ಬೆಂಗಳೂರು: ಎಸ್.ಎಸ್. ರಾಜಮೌಳಿ ನಿರ್ದೇಶನದ ಬಹುನಿರೀಕ್ಷಿತ ‘ಆರ್ಆರ್ಆರ್’ ಸಿನಿಮಾ ಇದೇ ಮಾರ್ಚ್ 25 ರಂದು ಜಗತ್ತಿನಾದ್ಯಂತ ಬಿಡುಗಡೆಯಾಗಲಿದೆ.
ಈ ಹಿನ್ನೆಲೆಯಲ್ಲಿ ಇಂದು ಸಂಜೆ ಚಿಕ್ಕಬಳ್ಳಾಪುರದ ಅಗಲಗುರ್ಕಿ ಬಳಿ ಆರ್ಆರ್ಆರ್ ಬಿಡುಗಡೆ ಪೂರ್ವ ಅದ್ಧೂರಿ ಕಾರ್ಯಕ್ರಮ ಆಯೋಜಿಸಲಾಗಿದೆ. ಇದಕ್ಕೂ ಮುನ್ನ ದೇವನಹಳ್ಳಿ ಬಳಿ ಖಾಸಗಿ ರೆಸಾರ್ಟ್ ಒಂದರಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಚಿತ್ರತಂಡ,ಆರ್ಆರ್ಆರ್ ಸಿನಿಮಾ ಬಗ್ಗೆ ಸಾಕಷ್ಟು ವಿಷಯಗಳನ್ನು ಮಾಧ್ಯಮಗಳೊಂದಿಗೆ ಹಂಚಿಕೊಂಡಿತು.
ಪ್ರಶ್ನೆಯೊಂದಕ್ಕೆ ಉತ್ತರಿಸುವಾಗ ರಾಜಮೌಳಿ ಅವರು ಸ್ವಾತಂತ್ರ್ಯ ಹೋರಾಟಗಾರ್ತಿ ಕಿತ್ತೂರು ಚನ್ನಮ್ಮ ಅವರನ್ನು ಸ್ಮರಿಸಿಕೊಂಡರು.
‘ನಾನು ಹುಟ್ಟಿದ್ದು ಕರ್ನಾಟಕದಲ್ಲಿ, ಬೆಳೆದಿದ್ದು ಆಂಧ್ರಪ್ರದೇಶದಲ್ಲಿ, ವೃತ್ತಿ ಜೀವನ ಪ್ರಾರಂಭಿಸಿದ್ದು ತಮಿಳುನಾಡಿನಿಂದ. ಇವಾಗ ಇರುವುದು ತೆಲಂಗಾಣದಲ್ಲಿ. ಪ್ರತಿಯೊಂದು ಊರಿಗೆ ಅದರದ್ದೇಯಾದ ಮಹತ್ವವಿದೆ. ನಾನು ಎಲ್ಲವನ್ನೂ ಪ್ರೀತಿಸುತ್ತೇನೆ. ಆದರೆ, ಒಂದಕ್ಕೆ ಅಂಟಿಕೊಂಡಿರಲು ಇಷ್ಟಪಡುವುದಿಲ್ಲ’ ಎಂದರು.
‘ಆರ್ಆರ್ಆರ್ ಸಿನಿಮಾದಲ್ಲಿ ರಾಣಿ ಚನ್ನಮ್ಮಳ ಪ್ರಸ್ತಾಪವಿದೆ. ಚನ್ನಮ್ಮಳ ಬಗ್ಗೆ ನಾನು ನನ್ನ ಬಾಲ್ಯಜೀವನದಲ್ಲಿ ಓದಿ ತಿಳಿದುಕೊಂಡಿದ್ದೆ. ಅವರು ನಮಗೆ ಅದ್ಭುತ ಸ್ಪೂರ್ತಿ’ ಎಂದರು.
ಆರ್ಆರ್ಆರ್ ಸಿನಿಮಾದ ಮತ್ತೊಂದು ಟ್ರೈಲರ್ ಬಿಡುಗಡೆಯಾಗುವುದಿಲ್ಲ. ನೇರವಾಗಿ ಸಿನಿಮಾ ಬಿಡುಗಡೆ ಮಾಡುತ್ತೇವೆ. ಇನ್ಮುಂದೆ ಅಭಿಮಾನಿಗಳನ್ನು ಹೆಚ್ಚು ಕಾಯಿಸುವುದಿಲ್ಲ ಎಂದರು. ಕಾರ್ಯಕ್ರಮದಲ್ಲಿನಟ ಜೂನಿಯರ್ ಎನ್ಟಿಆರ್, ರಾಮ್ಚರಣ್, ವೆಂಕಟರಾಜು ಇದ್ದರು.