ಹೈದರಾಬಾದ್:‘ಬಾಹುಬಲಿ’ ಖ್ಯಾತಿಯ ನಟ ಪ್ರಭಾಸ್ ಅವರ ದೊಡ್ಡಪ್ಪ, ತೆಲುಗು ಚಿತ್ರರಂಗದ ಹಿರಿಯ ನಟ ಕೃಷ್ಣಂ ರಾಜು ಅವರು ಭಾನುವಾರನಿಧನರಾದರು.
ತಮ್ಮ ಪ್ರೀತಿಯ ದೊಡ್ಡಪ್ಪನನ್ನು ಕಳೆದುಕೊಂಡಿದ್ದಕ್ಕೆ ಪ್ರಭಾಸ್ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ಅನೇಕ ನಟ–ನಟಿಯರು, ರಾಜಕೀಯ ಗಣ್ಯರು ಪಾರ್ಥಿವ ಶರೀರದ ದರ್ಶನ ಪಡೆದು, ಪ್ರಭಾಸ್ ಅವರನ್ನು ಸಂತೈಸಿದ್ದಾರೆ.
ನಟ ಪ್ರಭಾಸ್ ವೃತ್ತಿ ಜೀವನ ಬಹುದೊಡ್ಡ ಮಟ್ಟಕ್ಕೆ ಬೆಳೆಯಲು ಕೃಷ್ಣಂ ರಾಜು ಕಾರಣರಾಗಿದ್ದರು. ಅವರು ಒಂದು ರೀತಿ ಪ್ರಭಾಸ್ಗೆ ಗಾಢಪಾಧರ್ ಆಗಿದ್ದರು. ಪ್ರಭಾಸ್ ಅಭಿನಯಿಸಿದ್ದ ಅನೇಕ ಚಿತ್ರಗಳಲ್ಲಿ ಕೃಷ್ಣಂ ರಾಜು ಅವರು ಪ್ರಭಾಸ್ ತಂದೆಯಾಗಿಯೇ ನಟಿಸಿದ್ದರು.
ಕೃಷ್ಣಂ ರಾಜು ಅವರಿಗೆ 83 ವರ್ಷ ವಯಸ್ಸಾಗಿತ್ತು. ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಹೈದರಾಬಾದ್ನ ಖಾಸಗಿ ಆಸ್ಪತ್ರೆಯಲ್ಲಿ ಬೆಳಿಗ್ಗೆ 3.30ರ ಸುಮಾರಿಗೆ ಕೊನೆಯುಸಿರೆಳೆದಿದ್ದಾರೆ.ಕೃಷ್ಣಂ ರಾಜು ಅವರು ಪತ್ನಿ ಹಾಗೂ ಮೂವರು ಪುತ್ರಿಯರನ್ನು ಅಗಲಿದ್ದಾರೆ.
ಕೃಷ್ಣಂ ರಾಜು ಅವರು ಜನವರಿ 20, 1940 ರಂದು ಪಶ್ಚಿಮ ಗೋದಾವರಿ ಜಿಲ್ಲೆಯ ಮೊಗಲ್ತೂರಿನಲ್ಲಿ ಜನಿಸಿದರು. ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಸಂಪುಟದಲ್ಲಿ ಕೇಂದ್ರ ಸಚಿವರಾಗಿ ಸೇವೆ ಸಲ್ಲಿಸಿದ್ದರು.
1966ರಲ್ಲಿ ‘ಚಿಲಕಾ ಗೋರಿಂಕಾ’ ಚಿತ್ರದ ಮೂಲಕ ತೆಲುಗು ಚಿತ್ರರಂಗಕ್ಕೆ ನಾಯಕನಾಗಿ ಪಾದಾರ್ಪಣೆ ಮಾಡಿದ ಅವರು, ಈವರೆಗೆ 187 ಚಿತ್ರಗಳಲ್ಲಿ ನಟಿಸಿದ್ದಾರೆ.
ಕೃಷ್ಣಂ ರಾಜು ಅವರ ನಿಧನಕ್ಕೆ ಚಿತ್ರರಂಗದ ಗಣ್ಯರು ಸೇರಿದಂತೆ ಅಭಿಮಾನಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ಸಂತಾಪ ವ್ಯಕ್ತಪಡಿಸಿದ್ದಾರೆ.