ರೈತರ ವಿಚಾರದಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿ ಟ್ರೋಲ್ ಆಗಿದ್ದ ಬಾಲಿವುಡ್ ಸ್ಟಾರ್ ನಟ ಸಲ್ಮಾನ್ ಖಾನ್ ರೈತನಾಗಿ ಕೆಸರು ಗದ್ದೆಯಲ್ಲಿ ಕೆಲಸ ಮಾಡುವ ಮೂಲಕ ಟ್ರೋಲಿಗರಿಗೆ ತಿರುಗೇಟು ನೀಡಿದ್ದಾರೆ.
ಲಾಕ್ಡೌನ್ ಬಳಿಕ ತಮ್ಮ ಫಾರ್ಮ್ಹೌಸ್ನಲ್ಲಿ ನೆಲೆಸಿರುವ ಸಲ್ಮಾನ್ ಖಾನ್ ಕೃಷಿ ಚಟುವಟಿಕೆಯಲ್ಲಿ ಸಕ್ರಿಯರಾಗಿದ್ದಾರೆ. ಕೆಲ ದಿನಗಳ ಹಿಂದಷ್ಟೆ ಭತ್ತ ನಾಟಿ ಮಾಡುವ ಹಾಗೂ ಮೈಗೆ ಕೆಸರು ಮೆತ್ತಿಕೊಂಡಿರುವ ಫೋಟೊಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡು ರೈತರನ್ನು ಗೌರವಿಸುತ್ತೇನೆ ಎಂದು ಬರೆದುಕೊಂಡಿದ್ದರು. ಇದಕ್ಕೆ ಕೆಲವರು ಕೊಂಕು ತೆಗೆದು ಇದುಬೂಟಾಟಿಕೆ, ನಾಟಕ ಎಂದು ಟೀಕೆ ಮಾಡುವ ಮೂಲಕ ಟ್ರೋಲ್ ಮಾಡಿದ್ದರು.
ಟ್ರೋಲ್ ಕಮೆಂಟ್ಗಳ ಬಗ್ಗೆ ತಲೆಕೆಡಿಸಿಕೊಳ್ಳದ ಸಲ್ಲು ಬಾಯ್ ಕೃಷಿ ಚಟುವಟಿಕೆಯಲ್ಲಿ ಮುಂದುವರೆದಿದ್ದರು. ಇದೀಗ ಟೀಕೆ ಮಾಡುವವರ ಬಾಯಿ ಮುಚ್ಚಿಸುವ ಸಲುವಾಗಿ ಭತ್ತದ ಗದ್ದೆಯಲ್ಲಿ ಕೆಲಸ ಮಾಡುವ ವಿಡಿಯೊವನ್ನು ಹಂಚಿಕೊಂಡಿದ್ದಾರೆ. ಸಲ್ಮಾನ್ ಅವರ ಈ ಕೆಲಸಕ್ಕೆ ಅಭಿಮಾನಿಗಳು ಮಾತ್ರವಲ್ಲದೆ ಕ್ರೀಡೆ, ರಾಜಕೀಯ, ಸಿನಿಮಾ ರಂಗದ ಗಣ್ಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಕೆಸರು ಗದ್ದೆಯಲ್ಲಿ ಸಲ್ಮಾನ್ ಖಾನ್ ಟ್ರ್ಯಾಕ್ಟರ್ ಮೂಲಕ ಉಳುವೆ ಮಾಡುವುದು, ಕೆಸರಿನಲ್ಲಿ ಓಡಾಡುವುದು, ಟ್ರ್ಯಾಕ್ಟರ್ ಚಕ್ರಗಳು ಕೆಸರಿನಲ್ಲಿ ಸಿಲುಕಿಕೊಂಡರೆ ಹಿಂದಿನಿಂದ ಟ್ರ್ಯಾಕ್ಟರ್ ತಳ್ಳುವುದು, ಕೃಷಿ ಕಾರ್ಮಿಕರ ಜೊತೆಯಲ್ಲಿ ಭತ್ತದ ಸಸಿ ನಾಟಿ ಮಾಡುವ ಕೆಲಸವನ್ನುಮಾಡಿದ್ದಾರೆ.
ಸಾಮಾನ್ಯವಾಗಿ ರೈತರು ಗದ್ದೆಯಲ್ಲಿ ಮಾಡುವಂತಹ ಎಲ್ಲ ಕೆಲಸಗಳನ್ನು ಕಲಿತಿರುವ ಸಲ್ಮಾನ್ ಖಾನ್ ಗದ್ದೆಯನ್ನು ಉಳುವೆ ಮಾಡಿ ಭತ್ತದ ಸಸಿಗಳನ್ನು ನಾಟಿ ಮಾಡಿ ಬೆವರು ಹರಿಸಿದ್ದಾರೆ. ಈ ಮೂಲಕ ಟ್ರೋಲ್ ಮಾಡುವವರ ಬಾಯಿ ಮುಚ್ಚಿಸಿದ್ದಾರೆ.
ರೈತನಾಗಿ ಕೆಲಸ ಮಾಡುವ ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ಸಲ್ಲೂಮಿಯಾ ಬ್ಯಾಡ್ ಬಾಯ್ ಅಲ್ಲ ಗುಡ್ ಬಾಯ್ ಎಂದು ನೆಟ್ಟಿಗರು ಕಮೆಂಟ್ ಮಾಡುತ್ತಿದ್ದಾರೆ.