ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

'ವಿಷ್ಣುವರ್ಧನ್ ಸ್ಮಾರಕ' ಅನಾವರಣ: ಅಭಿಮಾನಿಗಳಲ್ಲಿ‌ ಸಂತಸದ ಹೊನಲು

Last Updated 29 ಜನವರಿ 2023, 9:13 IST
ಅಕ್ಷರ ಗಾತ್ರ

ಮೈಸೂರು: ಚಲನಚಿತ್ರ ನಟ ವಿಷ್ಣುವರ್ಧನ್ ಅಭಿಮಾನಿಗಳ ಮುಗಿಲುಮುಟ್ಟುವ ಜಯಘೋಷದ ನಡುವೆ 'ಸಾಹಸಸಿಂಹ ವಿಷ್ಣುವರ್ಧನ್ ಸ್ಮಾರಕ'ವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭಾನುವಾರ ಲೋಕಾರ್ಪಣೆ ಮಾಡಿದರು.

ಮಾನಂದವಾಡಿ ರಸ್ತೆಯ ಹಾಲಾಳು ಗ್ರಾಮದ ಉದ್ಬೂರ್ ಗೇಟ್ ಬಳಿ ನಿರ್ಮಿಸಲಾದ ಸ್ಮಾರಕದಲ್ಲಿ 'ಆಪ್ತರಕ್ಷಕ' ಚಲನಚಿತ್ರದ ಪಾತ್ರದ ಮಾದರಿಯಲ್ಲಿ ನಿರ್ಮಿಸಲಾದ 7 ಅಡಿ ಎತ್ತರದ ಶಿಲ್ಪವನ್ನೂ ಅವರು ಅನಾವರಣಗೊಳಿಸಿದರು.

ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, '70ರ ದಶಕದಲ್ಲಿ ನಾಗರಹಾವು ಚಿತ್ರದ ಮೂಲಕ ನಾಡಿನ ಜನಮನ ಗೆದ್ದವರು ವಿಷ್ಣು. ನಾಲ್ಕು ದಶಕದ ಕಾಲ ಚಿತ್ರಗಳ ಮೂಲಕ‌ ಕನ್ನಡ ಸಂಸ್ಕೃತಿಯ ಧ್ವಜವನ್ನು ಎತ್ತಿ‌ಹಿಡಿದರು. ಅವರ ಅಭಿಮಾನಿಯಾಗಿ ಇಲ್ಲಿ ಬಂದಿದ್ದೇನೆ' ಎಂದರು.

'ವಿಷ್ಣು ಮಾತುಗಳು ಕಲಾರಸಿಕರ ನಾಲಿಗೆಯ ತುದಿಯಲ್ಲಿವೆ. ಮಾನವೀಯತೆಯನ್ನು ಮೆರೆದ ವಿಷ್ಣು ಶಕ್ತಿಯಾಗಿದ್ದವರು ಭಾರತಿ. ಸ್ಮಾರಕ ನಿರ್ಮಾಣಕ್ಕೆ ಸ್ಥಳ ವಿವಾದ ಸೇರಿದಂತೆ ಹಲವು ಕಷ್ಟಗಳು‌ ಎದುರಾದಾಗ ಮೈಸೂರಿನಲ್ಲೇ ಸ್ಥಾಪಿಸುವ ಗಟ್ಟಿ ನಿಲುವು ತೆಗೆದುಕೊಂಡರು' ಎಂದು ಹೇಳಿದರು.

'ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದಾಗ ₹ 11 ಕೋಟಿ ಅನುದಾನ ನೀಡಿದ್ದರಿಂದ ಸ್ಮಾರಕ ಎಲ್ಲರ ಎದುರು ಭವ್ಯವಾಗಿ ನಿಂತಿದೆ. ಸಿನಿಮಾ ಕಲಿಕಾ ಸಂಸ್ಥೆ ನಿರ್ಮಾಣ ಕನಸಿದ್ದು, ಅದಕ್ಕೂ ಸರ್ಕಾರದ ಸಹಕಾರವಿದೆ' ಎಂದು ಭರವಸೆ ನೀಡಿದರು.‌

ನಟಿ ಭಾರತಿ ಮಾತನಾಡಿ, 'ದಶಕದ ತಪಸ್ಸಿಗೆ ಫಲ ಸಿಕ್ಕಿದೆ. ತಾಯಿಯ ಹೆರಿಗೆ ನೋವು ಮಗು ಮುಖ‌ ನೋಡಿದಾಗ ನಿವಾರಣೆಯಾಗುವಂತೆ ಸಂತೃಪ್ತಿಯ ಭಾವ ಮೂಡಿದೆ. ಬಸವರಾಜ ಬೊಮ್ಮಾಯಿ ಅವರು ಸ್ಮಾರಕ ನಿರ್ಮಾಣದಲ್ಲಿ ಒತ್ತಾಸೆಯಾಗಿ‌ ನಿಂತರು. ಬೊಮ್ಮಾಯಿ ಅವರು ಮತ್ತೆ ಬಂದರೆ ಒಳ್ಳೆಯದೇ ಅಲ್ಲವೇ? ಅವರಿಗೂ ಒಳ್ಳೆಯದಾಗಲಿ' ಎಂದರು.

ನಟ ಅನಿರುದ್ಧ ಮಾತನಾಡಿ, '13 ವರ್ಷಗಳ ಸಂಘರ್ಷ ಹೋರಾಟ, ಸತತ‌ ಪ್ರಯತ್ನಗಳ ನಡುವೆ ಸ್ಮಾರಕ ಮೈದಾಳಿದ್ದು, ರಾಜ್ಯ ಸರ್ಕಾರವು ಕನ್ನಡಿಗರಿಗೆ ಅರ್ಪಿಸಿರುವ ಕೊಡುಗೆಯಾಗಿದೆ' ಎಂದರು.

'ಮೈಸೂರಿನಲ್ಲಿ ಹುಟ್ಟಿದ ವಿಷ್ಣು ಅವರು, ಶಾರೀರಿಕವಾಗಿ ನಮ್ಮನ್ನು ಬಿಟ್ಟುಹೋಗಿದ್ದೂ ಕೂಡ ಇಲ್ಲೇ. ವಿಷ್ಣುವರ್ಧನ್ ಆಕಾಂಕ್ಷೆಗಳ ಪ್ರತಿರೂಪವಿದು. ರಂಗ ಚಟುವಟಿಕೆಗಳು, ಚಲನಚಿತ್ರೋತ್ಸವ ಮುಂದಿನ ದಿನಗಳಲ್ಲಿ ನಡೆಯಲಿವೆ. ಪ್ರತಿಮೆಯ ಮುಂದೆ ಚಿತಾಭಸ್ಮ ಇರಲಿದ್ದು, ಶ್ರದ್ಧಾಕೇಂದ್ರವಲ್ಲದೇ ಅಭಿಮಾನಿಗಳ ಸ್ಫೂರ್ತಿ ಕೇಂದ್ರವಾಗಲಿದೆ' ಎಂದರು.

ಶಾಸಕ‌ ಜಿ.ಟಿ.ದೇವೇಗೌಡ ಮಾತನಾಡಿ, 'ಎಚ್.ಡಿ.ಕೋಟೆ ರಸ್ತೆಯನ್ನು ನಾಲ್ಕು ಪಥದ ರಸ್ತೆ ಮತ್ತು ಮೈಸೂರಿನಲ್ಲೇ ಚಿತ್ರ ನಗರಿ‌ ಸ್ಥಾಪಿಸುವಂತೆ ಮುಖ್ಯಮಂತ್ರಿ‌ ಅವರಿಗೆ ಮನವಿ ಮಾಡಿದ್ದೇನೆ' ಎಂದು ತಿಳಿಸಿದರು.

ಕರ್ನಾಟಕ ರತ್ನ ಏಕಿಲ್ಲ: 'ಸಾಹಸಸಿಂಹ ವಿಷ್ಣುವರ್ಧನ್‌ ಅವರು ಕರ್ನಾಟಕ ರತ್ನ ಅಲ್ಲವೇ' ಎಂಬ ಪ್ಲೆಕಾರ್ಡ್ ಹಿಡಿದ ಸಾವಿರಾರು ಅಭಿಮಾನಿಗಳು ಕೂಗಿದರು.‌ ಮುಖ್ಯಮಂತ್ರಿ ಅವರ ಗಮನ‌ ಸೆಳೆಯಲು ಮುಂದಾದರು.

'ಬರುವ‌ಂತಹ ದಿನಗಳಲ್ಲಿ ಸರ್ಕಾರ ನಿಮ್ಮ‌ ಭಾವನೆಗಳಿಗೆ ಸಕಾರಾತ್ಮಕವಾಗಿ‌ ಸ್ಪಂದಿಸಲಿದೆ' ಎಂದು ಬಸವರಾಜ ಬೊಮ್ಮಾಯಿ ತಮ್ಮ ಭಾಷಣದಲ್ಲಿ ಭರವಸೆ ನೀಡಿದರು.‌

ಸಂಸದ ಪ್ರತಾಪಸಿಂಹ, ಶಾಸಕರಾದ ಜಿ.ಟಿ.ದೇವೇಗೌಡ, ಎಸ್.ಎ.ರಾಮದಾಸ್, ಎಲ್.ನಾಗೇಂದ್ರ, ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷ ಕೋಟೆ ಎಂ.ಶಿವಣ್ಣ, ಮೇಯರ್ ಶಿವಕುಮಾರ್, ಮುಡಾ ಅಧ್ಯಕ್ಷ ಯಶಸ್ವಿ ಎಸ್. ಸೋಮಶೇಖರ್, ವಸ್ತುಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಮಿರ್ಲೆ ಶ್ರೀನಿವಾಸಗೌಡ, ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ, ಉಪ ಮೇಯರ್ ಡಾ.ಡಿ.ರೂಪಾ ಇದ್ದರು.

ವೇದಿಕೆ ಮುಂಭಾಗದಲ್ಲಿ ನಟಿ ಭವ್ಯಾ, ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು, ರಮೇಶ್ ಭಟ್ ಹಾಗೂ ವಿಷ್ಣುವರ್ಧನ್ ಕುಟುಂಬದ ಸದಸ್ಯರು ಇದ್ದರು.

ಅಭಿಮಾನಿಗಳಿಗೆ ನಿರಾಸೆ: ಸಾವಿರಾರು ಸಂಖ್ಯೆಯಲ್ಲಿ ‌ನಾಡಿನ ಮೂಲೆಮೂಲೆಗಳಿಂದ ಆಗಮಿಸಿದ್ದ ಅಭಿಮಾನಿಗಳಿ‌ಗೆ ಸ್ಮಾರಕ ವೀಕ್ಷಣೆಗೆ ಅವಕಾಶ ಸಿಗದೆ‌ ನಿರಾಶರಾದರು. ಸ್ಥಳದಲ್ಲೇ ಕುಳಿತು ಆಕ್ರೋಶ ವ್ಯಕ್ತಪಡಿಸಿದರು.

ಸುರಕ್ಷತಾ ಸಿದ್ಧತೆಗಳು ಇಲ್ಲ. ಪೊಲೀಸರು ನಾಳೆ ಬರುವಂತೆ ಹೇಳಿದ್ದಾರೆ. ದಯವಿಟ್ಟು ಸಹಕರಿಸಿ ಎಂದು ನಟ ಅನಿರುದ್ಧ ಮನವೊಲಿಸಲು ಯತ್ನಿಸಿದರು‌. ಆದರೂ ಅಭಿಮಾನಿಗಳ ಒತ್ತಾಯ, ಆಕ್ರೋಶ ಕೇಳುತ್ತಲೇ ಇತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT