ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನ್ನಡ ಚಿತ್ರರಂಗದ 'ರಾಜಕುಮಾರ' ಪುನೀತ್ ರಾಜ್‌ಕುಮಾರ್ ನಿಧನಕ್ಕೆ ನಟ-ನಟಿಯರ ಸಂತಾಪ

Last Updated 29 ಅಕ್ಟೋಬರ್ 2021, 11:14 IST
ಅಕ್ಷರ ಗಾತ್ರ

ಬೆಂಗಳೂರು: ಚಿಕ್ಕ ವಯಸ್ಸಿಗೆ ನಟನಾ ಲೋಕಕ್ಕೆ ಎಂಟ್ರಿ ಕೊಟ್ಟಿದ್ದ ನಟ ಪುನೀತ್ ರಾಜ್‌ಕುಮಾರ್ ಅವರಿನ್ನು ನೆನಪು ಮಾತ್ರ. ಪುನೀತ್ ಇಂದು ಹೃದಯಾಘಾತದಿಂದಾಗಿ ಇಹಲೋಕ ತ್ಯಜಿಸಿದ್ದಾರೆ.

ಶುಕ್ರವಾರ (ಅ.29) ದಂದು ಜಿಮ್‌ನಲ್ಲಿ ವರ್ಕೌಟ್ ಮಾಡುತ್ತಿದ್ದ ವೇಳೆ ಅವರಿಗೆ ಎದೆನೋವು ಕಾಣಿಸಿಕೊಂಡಿತ್ತು. ನಂತರ ಅವರನ್ನು ರಮಣಶ್ರೀ ಕ್ಲಿನಿಕ್‌ಗೆ ದಾಖಲಿಸಿ ಪ್ರಥಮ ಚಿಕಿತ್ಸೆ ನೀಡಲಾಗಿತ್ತು. ಹೃದಯಾಘಾತಕ್ಕೆ ಒಳಗಾಗಿದ್ದ ಪುನೀತ್‌ರನ್ನು ಹೆಚ್ಚಿನ ಚಿಕಿತ್ಸೆಗಾಗಿ ಕೂಡಲೇ ಬೆಂಗಳೂರಿನ ವಿಕ್ರಮ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆಗೆ ಸ್ಪಂದಿಸದೇ ಪುನೀತ್ ನಿಧನರಾಗಿದ್ದಾರೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.

ಪುನೀತ್ ಅವರು ಬಾಲನಟನಾಗಿ ಕನ್ನಡ ಚಿತ್ರರಂಗ ಪ್ರವೇಶಿಸಿದ್ದರು. 'ಅಪ್ಪು' ಸಿನಿಮಾದ ಮೂಲಕ ನಾಯಕ ನಟನಾಗಿ ಯಶಸ್ಸು ಪಡೆದಿದ್ದ ಅವರು ಅಭಿಮಾನಿ ಬಳಗದಲ್ಲಿ 'ಅಪ್ಪು' ಆಗಿಯೇ ಉಳಿದಿದ್ದರು. ಅಲ್ಲದೆ, ರಾಜ್‌ಕುಮಾರ್ ಕುಟುಂಬದಿಂದ ಬಂದಿರುವ ಪ್ರತಿಭಾವಂತ ನಟನಾಗಿದ್ದ ಪುನೀತ್ ಅವರು ಅಪಾರ ಅಭಿಮಾನಿ ಬಳಗವನ್ನು ಹೊಂದಿದ್ದರು.

ಪುನೀತ್ ಅವರ ಸಾವಿಗೆ ಚಿತ್ರರಂಗ ಸೇರಿದಂತೆ ಹಲವಾರು ಗಣ್ಯರು ಸಂತಾಪ ಸೂಚಿಸಿದ್ದಾರೆ.

ಸಂಕಷ್ಟದಲ್ಲಿ ಇರುವವರಿಗೆ ಸಹಾಯ ಮಾಡುತ್ತಲೇ ರಿಯಲ್‌ ಹಿರೋ ಎನಿಸಿಕೊಂಡಿರುವ ಬಾಲಿವುಡ್ ನಟ ಸೋನು ಸೂದ್, 'ಹೃದಯ ವಿದ್ರಾವಕ, ಯಾವಾಗಲೂ ನಿನ್ನನ್ನು ಕಳೆದುಕೊಳ್ಳುತ್ತೇನೆ ನನ್ನ ಸಹೋದರ' ಎಂದು ಟ್ವೀಟ್ ಮಾಡಿದ್ದಾರೆ.

ಬಹುಭಾಷಾ ನಟ ಪ್ರಕಾಶ್ ರಾಜ್ ಕೂಡ ಟ್ವೀಟ್ ಮಾಡಿದ್ದು, 'Ahh ನೋ .. ಬೇಗ ಹೋದೆ ನನ್ನ ಪ್ರೀತಿಯ ಅಪ್ಪು. ನಾನು ಛಿದ್ರಗೊಂಡಿದ್ದೇನೆ .. ಹೃದಯ ಒಡೆದಿದೆ .. ಇದು ಸರಿಯಲ್ಲ' ಎಂದು ಹೇಳಿದ್ದಾರೆ.

'ಪುನೀತ್ ರಾಜ್‌ಕುಮಾರ್ ಅವರ ನಿಧನದ ದುರಂತ ಸುದ್ದಿಯನ್ನು ಕೇಳಿ ಆಘಾತ ಮತ್ತು ತೀವ್ರ ದುಃಖವಾಗಿದೆ. ನಾನು ಭೇಟಿಯಾದ ಮತ್ತು ಮಾತುಕತೆ ನಡೆಸಿದ ಅತ್ಯಂತ ವಿನಮ್ರ ವ್ಯಕ್ತಿಗಳಲ್ಲಿ ಅವರೊಬ್ಬರು. ಅವರ ಕುಟುಂಬ ಮತ್ತು ಪ್ರೀತಿಪಾತ್ರರಿಗೆ ನನ್ನ ಸಂತಾಪಗಳು' ಎಂದು ನಟ ಮಹೇಶ್ ಬಾಬು ಟ್ವೀಟ್ ಮಾಡಿದ್ದಾರೆ.

ಮಲಯಾಳಂ ಚಿತ್ರರಂಗದಲ್ಲಿ ನಿರ್ಮಾಣ, ನಿರ್ದೇಶನ, ನಟನೆ, ಹಿನ್ನೆಲೆ ಗಾಯನದಲ್ಲಿ ಸೈ ಎನಿಸಿಕೊಂಡಿರುವ ನಟ ಪೃಥ್ವಿರಾಜ್‌ ಸುಕುಮಾರನ್‌ ಕೂಡ ಪುನೀತ್ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. 'ಈ ಸುದ್ದಿ ತುಂಬಾ ನೋವುಂಟು ಮಾಡುತ್ತಿದೆ! ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ ಸೂಪರ್ ಸ್ಟಾರ್! ನಿಮ್ಮ ಕುಟುಂಬ, ಸ್ನೇಹಿತರು ಮತ್ತು ಲಕ್ಷಾಂತರ ಅಭಿಮಾನಿಗಳಿಗೆ ಈ ದುಃಖವನ್ನು ಭರಿಸುವ ಶಕ್ತಿಯನ್ನು ನೀಡಲಿ!' ಎಂದು ಟ್ವೀಟ್ ಮಾಡಿದ್ದಾರೆ.

ಮಿಲನ, ಪೃಥ್ವಿ ಸಿನಿಮಾದಲ್ಲಿ ಪುನೀತ್ ಅವರೊಂದಿಗೆ ನಟಿಸಿದ್ದ ನಟಿ ಪಾರ್ವತಿ ತಿರುವೋತು ಕೊಟ್ಟುವಟ್ ಕೂಡ ಸಂತಾಪ ಸೂಚಿಸಿದ್ದು, 'ಇದು ಪದಗಳಲ್ಲಿ ವ್ಯಕ್ತಪಡಿಸಲು ಸಾಧ್ಯವಾಗದಷ್ಟು ನೋವುಂಟು ಮಾಡುತ್ತಿದೆ. ಪುನೀತ್' ಎಂದು ಸಿನಿಮಾವೊಂದರಲ್ಲಿ ಪುನೀತ್ ಅವರೊಂದಿಗಿರುವ ಫೋಟೊವನ್ನ ಹಂಚಿಕೊಂಡಿದ್ದಾರೆ.

ಬಾಲಿವುಡ್‌ನ ಚಲನಚಿತ್ರ ನಿರ್ಮಾಪಕ ಬೋನಿ ಕಪೂರ್ ನಟ ಪುನೀತ್ ರಾಜ್‌ಕುಮಾರ್ ಅವರ ನಿಧನಕ್ಕೆ ಟ್ವೀಟ್ ಮೂಲಕ ಸಂತಾಪ ಸೂಚಿಸಿದ್ದಾರೆ. 'ತಮ್ಮ ಅದ್ಬುತವಾದ ಕೆಲಸದಿಂದಲೇ ಜನರ ಮನಗೆದ್ದ ಪವರ್‌ಫುಲ್ ನಟ ಪುನೀತ್ ರಾಜ್‌ಕುಮಾರ್ ಅವರ ಹಠಾತ್ ನಿಧನದ ಬಗ್ಗೆ ತಿಳಿದು ತೀವ್ರ ಆಘಾತವಾಗಿದೆ. ಅವರ ಕುಟುಂಬಕ್ಕೆ ನನ್ನ ಸಂತಾಪ' ಎಂದಿದ್ದಾರೆ.

ಅಪ್ಪು ನಿಧನಕ್ಕೆ ಸ್ಯಾಂಡಲ್‌ವುಡ್ ಮಾತ್ರವಲ್ಲದೆ ಬಾಲಿವುಡ್, ತೆಲುಗು, ತಮಿಳು ಚಿತ್ರರಂಗದ ನಟ-ನಟಿಯರು, ನಿರ್ದೇಶಕ, ನಿರ್ಮಾಪಕರು ಸಂತಾಪ ಸೂಚಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT