ವರುಣ: ಇಲ್ಲಿನ ಮೊಸನಬಾಯನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸಿನಿಮಾ ನಿರ್ದೇಶಕ ಚೇತನ್ ಅವರ ವಿವಾಹವು ಭಾನುವಾರ ನೆರವೇರಿತು.
ನಟ ಪುನೀತ್ ರಾಜಕುಮಾರ್ ಸೇರಿದಂತೆ ಹಲವು ನಟರು ಭಾಗಿಯಾಗಿದ್ದರು. ಮದುವೆಯಲ್ಲಿ 50ಕ್ಕಿಂತಲೂ ಹೆಚ್ಚಿನ ಮಂದಿ ಭಾಗಿಯಾಗಿದ್ದು, ಕೋವಿಡ್ ನಿಯಮಗಳನ್ನು ಉಲ್ಲಂಘಿಸಲಾಗಿದೆ ಎಂಬ ಆರೋಪ ಕೇಳಿ ಬಂದಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಮೊಸನಬಾಯನಹಳ್ಳಿ ಗ್ರಾಮ ಪಂಚಾಯಿತಿ ಪಿಡಿಒ ಪ್ರಸನ್ನಕುಮಾರ್, ‘ಮದುವೆ ನಡೆಸಲು ಅನುಮತಿ ತೆಗೆದುಕೊಂಡಿರಲಿಲ್ಲ. ಬೆಂಗಳೂರಿನಿಂದ ಬಂದು ಚಿಕ್ಕಹಳ್ಳಿ ಸಮೀಪದ ಛತ್ರದಲ್ಲಿ ಮದುವೆ ಮಾಡಿದ್ದಾರೆ ಎಂಬ ಮಾಹಿತಿ ಇದೆ. ಈ ಕುರಿತು ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು’ ಎಂದು ತಿಳಿಸಿದರು.
ಇಲ್ಲಿಗೆ ಸಮೀಪದ ವರುಣ, ಮೈಸೂರು ದಕ್ಷಿಣ ಠಾಣೆಯ ಪೊಲೀಸರು ಮದುವೆ ನಡೆದಿರುವ ಕುರಿತು ಮಾಹಿತಿ ಇಲ್ಲ ಎಂದು ಹೇಳಿದ್ದಾರೆ.
ಮೈಸೂರು ತಾಲ್ಲೂಕಿನ ಚಿಕ್ಕಹಳ್ಳಿ ಸಮೀಪ ಭಾನುವಾರ ನಡೆದ ನಿರ್ದೇಶಕ ಚೇತನ್ ಅವರ ವಿವಾಹದಲ್ಲಿ ನಟ ಪುನೀತ್ ರಾಜಕುಮಾರ್ ಭಾಗಿಯಾಗಿದ್ದರು.