ನಟ ಉಪೇಂದ್ರ ಅಭಿನಯಿಸುತ್ತಿರುವ ಪ್ಯಾನ್ ಇಂಡಿಯಾ ಸಿನಿಮಾ ‘ಕಬ್ಜ’ ಕೋಟೆಗೆ ಇದೀಗ ನಟ ಕಿಚ್ಚ ಸುದೀಪ್ ಪ್ರವೇಶಿಸಿದ್ದಾರೆ. ಚಿತ್ರದಲ್ಲಿ ‘ಭಾರ್ಗವ್ ಭಕ್ಷಿ’ ಎಂಬ ಪಾತ್ರದಲ್ಲಿ ಸುದೀಪ್ ಕಾಣಿಸಿಕೊಳ್ಳಲಿದ್ದಾರೆ.
ಚಿತ್ರದ ಐದನೇ ಹಂತದ ಚಿತ್ರೀಕರಣವು ಬೆಂಗಳೂರಿನಲ್ಲಿ ನಡೆಯುತ್ತಿದ್ದು, ಚಿತ್ರದ ನಿರ್ದೇಶಕ ಆರ್.ಚಂದ್ರು ಸುದೀಪ್ ಅವರನ್ನು ಸೆಟ್ಗೆ ಸ್ವಾಗತಿಸಿ ಟ್ವೀಟ್ ಮಾಡಿದ್ದಾರೆ. ಚಿತ್ರತಂಡಕ್ಕೆ ಇತ್ತೀಚೆಗಷ್ಟೇ ಬಾಲಿವುಡ್ನ ಖ್ಯಾತ ನಟ ನವಾಬ್ ಶಾ ಹಾಗೂ ಕೆ.ಜಿ.ಎಫ್ ಸಿನಿಮಾದಲ್ಲಿ ರಾಜೇಂದ್ರ ದೇಸಾಯಿ ಪಾತ್ರ ನಿರ್ವಹಿಸಿದ್ದ ಲಕ್ಷ್ಮೀಶ ಲಕ್ಷ್ಮಣ್ ಪ್ರವೇಶಿಸಿದ್ದರು. ತಮಿಳಿನ ‘ಐ’ ಚಿತ್ರದ ಖ್ಯಾತಿಯ ಕಾಮರಾಜನ್, ಜಗಪತಿ ಬಾಬು, ರಾಹುಲ್ ದೇವ್, ಸುನಿಲ್ ಪುರಾಣಿಕ್, ಪ್ರಮೋದ್ ಶೆಟ್ಟಿ,ರಾಹುಲ್ ಜಗತಪ್, ಅನೂಪ್ ರೇವಣ್ಣ, ಜಾನ್ ಕೊಕ್ಕಿನ್, ನವೀನ್, ಕೋಟ ಶ್ರೀನಿವಾಸ್, ಜಯಪ್ರಕಾಶ್, ಕಾಟ್ ರಾಜು, ಸುಬ್ಬರಾಜು ಮುಂತಾದ ದೊಡ್ಡ ತಾರಾಗಣವೇ ಚಿತ್ರದಲ್ಲಿದೆ. ಬೆಂಗಳೂರಿನಲ್ಲಿ ಚಿತ್ರೀಕರಣ ಮುಗಿಸಿ, ಚಿತ್ರತಂಡವು ಹೈದರಾಬಾದ್ ಮತ್ತು ಮಂಗಳೂರಿನಲ್ಲಿ ಚಿತ್ರೀಕರಣ ನಡೆಸಲಿದೆ.
‘ಬೆಂಗಳೂರಿನಲ್ಲಿ ಚಿತ್ರೀಕರಣ ಮುಗಿದರೆ ಶೇ 75 ಚಿತ್ರೀಕರಣ ಪೂರ್ಣಗೊಳ್ಳಲಿದೆ. ಜಾರ್ಖಂಡ್ನಲ್ಲೂ ಚಿತ್ರೀಕರಣ ನಡೆಸುವ ಚಿಂತನೆ ಇದೆ.ಇತರೆ ಅಂಡರ್ವಲ್ಡ್ ಸಿನಿಮಾಗಳಿಗೆ ಹೋಲಿಸಿದರೆ ಇದೊಂದು ವಿಭಿನ್ನ ಪ್ರಯತ್ನ. ಇದು ಪಕ್ಕಾ ಆ್ಯಕ್ಷನ್ ಸಿನಿಮಾ’ ಎಂದು ಇತ್ತೀಚೆಗಷ್ಟೇ ಆರ್.ಚಂದ್ರು ತಿಳಿಸಿದ್ದರು.
ಶ್ರೀ ಸಿದ್ದೇಶ್ವರ ಎಂಟರ್ ಪ್ರೈಸಸ್ ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ ‘ಕಬ್ಜ’ ಚಿತ್ರಕ್ಕೆ ಕೆ.ಜಿ.ಎಫ್ ಖ್ಯಾತಿಯ ರವಿ ಬಸ್ರೂರು ಸಂಗೀತ ನಿರ್ದೇಶನವಿದೆ. ಕಾರ್ಯಕಾರಿ ನಿರ್ಮಾಪಕರಾಗಿ ಮುನೀಂದ್ರ ಹಾಗೂ ಲೈನ್ ಪ್ರೊಡ್ಯೂಸರ್ ಆಗಿ ರಾಜಶೇಖರ್ ಕಾರ್ಯನಿರ್ವಹಿಸುತ್ತಿದ್ದಾರೆ. ಎ.ಜೆ.ಶೆಟ್ಟಿ ಛಾಯಾಗ್ರಹಣ, ಮಹೇಶ್ ಸಂಕಲನ, ರಾಜು ಸುಂದರಂ, ಗಣೇಶ್, ಶೇಖರ್ ನೃತ್ಯ ನಿರ್ದೇಶನ ಹಾಗೂ ರವಿವರ್ಮ, ವಿಕ್ರಂಮೋರ್, ವಿಜಯ್, ಪೀಟರ್ ಹೆನ್ ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ.
Very happy and excited to work with @KicchaSudeep it’s a proud moment..pleasure to have you on set.. Welcome on board #bhragavbakshi
— R.Chandru (@rchandru_movies) December 16, 2021
💐🤗#kabzaa#panindiankabzaa#bhragavbakshi #kicchasudeepa #rchandrumovies
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.