ಶಿವಮೊಗ್ಗದ ಅನಂತಪುರದಲ್ಲಿ ಹೋಟೆಲ್ ಉದ್ಯಮಿ ಮಲ್ಲೇಶ್ ಎಡೇಹಳ್ಳಿ ‘ಮಹಾಬಲಿ’ ಚಿತ್ರ ನಿರ್ಮಿಸುತ್ತಿದ್ದಾರೆ.
ಕಥೆ, ಚಿತ್ರಕಥೆ, ಸಂಭಾಷಣೆ, ಸಾಹಿತ್ಯ, ನಿರ್ದೇಶನವೂ ಮಲ್ಲೇಶ್ ಅವರದ್ದೇ. ಮಾಲಸಾಂಭ ಕಂಬೈನ್ಸ್ ಅಡಿಯಲ್ಲಿ ಈ ಚಿತ್ರ ನಿರ್ಮಿಸಿದ್ದಾರೆ. ಇತ್ತೀಚೆಗೆ ರೇಣುಕಾಂಬ ಸ್ಟುಡಿಯೋದಲ್ಲಿ ಆಡಿಯೋ ಬಿಡುಗಡೆ ನಡೆಯಿತು. ಈ ಸಂದರ್ಭದಲ್ಲಿ ಮಾತನಾಡಿದ ಮಲ್ಲೇಶ್, ‘ವ್ಯಾಪಾರದೊಂದಿಗೆ ಏನಾದರೂ ಮಾಡಬೇಕೆಂಬ ತುಡಿತ ಹೆಚ್ಚಾಗಿತ್ತು. ಗೆಳೆಯ ಆರ್ಯ ಚಿತ್ರರಂಗಕ್ಕೆ ಬರುವಂತೆ ಆಸಕ್ತಿ ಮೂಡಿಸಿದರು. ಅದರ ಪರಿಣಾಮವೇ ಚಿತ್ರ ಬರಲು ಕಾರಣವಾಯಿತು. ಕುಟುಂಬ ಸಮೇತ ನೋಡಬಹುದಾದ ಕಥೆ ಚಿತ್ರದಲ್ಲಿ ಇರಲಿದೆ’ ಎಂದರು.
‘ಇಂದಿನ ಪ್ರಪಂಚದಲ್ಲಿ ಜೀವನದ ಮೌಲ್ಯಗಳು ಅಧೋಗತಿಗೆ ಹೋಗುತ್ತಿವೆ. ಹೀಗಾಗಬಾರದು ಎಂಬಂಥ ಜಾಗೃತಿಯನ್ನು ಮೂಡಿಸುವುದೇ ಕಥೆಯ ಸಾರಾಂಶ.
ಶಿಕಾರಿಪುರ, ಸಾಗರ, ಮಲ್ಲೇನಹಳ್ಳಿ, ಹಾವೇರಿ, ಹಿರೇಕೇರಿ, ಚಿಕ್ಕೇರಿ, ಕನಕದಾಸರ ಪೀಠ ಸ್ಥಳಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ಹಿರಿಯ ಪುತ್ರ ಪೃಥ್ವಿರಾಜ್ನನ್ನು ನಾಯಕನಾಗಿ ಪರಿಚಯಿಸಿದ್ದೇನೆ. ಸಿನಿಮಾ ಬಜೆಟ್ ₹ 50 ಲಕ್ಷ. ಸೆನ್ಸಾರ್ನವರು ಯುಎ ಪ್ರಮಾಣ ಪತ್ರ ನೀಡಿದ್ದಾರೆ. ಚಿತ್ರ ಸದ್ಯವೇ ತೆರೆಗೆ ಬರಲಿದೆ’ ಎಂದರು.
ಕಲಾವಿದರಾದ ವಾಸುದೇವ್ ಆಚಾಪುರ, ಕುಳ್ಳ ಯೋಗೀಶ್, ನಾಯಕಿಯ ತಾಯಿಯಾಗಿ ಕಾಣಿಸಿಕೊಂಡಿರುವ ಪುಷ್ಪನಾಯಕ್, ಚೇತನ್ಶೆಟ್ಟಿ, ಅಕ್ಷರ ಇದ್ದರು.
ತಾರಾಗಣದಲ್ಲಿ ಸೌಪರ್ಣಿಕಾ, ನೂತನ್, ಯುವರಾಜ್, ಪ್ರವೀಣ್ರಾಜ್ ಪುತ್ತೂರು, ಪ್ರದೀಪ್ಮೆಂಥೆಲ್, ಉಮೇಶ್ ಕೆ.ಎಲ್., ಆಚಾರ್ಯರಾಘು ತಾರಾಗಣದಲ್ಲಿದ್ದಾರೆ. ನಾಲ್ಕು ಹಾಡುಗಳಿಗೆ ರಾಜ್ಭಾಸ್ಕರ್ ಸಂಗೀತ, ಸಾಹಸಗಳಿಗೆ ಜಾಗ್ವಾರ್ ಸಣ್ಣಪ್ಪ, ಛಾಯಾಗ್ರಹಣ ರವಿ-ವಾಸು, ನೃತ್ಯ ಜೈಮಾಸ್ಟರ್,ಸಂಕಲನ ಕವಿತಾ ಭಂಡಾರಿ ಅವರದ್ದು. ಸಿರಿ ಮ್ಯೂಸಿಕ್ ಸಂಸ್ಥೆಯು ಆಡಿಯೋ ಹಕ್ಕುಗಳನ್ನು ಪಡೆದುಕೊಂಡಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.