ಪಝಲ್ ಆಟದಂತೆ ಕಲಾವಿದರು ಎಲ್ಲವನ್ನು ಜೋಡಿಸಿದಾಗ ಪವರ್ಸ್ಟಾರ್ ಪುನೀತ್ ರಾಜ್ಕುಮಾರ್ ಭಾವಚಿತ್ರ ಮೂಡಿಬಂತು. ನಂತರ ಅದನ್ನು ತಿರುಗಿಸಿದಾಗ ’ದಂಡತೀರ್ಥ’ ಚಿತ್ರದ ಶೀರ್ಷಿಕೆ ಅನಾವರಣಗೊಂಡಿತು.
ಸುಮಾರು 78 ಚಿತ್ರಗಳಿಗೆ ನಿರ್ದೇಶನ ವಿಭಾಗದಲ್ಲಿ ಕೆಲಸ ಮಾಡಿರುವ ಹರಿಪ್ರಾಣ ಮೊದಲ ಅನುಭವ ಎನ್ನುವಂತೆ ‘ಪ್ರಾಣ ಪ್ರೊಡಕ್ಷನ್’ ಸಂಸ್ಥೆ ಹುಟ್ಟುಹಾಕಿ ಹೊಸ ಪ್ರತಿಭೆಗಳಿಗೆ ಅವಕಾಶ ಮಾಡಿಕೊಡುತ್ತಿದ್ದಾರೆ. ಇದರ ಸಲುವಾಗಿ ಸಿನಿಮಾಕ್ಕೆ ಕಥೆ, ಚಿತ್ರಕಥೆ ಬರೆದು ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಇವರ ಶ್ರಮಕ್ಕೆ ಉಮೇಶ್ ಬಂಡವಾಳ ಹೂಡುತ್ತಿದ್ದಾರೆ.
ವಿಷಯಕ್ಕೆ ಸಂಬಂಧಪಟ್ಟಂತೆ ಮಾತನಾಡಿದ ನಿರ್ದೇಶಕರು, ‘ದಂಡ ಎಂದರೆ ಶಿಕ್ಷೆ. ತೀರ್ಥಕ್ಕೆ ಪ್ರಸಾದ ಎನ್ನುವುದುಂಟು. ಆಂಜನೇಯನ ಭಕ್ತನಿಗೆ ಮತ್ತು ಮಾರುತಿಗೆ ಮತ್ತೊಂದು ಹೆಸರು ಇದೇ ಆಗಿರುತ್ತದೆ. ಮೊದಲರ್ಧ ನೈಜ ಘಟನೆಯಲ್ಲಿ ಕಾಮಿಡಿ, ಉಳಿದದ್ದು ಕಾಲ್ಪನಿಕವಾಗಿ ರಿವೆಂಜ್ ಸ್ಟೋರಿಯಲ್ಲಿ ಸಾಗುತ್ತದೆ’ ಎಂದರು.
‘ಪ್ರಾಣ ಆಡಿಯೊ’ ಮುಂದಿನ ದಿನಗಳಲ್ಲಿ ಶುರು ಮಾಡಲಾಗುತ್ತಿದೆ. ಹಾಗೂ ‘ಪ್ರಾಣ ಎಂಟರ್ಟೈನ್ಮೆಂಟ್’ ಮೂಲಕ ರಾಜ್ಯದಾದ್ಯಂತ ಡ್ಯಾನ್ಸರ್, ಗಾಯಕರಿಗೆ ವೇದಿಕೆ ಕಲ್ಪಿಸಲು ರಿಯಾಲಿಟಿ ಷೋ ನಡೆಸಲಾಗುವುದು. ಇದರಲ್ಲಿ ಗೆದ್ದ ಮೂವರಿಗೆ ಬಹುಮಾನ ನೀಡಿ, ಚಿತ್ರಗಳಿಗೆ ಇವರ ಹೆಸರನ್ನು ಶಿಫಾರಸು ಮಾಡಲಾಗುತ್ತದೆ ಎಂಬುದರ ಮಾಹಿತಿ ನೀಡಿದರು.
ತಾರಾಗಣದಲ್ಲಿ ಅವಿನಾಶ್(ಜ್ಯೂ.ದರ್ಶನ್), ರಜನಿಕಾಂತ್, ರೇಣುಕಪ್ರಸಾದ್, ಕುರಿಪ್ರತಾಪ್, ಚಂದ್ರಪ್ರಭ, ಜ್ಯೋತಿ, ದೇವು ಸಕಲೇಶಪುರ, ಖಳನಾಗಿ ಪುನೀತ್ ಮತ್ತು ಶರಣ್, ಬೇಬಿ ಶಾನ್ವಿ ನಾಯಕಿಯರಾಗಿ ಮಾನಸಗೌಡ, ಪೂಜರಾಮಚಂದ್ರ ಮುಂತಾದವರು ನಟಿಸುತ್ತಿದ್ದಾರೆ.
ಛಾಯಾಗ್ರಹಣ ಜಿ.ರಂಗಸ್ವಾಮಿ, ನೃತ್ಯ ಜಿ.ಪಿ.ಆರಾಧ್ಯ, ಕಾರ್ಯಕಾರಿ ನಿರ್ಮಾಪಕ ವಿಜಯ್, ವಸ್ತ್ರ ವಿನ್ಯಾಸ ಲೇಖನ ಅವರದ್ದಾಗಿದೆ.