‘ನನಗೆ ಅವಕಾಶ ಸಿಕ್ಕಿದರೆ ಕನ್ನಡದಲ್ಲಿಯೂ ನಟಿಸುತ್ತೇನೆ. ನನಗೆ ಬೆಂಗಳೂರು ಅಂದರೆ ಇಷ್ಟ. ನಟನಾಗುವ ಮೊದಲು ಸಾಕಷ್ಟು ಬಾರಿ ಇಲ್ಲಿನ ಒರಾಯನ್ ಮಾಲ್, ಜಾಲಹಳ್ಳಿಯಲ್ಲಿ ಸುತ್ತಿದ್ದೇನೆ. ನನಗೆ ಇಲ್ಲಿ ಸಾಕಷ್ಟು ಸ್ನೇಹಿತರಿದ್ದಾರೆ’ ಎಂದು ಕಣ್ಣರಳಿಸಿ ನಕ್ಕರು ನಟ ವಿಜಯ್ ದೇವರಕೊಂಡ.
ವಿಜಯ್ ನಟಿಸಿರುವ ‘ನೋಟ’ ಚಿತ್ರ ಇದೇ 5ರಂದು ತೆರೆಕಾಣುತ್ತಿದೆ. ಆನಂದ್ ಶಂಕರ್ ಈ ಚಿತ್ರ ನಿರ್ದೇಶಿಸಿದ್ದಾರೆ. ಇದು ಪೊಲಿಟಿಕಲ್ ಥ್ರಿಲ್ಲರ್ ಚಿತ್ರ. ಸಾಮಾನ್ಯ ವ್ಯಕ್ತಿಯೊಬ್ಬ ರಾಜಕೀಯ ಕ್ಷೇತ್ರ ಪ್ರವೇಶಿಸಿದರೆ ಏನೆಲ್ಲಾ ಆಗುತ್ತದೆ ಎನ್ನುವುದರ ಸುತ್ತ ಚಿತ್ರಕಥೆ ಹೆಣೆಯಲಾಗಿದೆಯಂತೆ. ಕೆ.ಇ. ಜ್ಞಾನವೇಲ್ ರಾಜ ಬಂಡವಾಳ ಹೂಡಿದ್ದಾರೆ. ತೆಲುಗು ಮತ್ತು ತಮಿಳಿನಲ್ಲಿ ಏಕಕಾಲಕ್ಕೆ ಸಿನಿಮಾ ತೆರೆ ಕಾಣುತ್ತಿದೆ.
ಚಿತ್ರದ ಪ್ರಚಾರಕ್ಕಾಗಿ ಬುಧವಾರ ಬಂದಿದ್ದ ವಿಜಯ್ ದೇವರಕೊಂಡ ಬೆಂಗಳೂರಿನ ಜೊತೆಗಿರುವ ನಂಟನ್ನು ಬಿಚ್ಚಿಟ್ಟರು. ‘ಬೆಂಗಳೂರಿನ ಹಲವು ಸ್ಥಳಗಳ ಪರಿಚಯ ನನಗಿದೆ. ಅಲ್ಲೆಲ್ಲಾ ತಿರುಗಾಡಿ ಟೀ ಕುಡಿದಿದ್ದೇನೆ. ಶಿವಣ್ಣ, ಚಿರಂಜೀವಿ ಸರ್ ನನ್ನ ನಟನೆ ಬಗ್ಗೆ ಮೆಚ್ಚುಗೆ ಸೂಚಿಸಿರುವುದು ಖುಷಿ ಕೊಟ್ಟಿದೆ’ ಎಂದರು.
‘ಹ್ಯಾಟ್ರಿಕ್ ಹೀರೊ’ ಶಿವರಾಜ್ ಕುಮಾರ್, ‘ನಾನು ರಜನಿಕಾಂತ್ ಅವರ ಅಭಿಮಾನಿ. ನಾನು ಅವರನ್ನು ಮೊದಲು ತಬ್ಬಿಕೊಂಡಾಗ ಮೂರು ದಿನಗಳ ಕಾಲ ಸ್ನಾನ ಮಾಡಿರಲಿಲ್ಲ. ನಾನು ಈಗ ವಿಜಯ್ ದೇವರಕೊಂಡ ಅವರ ಅಭಿಮಾನಿ ಆಗಿದ್ದೇನೆ’ ಎಂದು ಹೇಳಿಕೊಂಡರು.
ನಿರ್ಮಾಪಕ ಜ್ಞಾನವೇಲ್ ರಾಜ ಅವರಿಗೆ ಶಿವರಾಜ್ ಕುಮಾರ್ ಅವರ ಚಿತ್ರಗಳೆಂದರೆ ಇಷ್ಟವಂತೆ. ಶಿವಣ್ಣ ನಟಿಸಲಿರುವ ಮುಂದಿನ ಚಿತ್ರವೊಂದಕ್ಕೆ ಬಂಡವಾಳ ಹೂಡಲು ಅವರು ನಿರ್ಧರಿಸಿದ್ದಾರೆ. ಈ ಚಿತ್ರವನ್ನು ತೆಲುಗಿನ ಮುತ್ತಣ್ಣ ನಿರ್ದೇಶಿಸಲಿದ್ದಾರೆ.