ಮುಂಬೈ: ಬಾಲಿವುಡ್ ತಾರಾ ದಂಪತಿ ನಟಿ ಕತ್ರಿನಾ ಕೈಫ್ ಮತ್ತು ನಟ ವಿಕ್ಕಿ ಕೌಶಲ್ ಅವರಿಗೆ ಸಾಮಾಜಿಕ ಮಾಧ್ಯಮದಲ್ಲಿ ಜೀವ ಬೆದರಿಕೆ ಹಾಕಿದ್ದ ಆರೋಪದಲ್ಲಿ ವ್ಯಕ್ತಿಯನ್ನು ಮುಂಬೈ ಪೊಲೀಸರು ಸೋಮವಾರ ಬಂಧಿಸಿದ್ದಾರೆ.
ಈ ಬಗ್ಗೆ ಇಲ್ಲಿನ ಸಾಂತಾ ಕ್ರೂಜ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಬಂಧಿತ ಆರೋಪಿಯನ್ನು ಮನ್ವಿಂದರ್ ಸಿಂಗ್ ಎಂದು ಗುರುತಿಸಲಾಗಿದೆ. ಆರೋಪಿಯು ಚಿತ್ರರಂಗದಲ್ಲಿ ಅವಕಾಶಗಳಿಗಾಗಿ ಎದುರು ನೋಡುತ್ತಿದ್ದ ನಟನಾಗಿದ್ದು ಕತ್ರಿನಾ ಕೈಫ್ ಅವರನ್ನು ಮದುವೆಯಾಗಲು ಬಯಸಿದ್ದ ಎಂದು ಮುಂಬೈ ಪೊಲೀಸರು ಮಾಹಿತಿ ನೀಡಿದ್ದಾರೆ.
ಒಬ್ಬ ವ್ಯಕ್ತಿ ತಮಗೆ ಸಾಮಾಜಿಕ ಮಾಧ್ಯಮಗಳ ಮೂಲಕ ಬೆದರಿಕೆ ಒಡ್ಡುತ್ತಿದ್ದು, ಇನ್ಸ್ಟಾಗ್ರಾಮ್ನಲ್ಲಿ ಬೆದರಿಸುವ ಪೋಸ್ಟ್ ಮಾಡುತ್ತಿದ್ದಾನೆ. ಪತ್ನಿ ಕತ್ರಿನಾಳನ್ನು ಹಿಂಬಾಲಿಸುತ್ತಿರುವ ಆತ ಅವರಿಗೂ ಬೆದರಿಕೆ ಹಾಕಿದ್ದಾನೆ ಎಂದು ವಿಕ್ಕಿ ಕೌಶಲ್ ಪೊಲೀಸರಿಗೆ ದೂರು ನೀಡಿದ್ದರು.
ಈ ಸಂಬಂಧಸಾಂತಾ ಕ್ರೂಜ್ ಠಾಣೆಯ ಪೊಲೀಸರುಐಪಿಸಿ ಕಾಯ್ದೆ 67 ಮತ್ತು ಐಟಿ ಕಾಯ್ದೆಯಡಿಗಳ ವಿಧಿ 506(2), 354(ಡಿ) ಅಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿ ಆರೋಪಿ ಮನ್ವಿಂದರ್ ಸಿಂಗ್ನನ್ನು ಬಂಧಿಸಿದ್ದಾರೆ.
ಕತ್ರಿನಾ ಕೈಫ್ ಅವರನ್ನು ಮದುವೆಯಾಗಲು ಬಯಸಿದ್ದ ಆರೋಪಿಯು ತಾರಾ ದಂಪತಿಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಫಾಲೊ ಮಾಡುತ್ತಿದ್ದನು. ಇವರು ಮದುವೆಯಾದ ಬಳಿಕ ಸೋಶಿಯಲ್ ಮೀಡಿಯಾಗಳಲ್ಲಿ ನಿರಂತರವಾಗಿ ತೊಂದರೆ ಕೊಡುತ್ತಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.