ್ ಕಪೂರ್), ಅಫ್ಘಾನಿಯರ ವಿರುದ್ಧ ಹೋರಾಡಲು ರಾಜ ಸೂರಜ್ಮಲ್ರಿಂದ ನೆರವು ಯಾಚಿಸಿದ್ದರಂತೆ. ಸೂರಜ್ಮಲ್ ಈ ಸಹಾಯದ ಬದಲಿಗೆ ಆಗ್ರಾ ಕೋಟೆ ಕೇಳಿದ್ದರು. ಸೂರಜ್ಮಲ್ ಬೇಡಿಕೆಯನ್ನು ಸದಾಶಿವರಾವ್ ಪೂರೈಸದ ಕಾರಣ, ಸೂರಜ್ಮಲ್ ಸಹಾಯ ನೀಡಲಿಲ್ಲ ಎಂದು ಸಿನಿಮಾದಲ್ಲಿ ಬಿಂಬಿಸಲಾಗಿದೆ ಎನ್ನಲಾಗಿದೆ. ಆದ್ರೆ ಇದು ಸತ್ಯ ಘಟನೆಯಲ್ಲ ಎಂಬುದು ಪ್ರತಿಭಟನಕಾರರ ವಾದ.
ಇದನ್ನೂ ಓದಿ:‘ಪಾಣಿಪತ್’ ಚಿತ್ರದ ವಿರುದ್ಧ ಪ್ರತಿಭಟನೆ
ಈ ಹಿಂದೆ ಸಂಜಯ್ಲೀಲಾ ಬನ್ಸಾಲಿಯ ‘ಪದ್ಮಾವತ್’ ಸಿನಿಮಾಕ್ಕೂ ರಜಪೂತರಿಂದ ಭಾರೀ ವಿರೋಧ ವ್ಯಕ್ತವಾಗಿತ್ತು. ಅಂದಿನ ಮಹಾರಾಜರು ಭ್ರಜ್ ಭಾಷೆ ಬಳಸುತ್ತಿದ್ದರು. ಆದ್ರೆಚಿತ್ರದಲ್ಲಿ ರಾಜಸ್ತಾನಿ ಮತ್ತು ಹರಿಯಾಣ್ವಿ ಭಾಷೆಗಳನ್ನು ಹೆಚ್ಚಾಗಿ ಬಳಸಲಾಗಿದೆ ಎಂದು ಪ್ರತಿಭಟನಕಾರರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಒಂದೆಡೆ ರಾಜಸ್ತಾನದಲ್ಲಿ ಪ್ರತಿಭಟನೆಗಳ ಮೂಲಕ ಜನರು ಆಕ್ಷೇಪ ವ್ಯಕ್ತಪಡಿಸುತ್ತಿದ್ರೆ, ಇತ್ತ ಸಾಮಾಜಿಕ ಜಾಲತಾಣದಲ್ಲೂ #boycottpanipat ಎಂಬ ಚಳುವಳಿ ಆರಂಭವಾಗಿದೆ. ಇದರ ಮಧ್ಯೆ ಕೆಲವರು ಸಿನಿಮಾದಲ್ಲಿ ತೋರಿಸಿರುವ ಕೆಲವೊಂದು ದೃಶ್ಯಗಳಲ್ಲಿ ಬದಲಾವಣೆ ತರಲು ಒತ್ತಾಯಿಸಿದ್ದಾರೆ.#boycottpanipat ಭಾರತದಲ್ಲಿ ಟ್ರೆಂಡ್ ಆಗುತ್ತಿದ್ದಂತೆ, ಪಾಣಿಪತ್ ಸಿನಿಮಾದ ಬೆಂಬಲಿಗರು,#whyboycottpanipat ಎಂಬ ಟ್ರೆಂಟ್ ಮೂಲಕ ಪ್ರತಿಭಟನಕಾರರಲ್ಲಿ ಪ್ರಶ್ನೆ ಕೇಳಿದ್ದಾರೆ.
ಪಾಣಿಪತ್ ಸಿನಿಮಾವು ಮರಾಠ ಹಾಗೂ ಮೊಘಲರ ನಡುವೆ ನಡೆದಐತಿಹಾಸಿಕ ಪಾಣಿಪತ್ ಕದನದ ಮೇಲೆ ಆಧಾರಿತವಾಗಿದೆ. ಚಿತ್ರದಲ್ಲಿ ಅರ್ಜುನ್ ಕಪೂರ್, ಕೃತಿ ಸನಾನ್, ಸಂಜಯ್ ದತ್, ಪದ್ಮಿನಿ ಕೊಲ್ಹಾಪುರೆ, ನವಾಬ್ ಷಾ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.