ಬಾಲಿವುಡ್ ನಟ ಜಾನ್ ಅಬ್ರಹಾಂ ಹಾಗೂ ನಿರ್ದೇಶಕ ಮಿಲಾಪ್ ಜಾವೇರಿ ತಮ್ಮ ಮುಂದಿನ ಬಹುನಿರೀಕ್ಷಿತ ‘ಸತ್ಯಮೇವ ಜಯತೇ 2’ ಸಿನಿಮಾ ಕೆಲಸಗಳನ್ನು ಆರಂಭಿಸಿದ್ದಾರೆ.
ಲಾಕ್ಡೌನ್ನಿಂದಾಗಿ ಈ ಸಿನಿಮಾದ ಕೆಲಸವೂ ಸ್ಥಗಿತಗೊಂಡಿತ್ತು. ಮಹಾರಾಷ್ಟ್ರ ಸರ್ಕಾರ ಕೆಲ ಷರತ್ತುಗಳನ್ನು ವಿಧಿಸಿ, ಚಿತ್ರೀಕರಣಕ್ಕೆ ಅನುಮತಿ ನೀಡಿರುವುದರಿಂದ ಸದ್ಯದಲ್ಲೇ ಈ ಚಿತ್ರದ ಚಿತ್ರೀಕರಣದಲ್ಲಿ ಜಾನ್ ಅಬ್ರಹಾಂ ಸೇರಿದಂತೆ ತಂಡ ಭಾಗಿಯಾಗಲಿದೆ.
ಈ ಹೊಸ ಚಿತ್ರದ ಬಗ್ಗೆ ಜಾವೇರಿ, ತಮ್ಮ ಟ್ವಿಟರ್ ಖಾತೆಯಲ್ಲಿ ವಿವರಗಳನ್ನು ಬರೆದುಕೊಂಡಿದ್ದಾರೆ. ‘ನನ್ನ ಹೀರೊ, ಗೆಳೆಯ ಜಾನ್ ಅಬ್ರಹಾಂನನ್ನು ಮೂರು ತಿಂಗಳ ನಂತರ ಭೇಟಿಯಾದೆ. ‘ಸತ್ಯಮೇವ ಜಯತೇ–2’ ಸಿನಿಮಾ ಕೆಲಸ ಮುಂದೆ ಸಾಗಿದೆ’ ಎಂದು ಹೇಳಿದ್ದಾರೆ.
‘ಸದ್ಯ ಜಾನ್ ಅಬ್ರಹಾಂ, ಸಂಜಯ್ ಗುಪ್ತಾ ಅವರ ‘ಮುಂಬೈ ಸಾಗಾ’ದ ಚಿತ್ರೀಕರಣ ಮುಗಿಸಿದ ಬಳಿಕ ಈ ಚಿತ್ರದ ಚಿತ್ರೀಕರಣದಲ್ಲಿ ತೊಡಗಿಸಿಕೊಳ್ಳಲಿದ್ದಾರೆ’ ಎಂದು ನಿರ್ದೇಶಕ ಮಿಲಾಪ್ ಜಾವೇರಿ ತಿಳಿಸಿದ್ದಾರೆ.
ಕೆಲ ದಿನಗಳ ಹಿಂದೆ ಜಾನ್ ಅಬ್ರಹಾಂ ಈ ಚಿತ್ರದ ಹೊಸ ಪೋಸ್ಟರ್ವೊಂದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು. ಅದು ಜಾನ್ ಅಬ್ರಹಾಂನ ಎದೆಯಲ್ಲಿ ತ್ರಿವರ್ಣ ಧ್ವಜದ ಚಿತ್ರ ಇರುವ ಪೋಸ್ಟರ್.
ಈ ಸಿನಿಮಾವು ಅಕ್ಟೋಬರ್ 2 ಗಾಂಧಿ ಜಯಂತಿಗೆ ಬಿಡುಗಡೆಗೊಳಿಸುವುದಾಗಿ ಮಿಲಾಪ್ ಹೇಳಿದ್ದರು. ಆದರೆ, ಈಗ ಕೊರೊನಾ ಸಾಂಕ್ರಾಮಿಕ ರೋಗ ಭೀತಿಯಿಂದ ಸಿನಿಮಾ ಕೆಲಸಗಳು ಸ್ಥಗಿತಗೊಂಡಿದ್ದರಿಂದ, ಬಿಡುಗಡೆಯ ದಿನಾಂಕ ಮುಂದೂಡಿಕೆಯಾಗುವ ಸಾಧ್ಯತೆ ಇದೆ.
ಈ ಹೊಸ ಸಿನಿಮಾ 2018ರಲ್ಲಿ ಬಿಡುಗಡೆಯದ ‘ಸತ್ಯಮೇವ ಜಯತೇ’ ಚಿತ್ರದ ಮುಂದುವರಿದ ಭಾಗ. ಈ ಸಿನಿಮಾದಲ್ಲಿ ಜಾನ್ ಅಬ್ರಹಾಂ ಜೊತೆಗೆ ದಿವ್ಯಾ ಖೋಸ್ಲಾಕುಮಾರ್ ನಾಯಕಿಯಾಗಿ ನಟಿಸಿದ್ದಾರೆ.