ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಜಾವಾಣಿ ಸಾಧಕರು 2023 | ಮಂಸೋರೆ -‘ಹರಿವಿ’ನಿಂದ ಸಾಧನೆಯ ಸರಿದಾರಿವರೆಗೆ..

Last Updated 1 ಜನವರಿ 2023, 4:13 IST
ಅಕ್ಷರ ಗಾತ್ರ

'ಪ್ರಜಾವಾಣಿ' ಪಾಲಿಗಿದು ಅಮೃತ ಮಹೋತ್ಸವದ ವರ್ಷ. 75 ವರ್ಷಗಳ ಹಾದಿಯಲ್ಲಿ ಜನಮುಖಿಯಾಗಿರುವ ಪತ್ರಿಕೆ, ನಮ್ಮ ನಡುವಿನ ಪ್ರತಿಭಾವಂತರನ್ನು ಗುರುತಿಸುವ ಕೆಲಸವನ್ನೂ ಲಾಗಾಯ್ತಿನಿಂದ ಮಾಡುತ್ತಾ ಬಂದಿದೆ. 2020ರಿಂದ ಪ್ರತಿವರ್ಷ ಆಯಾ ಇಸವಿಯ ಕೊನೆಯ ಎರಡು ಅಂಕಿಗಳಿಗೆ ಹೊಂದುವಷ್ಟು ಸಂಖ್ಯೆಯ ಸಾಧಕರನ್ನು ಆಯ್ಕೆ ಮಾಡಿ, ಸನ್ಮಾನಿಸುತ್ತಿರುವುದೇ ಇದಕ್ಕೆ ಸಾಕ್ಷಿ. ಶಿಕ್ಷಣ, ಸಮಾಜಸೇವೆ, ವಿಜ್ಞಾನ, ಕ್ರೀಡೆ, ಸಾಹಿತ್ಯ–ಕಲೆ–ಮನರಂಜನೆ, ಪರಿಸರ, ಉದ್ಯಮ, ಸಂಶೋಧನೆ, ಆಡಳಿತ, ಕನ್ನಡ ಕೈಂಕರ್ಯ ಹೀಗೆ ಹಲವು ಕ್ಷೇತ್ರಗಳಲ್ಲಿ ತಮ್ಮಷ್ಟಕ್ಕೆ ತಾವು ಮುಗುಮ್ಮಾಗಿ ಸೇವೆ ಸಲ್ಲಿಸುತ್ತಿರುವವರನ್ನು 23 ಸಾಧಕರನ್ನು 2023ರ ಹೊಸವರ್ಷಕ್ಕೆ ಸಾಂಕೇತಿಕವಾಗಿ ಮಾಡಲಾಗಿದೆ. ಸಾಧಕರ ಕಿರು ಪರಿಚಯವನ್ನು ಇಲ್ಲಿ ನೀಡಲಾಗಿದ್ದು, ಅವರ ಹೆಜ್ಜೆಗುರುತುಗಳು ಈ ಅಕ್ಷರಚೌಕಟ್ಟನ್ನೂ ಮೀರಿದ್ದು. ಹೊಸ ವರ್ಷವನ್ನು ಈ ಸಾಧಕರೊಟ್ಟಿಗೆ ಬರಮಾಡಿಕೊಳ್ಳುವುದಕ್ಕೆ ಪತ್ರಿಕಾ ಬಳಗ ಹರ್ಷಿಸುತ್ತದೆ.

****


ಹೆಸರು:
ಮಂಸೋರೆ

ವೃತ್ತಿ: ಸಿನಿಮಾ ನಿರ್ದೇಶಕ

ಸಾಧನೆ: ಸಾಮಾಜಿಕ ಕಳಕಳಿಯ ಸಿನಿಮಾಗಳ ಕಟ್ಟುವಿಕೆ

ಮಂಸೋರೆ ಕನ್ನಡ ಚಿತ್ರರಂಗದ ಪ್ರಮುಖ ನಿರ್ದೇಶಕ. ‘ನಾತಿಚರಾಮಿ’,‘ಹರಿವು’, ‘ಆ್ಯಕ್ಟ್‌–1978’ ಮುಂತಾದ ಸಾಮಾಜಿಕ ಸಂದೇಶವುಳ್ಳ ಚಿತ್ರಗಳನ್ನು ನಿರ್ದೇಶಿಸಿರುವ ಅವರು ರಾಷ್ಟ್ರ ಪ್ರಶಸ್ತಿಗೆ ಪಾತ್ರರಾದ ಸಾಧಕರೂ ಹೌದು. ವಿಭಿನ್ನ ದೃಷ್ಟಿಕೋನದ ಸಿನಿಮಾಗಳ ಮೂಲಕ ಕನ್ನಡದ ಪ್ರೇಕ್ಷಕರ ಮನ ಗೆದ್ದಿರುವ ಅವರು, ಸದ್ಯ ‘19.20.21’ ಚಿತ್ರದ ಬಿಡುಗಡೆಯ ಸಿದ್ಧತೆಯಲ್ಲಿದ್ದಾರೆ.

2014ರಲ್ಲಿ ಅವರು ನಿರ್ದೇಶಿಸಿದ್ದ, ತಂದೆ ಮತ್ತು ಮಗನ ಭಾವನಾತ್ಮಕ ಕಥೆ ಒಳಗೊಂಡ ‘ಹರಿವು’ ಸಿನಿಮಾ ಕೂಡ ರಾಷ್ಟ್ರ‍ ಪ್ರಶಸ್ತಿ ಪಡೆದಿತ್ತು. ಅವರ ಎರಡನೇ ಚಿತ್ರ ‘ನಾತಿಚರಾಮಿ’ಯಲ್ಲಿ ಆಧುನಿಕ ಜಗತ್ತಿನ ಮಹಿಳೆಯೊಬ್ಬಳ ದೈಹಿಕ ಮತ್ತು ಮಾನಸಿಕ ತುಮುಲ, ತಳಮಳಗಳನ್ನು ಕಟ್ಟಿಕೊಟ್ಟಿದ್ದರು. 66ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯ ಐದು ವಿಭಾಗಗಳಲ್ಲಿ ಈ ಸಿನಿಮಾ ಪ್ರಶಸ್ತಿ ಪಡೆದಿದೆ. ಕನ್ನಡ ಚಿತ್ರರಂಗದ ಮಟ್ಟಿಗೆ ಇದೊಂದು ಹೊಸ ದಾಖಲೆ. ಕಿರುಚಿತ್ರ ನಿರ್ಮಾಣದಲ್ಲೂ ಗಮನ ಸೆಳೆದವರು ಈ ನಿರ್ದೇಶಕ. ಮಂಸೋರೆ ಏನೇ ಮಾಡಲಿ, ಅದರ ಹಿಂದೆ ಸಾಮಾಜಿಕ ಕಳಕಳಿಯ ಎಳೆಯೊಂದು ಕೆಲಸ ಮಾಡುತ್ತದೆ ಎನ್ನುವ ಮಾತು ಜನಜನಿತ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT