ಬಾಲಿವುಡ್ನಲ್ಲಿ ಈಗಾಗಲೇ ಅದೃಷ್ಟ ಪರೀಕ್ಷೆ ಮಾಡಿಕೊಂಡಿರುವ ನಟ ದಿಗಂತ್ ಅವರು ಈಗ ವಿಜಯ್ ದೇವರಕೊಂಡ ಜೊತೆಗಿನ ತಮ್ಮ ತೆಲುಗು ಸಿನಿಮಾ ಹೇಗೆ ಮೂಡಿಬರಲಿದೆ ಎಂಬ ಕಾತರದಲ್ಲಿ ಇದ್ದಾರೆ.
ವಿಜಯ್ ಜೊತೆ ದಿಗಂತ್ ಅವರು ‘ಹೀರೊ’ ಎನ್ನುವ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಇದರ ಹದಿನೈದು ದಿನಗಳ ಶೂಟಿಂಗ್ ಕೆಲಸ ಮುಗಿದಿದೆ. ಆದರೆ, ಅದಾದ ನಂತರ ದಿನಾಂಕ ಹೊಂದಾಣಿಕೆ ಆಗದೆ ಚಿತ್ರೀಕರಣ ನಿಂತಿತ್ತು. ಆಮೇಲೆ, ಕೊರೊನಾ ಲಾಕ್ಡೌನ್ ಕೂಡ ಜಾರಿಗೆ ಬಂತು. ಹೀಗಾಗಿ ಈಗ ಚಿತ್ರೀಕರಣವು ಸ್ಥಗಿತವಾಗಿದೆ.
ಈ ಚಿತ್ರವು ತೆಲುಗಿನಲ್ಲಿ ಮಾತ್ರ ಬಿಡುಗಡೆ ಆಗಲಿದೆ ಎಂಬ ಸುದ್ದಿ ಇದೆ. ಈ ಚಿತ್ರದ ಚಿತ್ರೀಕರಣ ಪೂರ್ಣಗೊಳ್ಳಲು ಇನ್ನೂ 85 ದಿನಗಳ ಅಗತ್ಯವಿದೆ ಎಂಬ ಅಂದಾಜಿದೆ.
ಇದರ ಜೊತೆಯಲ್ಲೇ, ಬಾಲಿವುಡ್ನಲ್ಲಿ ಇನ್ನೊಂದು ಸಿನಿಮಾದಲ್ಲಿ ದಿಗಂತ್ ಅಭಿನಯಿಸಿದ್ದು ಅದರ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಸಾಗಿವೆ. ‘ಇದರ ಹೆಸರು ರಾಮ್ಯುಗ್. ಇದು ಪೌರಾಣಿಕ ಸಿನಿಮಾ. ನನ್ನದು ಇದರಲ್ಲಿ ರಾಮನ ಪಾತ್ರ’ ಎಂದರು ದಿಗಂತ್. ‘ಫನಾ’ದಂತಹ ಹಿಟ್ ಚಿತ್ರಗಳನ್ನು ನೀಡಿದ್ದ ಕುನಾಲ್ ಕೊಹ್ಲಿ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಅಂದಹಾಗೆ, ಇದು ದಿಗಂತ್ ಪಾಲಿಗೆ ಎರಡನೆಯ ಹಿಂದಿ ಸಿನಿಮಾ. ಮೊದಲನೆಯದು ‘ವೆಡ್ಡಿಂಗ್ ಪುಲಾವ್’.
ಲಾಕ್ಡೌನ್ ರಜೆಯನ್ನು ಕಳೆಯಲು ಪತ್ನಿ ಐಂದ್ರಿತಾ ರೇ ಅವರನ್ನು ತಮ್ಮ ಊರು ಮಂಚಾಲೆಗೆ (ಸಾಗರ ತಾಲ್ಲೂಕಿನ ಒಂದು ಹಳ್ಳಿ) ಕರೆದೊಯ್ಯುವ ಆಲೋಚನೆಯಲ್ಲಿ ಇದ್ದ ದಿಗಂತ್ ಅವರಿಗೆ ಅದು ಸಾಧ್ಯವಾಗಲೇ ಇಲ್ಲ. ಆದರೆ, ಈಗ ಲಾಕ್ಡೌನ್ ನಿಯಮಗಳು ಸಡಿಲವಾಗಿರುವ ಕಾರಣ, ಊರಿನ ಕಡೆ ಒಮ್ಮೆ ಮುಖ ಮಾಡಿ, ಬೆಂಗಳೂರಿಗೆ ವಾಪಸ್ಸಾಗುವ ಆಲೋಚನೆಯಲ್ಲಿ ಇದ್ದಾರೆ. ಐಂದ್ರಿತಾ ಅವರಿಗೆ ಮಂಚಾಲೆಯ ಪರಿಸರ ಬಹಳ ಇಷ್ಟವಂತೆ. ಹಾಗೆಯೇ, ಅಲ್ಲಿಗೆ ಸಮೀಪ ಇರುವ ಆಗುಂಬೆ ಸುತ್ತಮುತ್ತಲಿನ ವಾತಾವರಣವನ್ನು ಕೂಡ ಐಂದ್ರಿತಾ ಬಹಳ ಮೆಚ್ಚಿಕೊಂಡಿದ್ದಾರಂತೆ.
ಯೋಗರಾಜ ಭಟ್ ನಿರ್ದೇಶಿಸುತ್ತಿರುವ ‘ಗಾಳಿಪಟ–2’ ಚಿತ್ರದಲ್ಲಿನ ತಮ್ಮ ಪಾತ್ರ ಹೇಗಿರುತ್ತದೆ ಎಂಬುದರ ಮಾಹಿತಿ ನೀಡಲು ನಿರಾಕರಿಸಿದ ದಿಗಂತ್, ‘ಭಟ್ಟರನ್ನು ಕೇಳದೆ ಅದರ ಬಗ್ಗೆ ಏನೂ ಹೇಳಲಾರೆ’ ಎಂದರು.
ತಮ್ಮ ಇನ್ನೊಂದು ಸಿನಿಮಾ ‘ಮಾರಿಗೋಲ್ಡ್’ನ ಬಗ್ಗೆ ಒಂಚೂರು ಮಾಹಿತಿ ನೀಡಿದ ಅವರು, ‘ಚಿನ್ನವನ್ನು ಮಾರಿಬಿಡಿ ಎಂಬ ಅರ್ಥವನ್ನು ಈ ಶೀರ್ಷಿಕೆ ನೀಡುತ್ತದೆ’ ಎಂದರು. ದುಡ್ಡನ್ನು ಕೊಳ್ಳೆ ಹೊಡೆಯುವುದಕ್ಕೆ ಸಂಬಂಧಿಸಿದ ಚಿತ್ರ ಇದು. ರಾಘವೇಂದ್ರ ನಿರ್ದೇಶನದ ಈ ಸಿನಿಮಾ ‘ಅತಿಯಾಸೆ ಗತಿಗೇಡು’ ಎಂಬ ಸಂದೇಶ ಹೊಂದಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.