ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಿರುತೆರೆಯಿಂದ ಬೆಳ್ಳಿ ತೆರೆಗೆ ‘ಗೀತಾ’ ಧಾರಾವಾಹಿ ನಟಿ ಭವ್ಯಾಗೌಡ

Last Updated 29 ಮಾರ್ಚ್ 2021, 8:38 IST
ಅಕ್ಷರ ಗಾತ್ರ

ಧಾರಾವಾಹಿ ‘ಗೀತಾ’ದ ನಟಿ ಭವ್ಯಾ ಗೌಡ ಬೆಳ್ಳಿತೆರೆಯಲ್ಲಿ ‘ಡಿಯರ್‌ ಕಣ್ಮಿಣಿ’ಯಲ್ಲಿ ಮುಖ್ಯಪಾತ್ರವೊಂದರಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

‘ಕಿರಿಕ್ ಮಾಡಿದರೆ ಹೊಡಿಯೋಕೂ ಸೈ, ಪ್ರೀತಿ ಮಾಡೋರಿಗೆ ಜೀವ ಕೊಡೋಕೂ ಸೈ’ ಅನ್ನುವುದು ‘ಗೀತಾ’ ಧಾರವಾಹಿಯ ಪಂಚಿಂಗ್‌ ಸಂಭಾಷಣೆ. ಆ ಗೆಟಪ್‌ ಬೆಳ್ಳಿ ತೆರೆಯ ಬೆಳಕು ಚೆಲ್ಲುವಂತೆ ಮಾಡಿದೆ.

ಈ ಚಿತ್ರದಲ್ಲಿ ಬಿಗ್‍ಬಾಸ್ ಖ್ಯಾತಿಯ ಕಿಶನ್, ರೇಖಾದಾಸ್ ಅವರ ಪುತ್ರಿ ಸಾತ್ವಿಕಾ ಹಾಗೂ ಕ್ರಿಕೆಟಿಗ ಪ್ರವೀಣ್ ನಟಿಸುವ ಬಗ್ಗೆ ಸಿನಿಮಾ ತಂಡ ಹೇಳಿತ್ತು. ಈಗ ಭವ್ಯಾ ಗೌಡ ಸೇರಿದ್ದಾರೆ.

‘ಈ ಸಿನಿಮಾದಲ್ಲಿ ನಾಲ್ವರು ನಟರು ಇದ್ದಾರೆ. ಸಿನಿಮಾದ ಕಥೆ ಕೂಡ ಅಷ್ಟೇ ಭಿನ್ನವಾಗಿದೆ. ನಾಲ್ವರು ನಟರಿಗೂ ಸಮಾನ ಪ್ರಮಾಣದ ಆದ್ಯತೆ ಸಿನಿಮಾದಲ್ಲಿ ಇದೆ’ ಎಂದು ಸಿನಿಮಾದ ನಿರ್ದೇಶಕಿ ಹಾಗೂ ನಿರ್ಮಾಪಕಿ ವಿಸ್ಮಯಾ ಗೌಡ ಹೇಳಿದರು.

ಭವ್ಯಾ ಗೌಡ ಅವರ ಪಾತ್ರದ ಬಗ್ಗೆಯೂ ಅವರು ಮಾತನಾಡಿದರು. ‘ಕಿರುತೆರೆಗಿಂತ ಭವ್ಯಾ ಇಲ್ಲಿ ಭಿನ್ನವಾಗಿ ಕಾಣಿಸಿಕೊಳ್ಳಲಿದ್ದಾರೆ. ನೀವು ಈ ಮೊದಲು ನೋಡಲು ಸಾಧ್ಯವಾಗಿರದಷ್ಟು ಬೇರೆ ರೀತಿಯಲ್ಲೇ ಭವ್ಯಾ ಈ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ’ ಎಂದು ವಿಸ್ಮಯಾ ಹೇಳಿದರು.

ಭವ್ಯಾ ಗೌಡ ಪಾತ್ರ ಏನು?: ನಿಜ ಜೀವನಕ್ಕಿಂತ 8 ವರ್ಷ ದೊಡ್ಡವಳಾದ ಪಾತ್ರದಲ್ಲಿ ಭವ್ಯಾ ಈ ಸಿನಿಮಾದಲ್ಲಿ ನಟಿಸಲಿದ್ದಾರೆ. ಗೀತಾ ಧಾರಾವಾಹಿಯಲ್ಲಿ ಸಾಂಪ್ರದಾಯಿಕ ಪಾತ್ರವೊಂದಕ್ಕೆ ಬಣ್ಣ ಹಚ್ಚಿದ್ದ ಅವರು ಈ ಸಿನಿಮಾದಲ್ಲಿ ಸ್ವಲ್ಪ ಆಧುನಿಕವಾಗಿಯೂ ಕಾಣಲಿದ್ದಾರೆ.

‘ನಾನು ಗಗನಸಖಿ ಆಗಬೇಕು ಎಂದು ಕನಸು ಕಂಡಿದ್ದೆ. ಅದಕ್ಕಾಗಿ ಅರ್ಜಿಯನ್ನೂ ಹಾಕಿದ್ದೆ. ಅಷ್ಟರಲ್ಲಿ ಧಾರಾವಾಹಿಯಲ್ಲಿ ನಟಿಸಲು ಅವಕಾಶ ಬರಲು ಶುರುವಾಯಿತು. ನಟನೆಯನ್ನೇ ವೃತ್ತಿ ಮಾಡಿಕೊಳ್ಳಬೇಕು ಎಂದು ಅಂದುಕೊಂಡೆ. ಆದರೆ ತೆಲುಗು, ತಮಿಳು ಧಾರಾವಾಹಿಗಳಲ್ಲಿ ನಟಿಸಲು ಅಮ್ಮ ಒಪ್ಪಲಿಲ್ಲ. ಗೀತಾ ಧಾರಾವಾಹಿ ನನಗೆ ಕನ್ನಡದ ಮನೆಮಗಳು ಎನಿಸಿಕೊಳ್ಳುವ ಅವಕಾಶ ಮಾಡಿಕೊಟ್ಟಿತು. ಆ ಧಾರಾವಾಹಿಯಿಂದ ನನ್ನ ಅದೃಷ್ಟ ಬದಲಾಯಿತು’ ಎನ್ನುತ್ತಾರೆ ಭವ್ಯಾ ಗೌಡ.

‘ಇಲ್ಲಿವರೆಗೂ ಸಿನಿಮಾದಲ್ಲಿ ನಟಿಸಲು ಅವಕಾಶ ಸಿಕ್ಕಿಲ್ಲ ಅಂತೇನಿಲ್ಲ. ಆದರೆ ನನಗೆ ಇಷ್ಟವಾಗುವ ಪಾತ್ರ ಸಿಕ್ಕಿಲ್ಲ. ಇಲ್ಲಿ ಗಟ್ಟಿಯಾದ ಒಂದು ಪಾತ್ರ ಇದೆ. ಚಾಲೆಂಜಿಂಗ್ ಆಗಿದೆ. ಇದರಲ್ಲಿರುವ ಪಾತ್ರ ಎಷ್ಟು ಇಷ್ಟ ಆಯಿತು ಎಂದರೆ ಒಂದೆರೆಡು ದಿನ ನಾನು ಆ ಗುಂಗಿನಲ್ಲೇ ಇದ್ದೆ. ನಿಜ ಹೇಳಬೇಕು ಅಂದರೆ ನನಗೆ ಈ ಸಿನಿಮಾದ ನಿರ್ದೇಶಕಿ ಹಾಗೂ ನಿರ್ಮಾಪಕಿ ವಿಸ್ಮಯಾ ಅವರು ತುಂಬಾ ಇಷ್ಟ ಆದರು. ಮಹಿಳಾ ನಿರ್ದೇಶಕಿ ಜೊತೆ ಕೆಲಸ ಮಾಡುವ ಖುಷಿಯೇ ಬೇರೆ. ಅದರಲ್ಲೂ ನನ್ನ ಧಾರಾವಾಹಿಯ ಕೆಲಸಕ್ಕೆ ಯಾವುದೇ ತೊಂದರೆಯಾಗದಂತೆ ಅವರು ಡೇಟ್ ಹೊಂದಿಸುವುದಾಗಿ ಹೇಳಿದ್ದು ತುಂಬಾ ಖುಷಿಯಾಯಿತು. ತುಂಬಾ ಪ್ರೀತಿಯಿಂದ ಈ ಸಿನಿಮಾ ಒಪ್ಪಿಕೊಂಡು ಮಾಡುತ್ತಿದ್ದೇನೆ’ ಎಂದರು ಭವ್ಯಾ.

‘ಈ ಸಿನಿಮಾದ ಕಥೆ ಚೆನ್ನಾಗಿದೆ. ತಂಡ ಕೂಡ ಅಷ್ಟೇ ಶ್ರಮದಿಂದ ಕೆಲಸ ಮಾಡುತ್ತಿದೆ. ‘ಡಿಯರ್ ಕಣ್ಮಣಿ’ಯ ಭಾಗವಾಗಿರುವ ಬಗ್ಗೆ ನನಗೆ ಖುಷಿಯಿದೆ. ಇಂತಹ ಪಾತ್ರ ಸಿಕ್ಕಾಗ ಎರಡು ಕಡೆ ಕೆಲಸ ಮಾಡಿದರೂ ಸಾರ್ಥಕತೆ ಸಿಗುತ್ತದೆ. ಗೀತಾ ತಂಡ ಕೂಡ ನನಗೆ ಬೆಂಬಲ ನೀಡುತ್ತಿದೆ. ಈ ಸಿನಿಮಾ ನನ್ನ ವೃತ್ತಿ ಬದುಕಿಗೆ ಬ್ರೇಕ್ ಕೊಡಲಿದೆ’ ಎಂದು ಹೇಳಿದರು ಭವ್ಯಾ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT