ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕ್ರೇಜಿಸ್ಟಾರ್‌’ ಪುತ್ರ ಮನೋರಂಜನ್‌ ಪ್ರೇಮ ಕಹಾನಿ ‘ಪ್ರಾರಂಭ’

Last Updated 18 ಜನವರಿ 2019, 8:48 IST
ಅಕ್ಷರ ಗಾತ್ರ

‘ಕ್ರೇಜಿಸ್ಟಾರ್‌’ ರವಿಚಂದ್ರನ್‌ ಅವರ ಪುತ್ರ ಮನೋರಂಜನ್‌ ರವಿಚಂದ್ರನ್ ಬಣ್ಣದಲೋಕ ಪ್ರವೇಶಿಸಿದ್ದು, ‘ಸಾಹೇಬ’ನ ಅವತಾರದಲ್ಲಿ. ಬಣ್ಣದ ಜಗತ್ತಿನಲ್ಲಿ ಅವರಿಟ್ಟ ಮೊದಲ ಹೆಜ್ಜೆ ಅಷ್ಟೇನೂ ಗಟ್ಟಿಯಾಗಿರಲಿಲ್ಲ. ಬಳಿಕ ತಮ್ಮೊಳಗಿನ ನಟನೆಯ ತುಡಿತಕ್ಕೆ ಅವರು ‘ಬೃಹಸ್ಪತಿ’ಯ ವೇಷವನ್ನೂ ತೊಟ್ಟರು. ಆದರೆ, ಪ್ರೇಮಲೋಕದಲ್ಲಿ ಈ ಹೊಸ ಹೀರೊಗೆ ಗೆಲುವು ಮರೀಚಿಕೆಯಾಗಿಯೂ ಉಳಿದಿದೆ.

ಮತ್ತೆ ಮನೋರಂಜನ್ ‘ಪ್ರಾರಂಭ’ ಸಿನಿಮಾ ಮೂಲಕ ನಟನೆಯ ವ್ಯಾಮೋಹವನ್ನು ವಿಸ್ತರಿಸುತ್ತಿದ್ದಾರೆ. ಬೆಂಗಳೂರಿನ ನಾಗರಭಾವಿಯ ಆಂಜನೇಯ ದೇವಸ್ಥಾನದಲ್ಲಿ ಇತ್ತೀಚೆಗೆ ಈ ಚಿತ್ರದ ಮುಹೂರ್ತ ನೆರವೇರಿತು.

ಮನು ಕಲ್ಯಾಡಿ ಈ ಚಿತ್ರದ ನಿರ್ದೇಶಕರು. ಹಲವು ಚಿತ್ರಗಳಿಗೆ ಸಂಭಾಷಣೆ ಬರೆದ ಅನುಭವ ಬೆನ್ನಿಗಿದೆ. ಇದೊಂದು ಲವ್‌ ಸ್ಟೋರಿ ಸಿನಿಮಾ. ಜಗದೀಶ್ ಕಲ್ಯಾಡಿ ಚಿತ್ರಕ್ಕೆ ಆರ್ಥಿಕ ಇಂಧನ ಒದಗಿಸಿದ್ದಾರೆ. ಮನೋರಂಜನ್‌ಗೆ ಕೀರ್ತಿ ನಾಯಕಿಯಾಗಿ ತೆರೆ ಹಂಚಿಕೊಳ್ಳುತ್ತಿದ್ದಾರೆ. ಇದು ಅವರಿಗೆ ಚೊಚ್ಚಲ ಚಿತ್ರ.

ಈಗಾಗಲೇ, ಚಿತ್ರದ ಶೂಟಿಂಗ್‌ ಆರಂಭವಾಗಿದೆ. ಬೆಂಗಳೂರು, ಮೈಸೂರು, ಚಿಕ್ಕಮಗಳೂರು ಹಾಗೂ ಬಳ್ಳಾರಿಯ ಸುತ್ತಮುತ್ತ 55 ದಿನಗಳ ಕಾಲ ಚಿತ್ರೀಕರಣ ನಡೆಸುವ ಯೋಚನೆ ಚಿತ್ರತಂಡದ್ದು.

ಶ್ರೀನಿವಾಸಪ್ರಭು, ಕಡ್ಡಿಪುಡ್ಡಿ ಚಂದ್ರು, ಹನುಮಂತೇಗೌಡ ತಾರಾಗಣದಲ್ಲಿದ್ದಾರೆ. ‘ಉಪ್ಪು ಹುಳಿ ಖಾರ’ ಸಿನಿಮಾಕ್ಕೆ ಸಂಗೀತ ಸಂಯೋಜಿಸಿದ್ದ ಪ್ರಜ್ವಲ್ ಪೈ ಅವರೇ ಈ ಚಿತ್ರಕ್ಕೂ ಸಂಗೀತ ನಿರ್ವಹಣೆಯ ನೊಗ ಹೊತ್ತಿದ್ದಾರೆ. ಛಾಯಾಗ್ರಹಣ ಸುರೇಶ್ ಬಾಬು ಅವರದ್ದು. ವಿಜಯ್ ಕುಮಾರ್ ಅವರ ಸಂಕಲನ ಹಾಗೂ ರವಿ ಸಂತೆಹೈಕ್ಲು ಅವರ ಕಲಾ ನಿರ್ದೇಶನ ಈ ಚಿತ್ರಕ್ಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT