ಬೆಂಗಳೂರು: ‘ನನ್ನ ಮಗಳು ಅವಳಿಗೇನಿಷ್ಟವೋ ಅದನ್ನು ಹುಡುಕಿಕೊಂಡು ಅದರಂತೆ ಮಾಡಲಿ. ಒಂದಿಷ್ಟು ಜವಾಬ್ದಾರಿ ತೆಗೆದುಕೊಳ್ತಾಳೆ. ಎಲ್ಲೇ ಹೋದರೂ ನನ್ನ ಮರ್ಯಾದೆ ಉಳಿಸ್ತಾಳೆ ಅನ್ನುವುದು ಖಾತ್ರಿ ಇದೆ’ ಎಂದು ಅಮೃತಾ ನಾಯ್ಡು ಅವರು ಮಗಳ ಬಗ್ಗೆ ಕಲರ್ಸ್ ವಾಹಿನಿಗೆ ನೀಡಿದ ‘ನನ್ನಮ್ಮ ಸೂಪರ್ ಸ್ಟಾರ್’ ಸರಣಿಯ ಪ್ರೋಮೊ ಸಂದರ್ಶನದಲ್ಲಿ ಹೇಳಿದ್ದರು.
‘ನಾನು ನನ್ನಮ್ಮ ತುಂಬಾ ಕ್ಲೋಸ್. ಯಾಕಂದ್ರೆ ನಾನು ಅವಳನ್ನು ತುಂಬಾ ಪ್ರೀತಿಸುತ್ತೇನೆ. ನಂಗೆ ಮೇಕಪ್ ಅಂದ್ರೆ ತುಂಬಾ ಇಷ್ಟ. ಅದಕ್ಕಾಗಿಯೇ ನಾನು ಕೂದಲನ್ನು ನೇರ ಮಾಡುವುದೂ ಇಲ್ಲ. ಕರ್ಲಿ (ಗುಂಗುರು ವಿನ್ಯಾಸ) ಮಾಡುವುದೂ ಇಲ್ಲ’ ಎಂದು ಇದೇ ಪ್ರೋಮೊದಲ್ಲಿ ಸಮನ್ವಿ ಹೇಳಿದ್ದಳು.
ಈ ಮುಗ್ದ ಭಾವದ ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಯುಟ್ಯೂಬ್ ಹಾಗೂ ಗೂಗಲ್ನಲ್ಲಿ ಹೆಚ್ಚು ಹುಡುಕಾಟಕ್ಕೆ ಒಳಗಾಗಿದ್ದಾಳೆ ಸಮನ್ವಿ.
ಆದರೆ ಸಮನ್ವಿ ಭೌತಿಕವಾಗಿ ಇಲ್ಲ. ಅಪಘಾತದಲ್ಲಿ ಸಾವನ್ನಪ್ಪಿದ್ದಾಳೆ.
ದುಃಖದ ಮೇಲೆ ದುಃಖವೇ ಬಂದೆರಗಿದ್ದಿದ್ದರೆ ಅದು ನಟಿ ಅಮೃತಾ ನಾಯ್ಡು ಅವರ ಬಾಳಿನಲ್ಲಿ... ಈ ಗದ್ಗತಿತ ಮಾತುಗಳು ಕಿರುತೆರೆ ವಲಯದಲ್ಲಿ ಗುರುವಾರ (ಜ. 13) ಸಂಜೆಯಿಂದ ಕೇಳಿಬರುತ್ತಿವೆ. ಕಲಾವಿದರಷ್ಟೇ ಅಲ್ಲ, ಕಿರುತೆರೆಯ ಲಕ್ಷಾಂತರ ವೀಕ್ಷಕರು ತಮ್ಮ ಮನೆಯ ಮಗುವೇ ಇನ್ನಿಲ್ಲವಾದಂತೆ ಮರುಗುತ್ತಿದ್ದಾರೆ.
ಈಗಾಗಲೇ ಒಂದು ಮಗುವನ್ನು ಕಳೆದುಕೊಂಡಿದ್ದಾರೆ ಅಮೃತಾ. ಸಮನ್ವಿಗೆ ಜತೆಯಾಗಲು ಇನ್ನೊಂದು ಮಗುವಿನ ನಿರೀಕ್ಷೆಯಲ್ಲಿದ್ದರು. ಆದರೆ, ಸಮನ್ವಿಯೇ ಇಲ್ಲವಾಗಿದ್ದಾಳೆ.
‘ನನ್ನಮ್ಮ ಸೂಪರ್ಸ್ಟಾರ್’ ರಿಯಾಲಿಟಿ ಷೋದಲ್ಲಿ ಮುದ್ದು ಮಾತು, ಮುಗ್ದ ನೋಟ, ಚುರುಕುತನದಿಂದ ಎಲ್ಲರ ಮನ ಗೆದ್ದ ಆರು ವರ್ಷದ ಸಮನ್ವಿ ರಸ್ತೆ ಅಪಘಾತದಲ್ಲಿ ಗುರುವಾರ ಮೃತಪಟ್ಟ ಬಳಿಕ ದುಃಖದ ಕಾರ್ಮೋಡ ಸೃಷ್ಟಿಯಾಗಿದೆ.
‘ಏನು ಹೇಳಬೇಕೆಂದೇ ಗೊತ್ತಾಗುತ್ತಿಲ್ಲ. ಸಮನ್ವಿ ಇಲ್ಲ ಎನ್ನುವುದನ್ನು ಊಹಿಸಿಕೊಳ್ಳಲೂ ಸಾಧ್ಯವಿಲ್ಲ. ಸಮನ್ವಿ ಹಾಗೂ ಅಮೃತಾ ತುಂಬಾ ಹಚ್ಚಿಕೊಂಡಿದ್ದರು. ಇಡೀ ತಂಡದಲ್ಲಿ ಅದೇ ಪ್ರೀತಿಯ ವಾತಾವರಣ ಇತ್ತು. ಅಮೃತಾ ಗರ್ಭಿಣಿ ಆಗಿದ್ದರಿಂದ ಅವರಿಂದ ದೊಡ್ಡ ಟಾಸ್ಕ್ಗಳನ್ನು ಮಾಡಿಸಲಾಗುವುದಿಲ್ಲ ಎಂಬ ಕಾರಣಕ್ಕೆ ಕೆಲಕಾಲ ಅವರು ಷೋದಿಂದ ದೂರ ಇದ್ದರು.ಆದರೆ, ವಿಧಿ ಈ ರೀತಿ ಆಟವಾಡಿದೆ’ ಎಂದು ದುಃಖಿತರಾದರು ನಟಿ ತಾರಾ.
‘ನನಗೆ ಹೆಣ್ಣುಮಗುವಿಲ್ಲ. ಆದರೆ, ಆ ರಿಯಾಲಿಟಿ ಷೋದಲ್ಲಿ ಭಾಗವಹಿಸಿದ ಸಮನ್ವಿಯಂಥ ಪುಟಾಣಿಗಳನ್ನು ನೋಡುತ್ತಲೇ ಖುಷಿ ಕಾಣುತ್ತಿದ್ದೆ. ಆದರೆ, ಈಗ ಸಮನ್ವಿಯೇ ಇಲ್ಲ. ಅವರ ಅಮ್ಮ, ಅಪ್ಪನನ್ನು ನೆನೆದು ವ್ಯಥೆಯೆನಿಸುತ್ತದೆ’ ಎಂದು ಅದೇ ಕಾರ್ಯಕ್ರಮದ ತೀರ್ಪುಗಾರ ಸೃಜನ್ ಲೋಕೇಶ್ ದುಃಖ ವ್ಯಕ್ತಪಡಿಸಿದರು.
ಐ ಹೇಟ್ ಯೂ ಅಂದಿದ್ದಳು
‘ಯಾವುದೋ ಟಾಸ್ಕ್ನಲ್ಲಿ ಅಡುಗೆ ಮಾಡುವ ಸವಾಲಿತ್ತು. ಸಮನ್ವಿ ಹಾಗೂ ಅಮೃತಾ ಅವರೇ ಗೆದ್ದರು. ಅದ್ಯಾಕೋ ಸಮನ್ವಿಗೆ ಅಲ್ಲಿನ ಸೂಚನೆಯೋ, ಆಟದ ವೈಖರಿಯೋ ಹಿಡಿಸಲಿಲ್ಲ. ಐ ಹೇಟ್ ಯೂ. ಎಲ್ಲಾ ನಿನ್ನಿಂದಾನೇ ಆಗಿದ್ದು ಎಂದು ಮುಗ್ದ ಕೋಪ ತೋರಿದ್ದಳು. ತುಂಬಾ ಚೂಟಿ ಹುಡುಗಿ. ಅವಳನ್ನು ಕಳೆದುಕೊಂಡಿದ್ದೇವೆ’ ಎಂದು ಕಾರ್ಯಕ್ರಮದ ನಿರೂಪಕಿ ಅನುಪಮಾ ಬೇಸರಿಸಿದರು.
ಶುಕ್ರವಾರ ಮಧ್ಯಾಹ್ನ ವೇಳೆಗೆ ಸಮನ್ವಿ ಅಂತ್ಯಕ್ರಿಯೆ ನಡೆಯಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.