ಥಿಯೇಟರ್ನಲ್ಲಿ ಚಿತ್ರಗಳನ್ನು ಎರಡು ವಾರದವರೆಗೆ ಗಟ್ಟಿಯಾಗಿ ನಿಲ್ಲಿಸುವುದೇ ಈಗ ಸವಾಲು. ಇಲ್ಲವಾದರೆ ಹೂಡಿದ ಬಂಡವಾಳವೂ ಮಟಾಶ್ ಆಗಲಿದೆ’
–ಇದು ಈಗಿನ ಕನ್ನಡ ಸಿನಿಮಾಗಳ ಪ್ರದರ್ಶನದ ಬಗ್ಗೆ ನಿರ್ದೇಶಕ ಎಸ್.ಡಿ. ಅರವಿಂದ್ ಅವರ ವ್ಯಾಖ್ಯಾನ. ‘ಲಾಸ್ಟ್ ಬಸ್’ ಚಿತ್ರದ ಬಳಿಕ ಅವರು ನಿರ್ದೇಶಿಸಿದ್ದ ‘ಮಟಾಶ್’ ಚಿತ್ರ ಈ ಶುಕ್ರವಾರ ತೆರೆಕಾಣುತ್ತಿದೆ. ಈ ಕುರಿತು ಮಾಹಿತಿ ಹಂಚಿಕೊಳ್ಳಲು ಚಿತ್ರತಂಡ ಸುದ್ದಿಗೋಷ್ಠಿಗೆ ಹಾಜರಾಗಿತ್ತು.
ಎರಡು ವರ್ಷದ ಹಿಂದೆ ಕೇಂದ್ರ ಸರ್ಕಾರ ನೋಟು ಅಮಾನ್ಯೀಕರಣ ಮಾಡಿತ್ತು. ಸರ್ಕಾರದ ಆದೇಶಕ್ಕೂ, ಈ ಚಿತ್ರಕ್ಕೂ ಯಾವುದೇ ಸಂಬಂಧ ಇಲ್ಲವಂತೆ. ಆ ವೇಳೆ ಜನರಿಂದ ವ್ಯಕ್ತವಾದ ಅಭಿಪ್ರಾಯಗಳನ್ನು ಕ್ರೋಡೀಕರಿಸಿ ಕಾಮಿಡಿಥ್ರಿಲ್ಲರ್ ಕಥೆ ಹೆಣೆದಿದ್ದಾರಂತೆ. ಹಣ ಮನುಷ್ಯನನ್ನು ಏನೆಲ್ಲಾ ಮಾಡುತ್ತದೆ ಎನ್ನುವುದರ ಸುತ್ತ ಕಥೆ ಸಾಗಲಿದೆ.
‘ಪವರ್ ಸ್ಟಾರ್’ ಪುನೀತ್ ರಾಜ್ಕುಮಾರ್ ಉತ್ತರ ಕರ್ನಾಟಕದ ಜವಾರಿ ಶೈಲಿಯ ಹಾಡೊಂದಕ್ಕೆ ಕಂಠದಾನ ಮಾಡಿದ್ದಾರೆ. ಈ ಹಾಡು ಸಾಕಷ್ಟು ಹವಾ ಎಬ್ಬಿಸಿದೆಯಂತೆ.
‘ಚಿತ್ರದಲ್ಲಿರುವ ಎಲ್ಲರೂ ಹೊಸಬರು. ಕನ್ನಡ ಚಿತ್ರಗಳ ಪ್ರದರ್ಶನದ ಪರಿಸ್ಥಿತಿ ಬಗ್ಗೆ ಎಲ್ಲರಿಗೂ ಗೊತ್ತಿದೆ. ನಾನು ಬಿಡಿಸಿ ಹೇಳುವ ಅಗತ್ಯವಿಲ್ಲ. ಎರಡು ವಾರಗಳ ಕಾಲ ಥಿಯೇಟರ್ಗಳಲ್ಲಿ ಸಿನಿಮಾ ನಿಲ್ಲಿಸಲು ಅಗತ್ಯವಿರುವ ಯೋಜನೆಗಳನ್ನು ರೂಪಿಸಿದ್ದೇವೆ’ ಎಂದರು ಅರವಿಂದ್.
ಚಿತ್ರದಲ್ಲಿ ಏಳು ಹಾಡುಗಳಿವೆ. ರಜನಿ ಭಾರದ್ವಾಜ್, ಐಶ್ವರ್ಯ ಸಿಂಧೋಗಿ, ಅಮೋಘ್ ರಾಹುಲ್, ಸಮರ್ಥ್ ನರಸಿಂಹರಾಜು, ಗೌತಮ್, ವಿ. ಮಹೋಹರ್, ಬಾಲಾಜಿ ಶೆಟ್ಟಿ, ನಂದ ತಾರಾಗಣದಲ್ಲಿದ್ದಾರೆ.
ಸತೀಶ್ ಪಾಟಕ್ ಮತ್ತು ಗಿರೀಶ್ ಪಾಟೀಲ್ ಬಂಡವಾಳ ಹೂಡಿದ್ದಾರೆ. ರಾಮಿ ಅಬ್ರಹಾಂ ಅವರ ಛಾಯಾಗ್ರಹಣವಿದೆ.