ಬೆಂಗಳೂರು: ಹೃದಯಾಘಾತದಿಂದ ನಿಧನರಾದ ದ್ವಾರಕೀಶ್ ಅವರ ಪಾರ್ಥಿವ ಶರೀರವನ್ನು ಸಾರ್ವಜನಿಕರ ದರ್ಶನಕ್ಕೆ ಇಡಲಾಗಿದ್ದು, ಸಿನಿಮಾರಂಗದ ಹಲವು ಗಣ್ಯರು ಅಂತಿಮ ನಮನ ಸಲ್ಲಿಸಿದರು.
ಬುಧವಾರ ಬೆಳಿಗ್ಗೆ 7.30ರಿಂದ 11.30ರ ರವರೆಗೆ ರವೀಂದ್ರ ಕಲಾಕ್ಷೇತ್ರದಲ್ಲಿ ಪಾರ್ಥಿವ ಶರೀರವನ್ನು ಸಾರ್ವಜನಿಕರ ದರ್ಶನಕ್ಕೆ ಇಡಲಾಗಿದೆ. ಬಳಿಕ ಚಾಮರಾಜಪೇಟೆಯ ಚಿತಾಗಾರದಲ್ಲಿ ಅಂತ್ಯಸಂಸ್ಕಾರ ನಡೆಯಲಿದೆ’ ಎಂದು ದ್ವಾರಕೀಶ್ ಪುತ್ರ ಗಿರಿ ತಿಳಿಸಿದ್ದಾರೆ.
ಕಿಚ್ಚ ಸುದೀಪ್, ಸುಧಾರಾಣಿ, ರಮೇಶ್ ಅರವಿಂದ್, ಮುಖ್ಯಮಂತ್ರಿ ಚಂದ್ರು, ಸುಚೇಂದ್ರ ಪ್ರಸಾದ್ ಸೇರಿದಂತೆ ಸಿನಿಮಾರಂಗದ ಅನೇಕ ತಾರೆಯರು ಅಂತಿಮ ನಮನ ಸಲ್ಲಿಸಿದರು.
ನಟರಾದ ಯಶ್, ಜಗ್ಗೇಶ್, ರವಿಚಂದ್ರನ್, ಅನಿರುದ್ಧ, ಕುಮಾರ್ ಗೋವಿಂದ್, ನಟಿ, ಸಂಸದೆ ಸುಮಲತಾ ಅಂಬರೀಶ್, ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದರು.