‘ಮಾಸ್ಟರ್ ಪೀಸ್’ ಚಿತ್ರ ತೆರೆಕಂಡಿದ್ದು ನಾಲ್ಕು ವರ್ಷದ ಹಿಂದೆ. ಯಶ್ ನಟನೆಯ ಈ ಸಿನಿಮಾ ನಿರ್ದೇಶಿಸಿದ್ದು ಮಂಜು ಮಾಂಡವ್ಯ. ಆ ನಂತರ ಕೆಲವು ವರ್ಷಗಳವರೆಗೆ ಅವರು ನಿರ್ದೇಶನದಿಂದ ದೂರ ಉಳಿದಿದ್ದರು. ಬಳಿಕ ಅವರು ನಿರ್ದೇಶಕನ ಟೊಪ್ಪಿಗೆ ಧರಿಸಿದ್ದು ‘ಶ್ರೀಭರತ ಬಾಹುಬಲಿ’ ಚಿತ್ರದ ಮೂಲಕ. ಇದೇ ಶುಕ್ರವಾರ ಈ ಚಿತ್ರ ಬಿಡುಗಡೆಯಾಗುತ್ತಿದೆ. ಜೊತೆಗೆ, ನಾಯಕನಾಗಿಯೂ ಅವರು ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.
ಕಥೆ, ಚಿತ್ರಕಥೆ, ಸಂಭಾಷಣೆಯನ್ನು ಅವರೇ ನಿಭಾಯಿಸಿದ್ದಾರೆ. ಐದು ಹಾಡುಗಳಿಗೆ ಸಾಹಿತ್ಯ ಕೂಡ ರಚಿಸಿದ್ದಾರೆ. ಚಿತ್ರದಲ್ಲಿ ಮಂಜು ಮಾಂಡವ್ಯ ಅವರದು ಭರತನ ಪಾತ್ರ. ಹಾಸ್ಯನಟ ಚಿಕ್ಕಣ್ಣ ಬಾಹುಬಲಿಯಾಗಿ ಕಾಣಿಸಿಕೊಂಡಿದ್ದಾರೆ. ಸಾರಾ ಹರೀಶ್ ಹಾಗೂ ಶ್ರೇಯಾ ಶೆಟ್ಟಿ ನಾಯಕಿಯರು. ಇದರಲ್ಲಿ ಯುವಜನರ ತ್ಯಾಗ ಮತ್ತು ಹೊಂದಾಣಿಕೆಯ ಸುತ್ತ ಕಥೆ ಹೊಸೆಯಲಾಗಿದೆ. ನವಿರು ಪ್ರೀತಿಯ ಕಥೆಯೂ ಇದೆಯಂತೆ. ತ್ಯಾಗವೇ ಈ ಸಿನಿಮಾದ ತಿರುಳು. ತ್ಯಾಗದ ವಿಷಯ ಬಂದಾಗ ಯುವಜನತೆಯ ವರ್ತನೆ ಹೇಗಿರುತ್ತದೆ ಎಂದು ಹೇಳಲು ಚಿತ್ರತಂಡ ಹೊರಟಿದೆ. ಇದಕ್ಕೆ ಕಾಮಿಡಿಯ ಸ್ಪರ್ಶ ನೀಡಿದ್ದಾರಂತೆ. ಚಿತ್ರದ ಪ್ರಾರಂಭದ ಕಥೆಗೆ ನಟ ಉಪೇಂದ್ರ ಅವರ ಮುನ್ನುಡಿ ಇದೆ.
ಪ್ರೇಕ್ಷಕರಿಗೆ ಬಹುಮಾನ
ಪ್ರಸ್ತುತ ಕನ್ನಡದಲ್ಲಿಯೇ ವಾರಕ್ಕೆ ಐದಾರು ಚಿತ್ರಗಳು ತೆರೆ ಕಾಣುತ್ತಿವೆ. ಜೊತೆಗೆ, ಪರಭಾಷೆಯ ಸಿನಿಮಾಗಳೊಟ್ಟಿಗೆ ಪೈಪೋಟಿಗೂ ಇಳಿಯಬೇಕಿದೆ. ಇದರಿಂದ ಕನ್ನಡ ಸಿನಿಮಾಗಳಿಗೆ ಪ್ರೇಕ್ಷಕರ ಕೊರತೆ ಕಾಣುತ್ತಿದೆ. ಹಾಗಾಗಿ, ಚಿತ್ರಮಂದಿರದತ್ತ ಪ್ರೇಕ್ಷಕರನ್ನು ಸೆಳೆಯಲು ಚಿತ್ರತಂಡ ವಿನೂತನ ಪ್ರಯೋಗಕ್ಕೆ ಮುಂದಾಗಿದೆ.
ಸಿನಿಮಾ ವೀಕ್ಷಿಸಲು ಚಿತ್ರಮಂದಿರಕ್ಕೆ ಬರುವ ಜನರಿಗೆ ₹ 1 ಕೋಟಿ ಬಹುಮಾನ ನೀಡಲಿದೆ. ಪ್ರತಿಯೊಬ್ಬರಿಗೂ ಟಿಕೆಟ್ ಜೊತೆಗೆ ಕೂಪನ್ ನೀಡಲಾಗುತ್ತದೆ. ಎರಡು ವಾರದವರೆಗೆ ಕೂಪನ್ ವಿತರಿಸಲು ವ್ಯವಸ್ಥೆ ಮಾಡಲಾಗಿದೆ. ನಂತರ ಲಾಟರಿ ಮೂಲಕ ಆಯ್ಕೆಯಾಗುವ ಇಪ್ಪತ್ತು ಮಂದಿಗೆ 10 ಕಾರು ಮತ್ತು ಚಿನ್ನ ನೀಡಲಿದೆ.
ಇದನ್ನೂ ಓದಿ:ಕಾಫಿತೋಟದ ಚೆಲುವೆ 'ಶ್ರೀ ಭರತ ಬಾಹುಬಲಿ'ಗೆ ನಾಯಕಿ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.