ಅಲ್ಲು ಅರ್ಜುನ್ ನಟನೆಯ ಚಿತ್ರ ‘ಪುಷ್ಪ’ ನ. 6ರಿಂದ ಚಿತ್ರೀಕರಣ ಮುಂದುವರಿಯಲಿದೆ. ಚಿತ್ರದ ಕೆಲವು ಭಾಗಗಳನ್ನು ಕೇರಳದ ಕಾಡಿನಲ್ಲಿ ಚಿತ್ರೀಕರಿಸಲಾಗಿತ್ತು. ಕೋವಿಡ್ ಕಾರಣಕ್ಕೆ ಕೆಲಕಾಲ ಶೂಟಿಂಗ್ ಸ್ಥಗಿತಗೊಂಡಿತ್ತು.8 ತಿಂಗಳ ಬಳಿಕ ದೊಡ್ಡ ಬಜೆಟ್ನ ಇತರ ಚಿತ್ರಗಳೊಂದಿಗೆ ‘ಪುಷ್ಪʼ ಚಿತ್ರೀಕರಣ ಆರಂಭಿಸಲು ಸಿದ್ಧತೆ ನಡೆದಿದೆ.
ನವೆಂಬರ್ನಲ್ಲಿ ವಿಶಾಖಪಟ್ಟಣದಲ್ಲಿ ಚಿತ್ರೀಕರಣ ನಡೆಯಲಿದೆ.
ವೈಲ್ಡ್ಡಾಗ್, ಆರ್ಆರ್ರ್ (ಟ್ರಿಪಲ್ ಆರ್), ರಾಧೆ ಶ್ಯಾಮ್ ಮತ್ತು ಕ್ರ್ಯಾಕ್ ಚಿತ್ರಗಳು ಮತ್ತೆ ಚಿತ್ರೀಕರಣ ಮುಂದುವರಿಸಿವೆ. ಹಳ್ಳಿಗಾಡಿನ ಆಕ್ಷನ್ ನೋಟ ‘ಪುಷ್ಪ’ ಚಿತ್ರದಲ್ಲಿದೆ.
ಸುಕುಮಾರ್ ಅವರು ಚಿತ್ರದ ನಿರ್ದೇಶಕರು ಮತ್ತು ನಿರ್ಮಾಪಕರು.ರಕ್ತಚಂದನ ಕಳ್ಳಸಾಗಣೆಗಾರರ ಸುತ್ತ ಕಥೆ ಹೆಣೆಯಲಾಗಿದೆ. ಇಲ್ಲಿ ಚಿತ್ರದ ಪಾತ್ರಕ್ಕಾಗಿ ಅಲ್ಲುಅರ್ಜುನ್ ಸಾಕಷ್ಟು ದೈಹಿಕ ಕಸರತ್ತು ನಡೆಸಿದ್ದಾರೆ.
ತಿರುಮಲ ಬೆಟ್ಟ ವ್ಯಾಪ್ತಿಯ ಶೇಷಾಚಲಂ ಅರಣ್ಯ ಪ್ರದೇಶದಲ್ಲಿ ಕಥೆ ನಡೆಯುವಂತೆ ಚಿತ್ರಿಸಲಾಗಿದೆ. ಅಲ್ಲು ಅವರದ್ದು ಚಿತ್ರದಲ್ಲಿ ಲಾರಿ ಚಾಲಕನ ಪಾತ್ರ. ರಶ್ಮಿಕಾ ಮಂದಣ್ಣ ಇಲ್ಲಿ ಚಿತ್ತೂರು ಹುಡುಗಿ ಆಗಿ ಕಾಣಿಸಿಕೊಳ್ಳಲಿದ್ದಾರೆ. ಅದಕ್ಕಾಗಿ ಅವರು ಚಿತ್ತೂರು ಪ್ರದೇಶದ ಭಾಷೆಯನ್ನೂ ಕಲಿಯುತ್ತಿದ್ದಾರೆ. ಖ್ಯಾತನಟ ಮಾಧವನ್ ಕೂಡಾ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಮೈತ್ರಿ ಮೂವಿ ಮೇಕರ್ಸ್ ಈ ಚಿತ್ರ ನಿರ್ಮಿಸುತ್ತಿದೆ.ಹಿಂದಿ, ತಮಿಳು, ಮಲಯಾಳಂ ಮತ್ತು ಕನ್ನಡ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.