ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಯವಿಟ್ಟು ನನ್ನ ಚಿತ್ರ ನೋಡಿ: 'ಲಾಲ್ ಸಿಂಗ್ ಚಡ್ಡಾ’ ಬಹಿಷ್ಕಾರಕ್ಕೆ ಅಮೀರ್ ಅಳಲು

Last Updated 7 ಆಗಸ್ಟ್ 2022, 9:29 IST
ಅಕ್ಷರ ಗಾತ್ರ

ಮುಂಬೈ: ದಯವಿಟ್ಟು ‘ಲಾಲ್ ಸಿಂಗ್ ಚಡ್ಡಾ’ಚಿತ್ರವನ್ನು ವೀಕ್ಷಿಸುವಂತೆ ಬಾಲಿವುಡ್ ಸೂಪರ್ ಸ್ಟಾರ್ ಅಮೀರ್ ಖಾನ್ ಮನವಿ ಮಾಡಿದ್ದಾರೆ.. ತಮ್ಮ ಮುಂಬರುವ ಚಿತ್ರವನ್ನು ಬಹಿಷ್ಕರಿಸುವಂತೆ ಟ್ವಿಟರ್‌ನಲ್ಲಿ ಟ್ರೆಂಡ್ ಆಗಿರುವ ಹ್ಯಾಷ್‌ಟ್ಯಾಗ್ ಕುರಿತಂತೆ ಅವರು ಈ ರೀತಿ ಪ್ರತಿಕ್ರಿಯಿಸಿದ್ದಾರೆ.

ಟ್ವಿಟರ್‌ನಲ್ಲಿ ಸಾವಿರಾರು ಪೋಸ್ಟ್‌ಗಳಿಗೆ #boycottlaalsinghchaddha ಮತ್ತು #boycottbollywood ಎಂಬ ಹ್ಯಾಷ್‌ಟ್ಯಾಗ್‌ಗಳನ್ನು ನೀಡಲಾಗಿದೆ. 1994ರ ಹಾಲಿವುಡ್ ಚಲನಚಿತ್ರ ‘ಫಾರೆಸ್ಟ್ ಗಂಪ್’ನ ರಿಮೇಕ್ ಇದಾಗಿದೆ.

‘ಬಾಲಿವುಡ್ ಅನ್ನು ಬಹಿಷ್ಕರಿಸಿ... ಅಮೀರ್ ಖಾನ್ ಅನ್ನು ಬಹಿಷ್ಕರಿಸಿ... ‘ಲಾಲ್ ಸಿಂಗ್ ಚಡ್ಡಾ’ವನ್ನು ಬಹಿಷ್ಕರಿಸಿ... ಎಂಬ ಹ್ಯಾಷ್‌ಟ್ಯಾಗ್‌ಗಳನ್ನು ನೋಡಿ ನಾನು ಅತ್ಯಂತ ದುಃಖಿತನಾಗಿದ್ದೇನೆ. ಇದನ್ನು ತಮ್ಮ ಹೃದಯದಿಂದ ಹೇಳುತ್ತಿರುವ ಬಹಳಷ್ಟು ಜನರು, ನಾನು ಭಾರತವನ್ನು ದ್ವೇಷಿಸುವ ವ್ಯಕ್ತಿ ಎಂದು ನಂಬುತ್ತಾರೆ. ಆದರೆ, ಅದು ಶುದ್ಧ ಸುಳ್ಳು’ಎಂದು 57 ವರ್ಷದ ನಟ ಅಮೀರ್ ಖಾನ್‌ ಅವರು ಭಾನುವಾರ ರಾತ್ರಿ ಮುಂಬೈನ ಗುಂಪು ಸಂದರ್ಶನದಲ್ಲಿ ಹೇಳಿದ್ದಾರೆ.

ಭಾರತದಲ್ಲಿ ‘ಅಸಹಿಷ್ಣುತೆ’ಹೆಚ್ಚಾಗುತ್ತಿರುವ ಹಲವಾರು ಘಟನೆಗಳಿಂದ ನಾನು ಗಾಬರಿಗೊಂಡಿದ್ದೇನೆ ಮತ್ತು ನನ್ನ ಪತ್ನಿ ಕಿರಣ್ ರಾವ್(ಈಗ ವಿಚ್ಚೇದನ ಪಡೆದಿದ್ದಾರೆ) ಸಹ ಬಹುಶಃ ನಾವು ದೇಶ ತೊರೆಯಬೇಕಾಗಬಹುದು ಎಂದು ಸಲಹೆ ನೀಡಿರುವುದಾಗಿ 2015 ರಲ್ಲಿ ಅಮೀರ್ ಖಾನ್ ನೀಡಿದ್ದ ಹೇಳಿಕೆ ನೆನಪಿಸಿಕೊಂಡಿರುವ ಟ್ವಿಟರ್ ಬಳಕೆದಾರರು, ‘ಲಾಲ್ ಸಿಂಗ್ ಚಡ್ಡಾ’ಚಿತ್ರ ಬಹಿಷ್ಕಾರಕ್ಕೆ ಕರೆ ನೀಡುವ ಅನೇಕ ಪೋಸ್ಟ್‌ಗಳನ್ನು ಮಾಡಿದ್ದಾರೆ.

ತಮ್ಮ ಹೊಸ, ಬಹು ನಿರೀಕ್ಷಿತ ಚಿತ್ರದಿಂದ ದೂರವಿರಿ ಎಂಬ ಕರೆಗಳಿಗೆ ಪ್ರತಿಕ್ರಿಯಿಸಿದ ಅಮೀರ್, ನಾನು ಭಾರತವನ್ನು ಪ್ರೀತಿಸುತ್ತೇನೆ ಮತ್ತು ಬೇರೆ ರೀತಿಯಲ್ಲಿ ಯೋಚಿಸಬೇಡಿ ಎಂದು ಅಭಿಮಾನಿಗಳಿಗೆ ವಿನಂತಿಸಿದರು.

‘ನಾನು ನನ್ನ ದೇಶವನ್ನು ನಿಜವಾಗಿಯೂ ಪ್ರೀತಿಸುತ್ತೇನೆ.. ಕೆಲವರು ತಪ್ಪಾಗಿ ಭಾವಿಸಿದರೆ ಅದು ದುರದೃಷ್ಟಕರ. ಅದು ಹಾಗಲ್ಲ ಎಂದು ನಾನು ಎಲ್ಲರಿಗೂ ಭರವಸೆ ನೀಡಲು ಬಯಸುತ್ತೇನೆ. ಆದ್ದರಿಂದ, ದಯವಿಟ್ಟು ನನ್ನ ಚಿತ್ರಗಳನ್ನು ಬಹಿಷ್ಕರಿಸಬೇಡಿ, ನನ್ನ ಚಿತ್ರಗಳನ್ನು ವೀಕ್ಷಿಸಿ’ಎಂದು ಹೇಳಿದರು.

‘ಸೀಕ್ರೆಟ್ ಸೂಪರ್‌ಸ್ಟಾರ್’ಖ್ಯಾತಿಯ ಅದ್ವೈತ್ ಚಂದನ್ ನಿರ್ದೇಶಿಸಿರುವ ‘ಲಾಲ್ ಸಿಂಗ್ ಚಡ್ಡಾ’ ಚಿತ್ರದಲ್ಲಿ ಲಾಲ್ (ಅಮೀರ್ ನಿರ್ವಹಿಸಿರುವ ಪಾತ್ರ) ಎಂಬ ಸರಳ ವ್ಯಕ್ತಿಯು ಕನಸುಗಳು ಮತ್ತು ಪ್ರೀತಿಗಾಗಿ ನಡೆಸುವ ಅಸಾಧಾರಣ ಪ್ರಯಾಣವನ್ನು ತೆರೆ ಮೇಲೆ ತರಲಾಗಿದೆ. ಚಿತ್ರದಲ್ಲಿ ಮೋನಾ ಸಿಂಗ್ ಮತ್ತು ನಾಗ ಚೈತನ್ಯ ಕೂಡ ಇದ್ದಾರೆ.

‘ನಾನು ಪತ್ನಿ ಕಿರಣ್‌ ಜೊತೆ ಮಾತನಾಡುವಾಗ, ‘ನಾವು ಭಾರತದಿಂದ ಹೊರಹೋಗಬೇಕಾಬಹುದೇ?’ಎಂದು ಅವಳು ಹೇಳಿದಳು. ಅದು ಕಿರಣ್‌ ಕೊಟ್ಟ ಆಘಾತಕಾರಿ ಮತ್ತು ದೊಡ್ಡ ಹೇಳಿಕೆಯಾಗಿದೆ. ಅವಳು ತನ್ನ ಮಗುವಿನ (ಮಗ ಆಜಾದ್) ಭವಿಷ್ಯದ ಬಗ್ಗೆ ಭಯಪಡುತ್ತಾಳೆ. ನಮ್ಮ ಸುತ್ತಲಿನ ವಾತಾವರಣ ಏನಾಗಬಹುದು ಎಂದು ಭಯಪಡುತ್ತಿದ್ದಾಳೆ. ಅವಳು ಪ್ರತಿದಿನ ಪತ್ರಿಕೆಗಳನ್ನು ತೆರೆಯಲು ಹೆದರುತ್ತಾಳೆ’ಎಂದು 2015 ರಲ್ಲಿ ರಾಮನಾಥ್ ಗೋಯೆಂಕಾ ಎಕ್ಸಲೆನ್ಸ್ ಇನ್ ಜರ್ನಲಿಸಂ ಪ್ರಶಸ್ತಿ ಕಾರ್ಯಕ್ರಮದಲ್ಲಿ ಅಮೀರ್ ಖಾನ್ ಹೇಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT