ಕೊರೊನಾ ಹಿನ್ನೆಲೆಯಲ್ಲಿ ಕಳೆದ ಆರು ತಿಂಗಳಿಂದ ಸಿನಿಮಾ ಕ್ಷೇತ್ರಕ್ಕೆ ಮಾತ್ರವಲ್ಲ, ಫ್ಯಾಷನ್ ಲೋಕಕ್ಕೂ ಅಷ್ಟೇ ಪ್ರಮಾಣದ ಸಮಸ್ಯೆ ಎದುರಾಗಿತ್ತು. ಇದೀಗ ಮತ್ತೆ ಎಲ್ಲವೂ ಹಳೆಯ ಲಯಕ್ಕೆ ಮರಳುತ್ತಿದೆ. ನಿಂತಿದ್ದ ಕೆಲಸಗಳು ನಿಧಾನಗತಿಯಲ್ಲಿ ಆರಂಭವಾಗಿವೆ. ಇದಕ್ಕೆ ಪುಷ್ಟಿ ನೀಡುವಂತೆ ಸೆಲೆಬ್ರಿಟಿ ಡಿಸೈನರ್ ಭಾರ್ಗವಿ ವಿಖ್ಯಾತಿ ಅವರು ದಸರಾ ಪ್ರಯುಕ್ತ ನವತಾರ್ ಹೆಸರಿನ ಕಲರ್ಫುಲ್ ಕಾನ್ಸೆಪ್ಟ್ ಒಂದನ್ನು ಹೊರತಂದಿದ್ದಾರೆ.
ಏನಿದು ನವತಾರ್ ಕಾನ್ಸೆಪ್ಟ್?
ದಸರಾ ಹಬ್ಬವನ್ನು ಒಂಬತ್ತು ದಿನಗಳ ಕಾಲ ಆಚರಿಸುವುದು ಗೊತ್ತೇ ಇದೆ. ಈ ಅವಧಿಯಲ್ಲಿ ಒಂಬತ್ತು ದೇವಿಯರ ಪೂಜಾಚರಣೆಯೂ ನೆರವೇರುತ್ತದೆ. ಇದೀಗ ಆ ಪರಿಕಲ್ಪನೆಯಡಿ ನವತಾರ್ ಎನ್ನುವ ಫೋಟೋಶೂಟ್ ಮತ್ತು ವಸ್ತ್ರ ವಿನ್ಯಾಸ ಮಾಡಿದ್ದಾರೆ ಭಾರ್ಗವಿ ವಿಖ್ಯಾತಿ.
9 ಮಂದಿ ಸಿನಿಮಾ ಸೆಲೆಬ್ರಿಟಿಗಳನ್ನು ಆರಿಸಿಕೊಂಡು ಅವರಿಗೆ ಬಗೆಬಗೆಯ ರೀತಿಯ ಕಾಸ್ಟ್ಯೂಮ್ ವಿನ್ಯಾಸ ಮಾಡಿ, ಫೋಟೋಶೂಟ್ ಮಾಡಿಸಿದ್ದಾರೆ. ‘ಇಲ್ಲಿ ದೇವಿಯರ ಅವತಾರ ಸೃಷ್ಟಿಸಿಲ್ಲ. ಬದಲಿಗೆ ಅವರನ್ನೇ ಹೋಲುವ ಮತ್ತು ಅದಕ್ಕೆ ಒಂದಿಷ್ಟು ಮಾಡರ್ನ್ ಟಚ್ ಕೊಟ್ಟು ಫೋಟೋಶೂಟ್ ಮಾಡಲಾಗಿದೆ’ ಎನ್ನುವುದು ಭಾರ್ಗವಿ ವಿಖ್ಯಾತಿ ಅವರ ಅನಿಸಿಕೆ.
ತಾರೆಯರ ಮಿಂಚು
ಸೆಲೆಬ್ರಿಟಿಗಳಿಗೆ ವಸ್ತ್ರ ವಿನ್ಯಾಸ ಮಾಡುವ ಭಾರ್ಗವಿ ಅವರು ಈ ಬಾರಿ ವಿನ್ಯಾಸಗೊಳಿಸಿರುವ ವರ್ಣಮಯ ಕಾಸ್ಟ್ಯೂಮ್ಗಳಲ್ಲಿ ಒಂಬತ್ತು ತಾರೆಯರು ಮಿಂಚುವ ನೋಟದಲ್ಲಿ ಕಾಣಿಸಿಕೊಂಡಿದ್ದಾರೆ.
‘ಕಿಸ್’ ಮತ್ತು ‘ಭರಾಟೆ’ ಖ್ಯಾತಿಯ ನಟಿ ಶ್ರೀಲೀಲಾ ಅಪ್ಪಟ ಮರಾಠಿ ಯುವರಾಣಿಯಾಗಿದ್ದಾರೆ. ಹಣೆಯಲ್ಲಿ ಅರ್ಧ ಚಂದ್ರನನ್ನು ಧರಿಸಿ,ಕೈಯಲ್ಲಿ ಕತ್ತಿ ಹಿಡಿದು, ಕುದುರೆ ಏರಿ ಪೋಸ್ ನೀಡಿದ್ದಾರೆ.
ಅದೇ ರೀತಿ ‘ಬಿಗ್ ಬಾಸ್’ ಖ್ಯಾತಿಯ ದೀಪಿಕಾ ದಾಸ್ ಕೈಯಲ್ಲಿ ಕತ್ತಿ ಹಿಡಿದು, ಲೆಹೆಂಗಾ ತೊಟ್ಟು ಗಂಭೀರ ಮುಖಭಾವ ನೀಡಿ ಉತ್ತರ ಭಾರತದ ರಾಣಿಯ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ.
ಇನ್ನು ನಟಿ ನಿಶ್ವಿಕಾ ನಾಯ್ಡು ದಾಂಡಿಯಾ ನೃತ್ಯ ಮಾದರಿಯಲ್ಲಿ ಡಾನ್ಸ್ ಶೈಲಿಯ ಘರ್ಬಾ ಥರಹದ ಕಾಸ್ಟೂಮ್ನಲ್ಲಿ ಕಂಗೊಳಿಸಿದ್ದಾರೆ. ಹರ್ಷಿಕಾ ಪೂಣಚ್ಚ ಪಕ್ಕಾ ದಕ್ಷಿಣ ಭಾರತದ ಮಹಾರಾಣಿಯ ಅವತಾರ ಎತ್ತಿದ್ದಾರೆ. ಕೃಷಿ ತಾಪಂಡ ಅವರು ಹಳದಿ ಮತ್ತು ಕೇಸರಿ ರಂಗಿನ ವಸ್ತ್ರ ಧರಿಸಿ, ಬಿಂದಿಗೆ ಹಿಡಿದು, ನೀರಿನ ಕೊಳದ ಪಕ್ಕ ಕುಳಿತಿದ್ದಾರೆ. ನಟಿ ಕಾವ್ಯಾ ಶೆಟ್ಟಿ ವೀಣೆ ಹಿಡಿದು ಸರಸ್ವತಿಯ ರೂಪದಲ್ಲಿ ಕಾಣಿಸಿಕೊಂಡಿದ್ದಾರೆ.
ಕಾವ್ಯಾ ಶಾಸ್ತ್ರಿ ಕಮಲದ ಹೂವಿನ ಮೇಲೆ ಕುಳಿತ ಭಂಗಿಯಲ್ಲಿ ಕಂಡರೆ, ಮಲೆನಾಡ ಹುಡುಗಿಯ ಸೊಗಡಿನಲ್ಲಿ ಸಂಪದ ಮಿಂಚಿದ್ದಾರೆ. ಇಂಡೋ ವೆಸ್ಟರ್ನ್ ಶೈಲಿ ಉಡುಗೆಯಲ್ಲಿ ಶಾಲಿನಿ ಗೌಡ ಕಾಣಿಸಿಕೊಂಡಿದ್ದಾರೆ. ಈ ಒಂಬತ್ತು ನಟಿಯರ ಜೊತೆಗೆ ಇಡೀ ಡಿಸೈನಿಂಗ್ ತಂಡವೂ ತಮ್ಮದೇ ಆದ ವಿನ್ಯಾಸವೊಂದರಲ್ಲಿ ಮಿಂಚಿದೆ.
ಎರಡೂವರೆ ತಿಂಗಳ ತಯಾರಿ
ಲಾಕ್ಡೌನ್ ಕೊಂಚ ಸಡಿಲಿಕೆ ಆದಾಗಿನಿಂದ ಫ್ಯಾಷನ್ ಡಿಸೈನಿಂಗ್ ಕೆಲಸವನ್ನು ಮರಳಿ ಹಳಿಗೆ ಕರೆತರುವ ಯತ್ನಕ್ಕೆ ಕೈ ಹಾಕಿರುವ ಭಾರ್ಗವಿ, ನವರಾತ್ರಿಗೆ ಏನಾದರೂ ವಿಶೇಷತೆ ನೀಡಬೇಕೆಂದು ನವತಾರ್ ಪರಿಕಲ್ಪನೆ ಆಯ್ದುಕೊಂಡಿದ್ದಾರೆ. ಇದಕ್ಕಾಗಿ ಚಿತ್ರತಾರೆಯರನ್ನು ಒಪ್ಪಿಸಿ, ಅವರಿಗೆ ಒಪ್ಪುವ ರೀತಿಯಲ್ಲಿ ವಿವಿಧ ಬಗೆಯ ವಸ್ತ್ರಗಳನ್ನು ವಿನ್ಯಾಸ ಮಾಡಿ, ಫೋಟೋಶೂಟ್ ಮಾಡಿಸಿದ್ದಾರೆ. ಬೆಂಗಳೂರು ಮೂವೀಸ್ ಮತ್ತು ಪೀಕಾಕ್ ಗ್ರೋ ರೆಸಾರ್ಟ್ನಲ್ಲಿ ಫೋಟೋಶೂಟ್ ನಡೆಸಲಾಗಿದೆ. ಈ ಪ್ರಕ್ರಿಯೆಗೆ ಅವರು ಬರೋಬರಿ ಎರಡೂವರೆ ತಿಂಗಳು ಸಮಯ ವಿನಿಯೋಗಿಸಿದ್ದಾರೆ.
ಎಲ್ಲ ಒಂಬತ್ತು ಸೆಲೆಬ್ರಿಟಿಗಳ ಕಾಸ್ಟ್ಯೂಮ್ ವಿನ್ಯಾಸ ಭಾರ್ಗವಿ ವಿಖ್ಯಾತಿ, ಮೇಕಪ್ ನಿಖಿತಾ ಆನಂದ್, ಕ್ಯಾಮೆರಾ ರೇನ್ಬೋ ಫೋಟೋಗ್ರಫಿಯ ಕಿರಣ್ ಮತ್ತು ಹೂವೇಶ್ ನಿರ್ವಹಿಸಿದ್ದಾರೆ. ಇಡೀ ಕಾನ್ಸೆಪ್ಟ್ನಲ್ಲಿ ಭಾರ್ಗವಿ ಅವರಿಗೆ ಶ್ವೇತಾ ಇಂಚರ್ ಸಹಾಯಕರಾಗಿ ಕೆಲಸ ಮಾಡಿದ್ದಾರೆ. ಅಭೂಷಣ್ ಮತ್ತು ಆಮ್ರಪಾಲಿ ಜುವೆಲ್ಸ್ ಆಭರಣ ಡಿಸೈನ್ ಉಸ್ತುವಾರಿ ವಹಿಸಿತ್ತು.
ಭಾರ್ಗವಿ ವಿಖ್ಯಾತಿ ಹಿನ್ನೆಲೆ
ಕಳೆದ ನಾಲ್ಕು ವರ್ಷಗಳಿಂದ ಫ್ಯಾಷನ್ ಡಿಸೈನಿಂಗ್ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಭಾರ್ಗವಿ, ಶ್ರೀಲೀಲಾ, ಆರ್ಯನ್ ಸಂತೋಷ್, ಹರ್ಷಿಕಾ ಪೂಣಚ್ಚ ಸೇರಿ ಕೆಲ ಸೆಲೆಬ್ರಿಟಿಗಳ ಪರ್ಸನಲ್ ಸ್ಟೈಲಿಸ್ಟ್ ಆಗಿದ್ದಾರೆ. ಬಿಡುಗಡೆ ಹಂತದಲ್ಲಿರುವ ‘ಡಿಯರ್ ಸತ್ಯ’ ಚಿತ್ರಕ್ಕೂ ಮೊದಲ ಬಾರಿ ವಸ್ತ್ರ ವಿನ್ಯಾಸಕಿಯಾಗಿ ಕೆಲಸ ಮಾಡಿದ್ದಾರೆ ಭಾರ್ಗವಿ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.