ಯುವ ಸಿನಿಮೋತ್ಸಾಹಿಗಳ ತಂಡವೊಂದು ಸೇರಿ ಮಾಡಿರುವ ‘ಬನ್ ಟೀ’ ಸಿನಿಮಾದ ಟ್ರೈಲರ್ ಬಿಡುಗಡೆಯಾಗಿದೆ. ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಟ್ರೈಲರ್ ಬಿಡುಗಡೆ ಮಾಡಿದರು. ಆನ್ ಲೈನ್ ಎಡಿಟರ್ ಆಗಿ ಗುರುತಿಸಿಕೊಂಡಿರುವ, ಖಾಕಿ ಸಿನಿಮಾ ಬರಹಗಾರರಲ್ಲೊಬ್ಬರಾಗಿದ್ದ ಉದಯ್ ಕುಮಾರ್ ಪಿ.ಎಸ್. ಅವರ ನಿರ್ದೇಶನದ ಎರಡನೇ ಚಿತ್ರವಿದು.
ನಾಗತಿಹಳ್ಳಿ ಮಾತನಾಡಿ, ‘ಉದಯ್ ಹೇಳಿದ ಕಥೆ ಇಷ್ಟವಾಯಿತು. ಹಂಚಿ ತಿನ್ನುವ ಅಗತ್ಯವಿರುವ ಈ ದಿನಗಳಲ್ಲಿ ಹಂಚಿ ಉಣ್ಣದೇ ಬರೀ ಬಾಚಿಕೊಳ್ಳುವ ಮನಸ್ಥಿತಿ, ಅದರಿಂದ ಉಂಟಾಗುವ ಸಾಮಾಜಿಕ ತೊಂದರೆಗಳ ಸುತ್ತ ಕಥೆ ಸಾಗುತ್ತದೆ. ಉದಯ್ ನಿರ್ಮಾಪಕರು ಸಿಗುತ್ತಾರೆ ಅನ್ನುತ್ತಾ ಫ್ಯಾಷನ್ಗಾಗಿ ಸಿನಿಮಾ ಮಾಡಿಲ್ಲ. ಆಳವಾಗಿ ತಾಂತ್ರಿಕವಾಗಿ ಅರಿತು ಚಿತ್ರ ಮಾಡಿದ್ದಾರೆ. ತಮ್ಮದೇ ಟೆಂಟ್ ಸಿನಿಮಾ ಸೂಲ್ಕ್ ಪ್ರತಿಭೆಗಳು ಸೇರಿ ‘ಬನ್ ಟೀ’ ಚಿತ್ರ ಮಾಡಿದೆ ಎಂದು ಖುಷಿ ವ್ಯಕ್ತಪಡಿಸಿದರು.
ನಿರ್ದೇಶಕ ಉದಯ್ ಮಾತನಾಡಿ, ‘ಸಿನಿಮಾ ಅವಕಾಶಕ್ಕಾಗಿ ಗಾಂಧಿನಗರ ಸುತ್ತುವಾಗ ‘ಬನ್ ಟೀ’ ನಮ್ಮ ಊಟವಾಗಿತ್ತು. ಶೀರ್ಷಿಕೆ ವಿಭಿನ್ನವಾಗಿದೆ. ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದೆ. ಕಷ್ಟಪಟ್ಟು ಓದು ಅನ್ನುವ ಬದಲು ಇಟ್ಟಪಟ್ಟು ಓದು ಅನ್ನುವುದನ್ನು ಯಾಕೆ ಹೇಳುವುದಿಲ್ಲ ಎಂಬುದೇ ಚಿತ್ರದ ಒಟ್ಟಾರೆ ಸಾರಾಂಶ’ ಎಂದರು.
ಮೌರ್ಯ, ತನ್ಮಯ್, ಉಮೇಶ್ ಸಕ್ಕರೆನಾಡು, ಶ್ರೀದೇವಿ, ನಿಶಾ, ಗುಂಡಣ್ಣ, ಸುನಿಲ್ ನಟಿಸಿರುವ ಈ ಚಿತ್ರಕ್ಕೆ ರಾಧಾಕೃಷ್ಣ ಬ್ಯಾನರ್ ಆರ್. ಕೇಶವ ನಿರ್ಮಾಣ ಮಾಡಿದ್ದು, ರಾಜರಾವ್ ಅಂಚಲ್ಕರ್ ಕ್ಯಾಮೆರಾ, ಪ್ರದ್ಯೋತನ್ ಸಂಗೀತ ಸಿನಿಮಾಕ್ಕಿದೆ. ಪ್ರಾಮಿಸಿಂಗ್ ಟ್ರೇಲರ್ ಮೂಲಕ ನಿರೀಕ್ಷೆ ಹೆಚ್ಚಿಸಿರುವ ಬನ್ ಟೀ ಸಿನಿಮಾವನ್ನು ಏಪ್ರಿಲ್ ತಿಂಗಳಾಂತ್ಯಕ್ಕೆ ತೆರೆಗೆ ತರುವ ಪ್ರಯತ್ನದಲ್ಲಿದೆ ಚಿತ್ರತಂಡ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.