ಉಪ್ಪು ತಿಂದವರು ನೀರು ಕುಡಿಯಲೇಬೇಕು: ವಕೀಲ ಪ್ರಶಾಂತ್ ಸಂಬರಗಿ ವ್ಯಂಗ್ಯ

ಬೆಂಗಳೂರು: ‘ಉಪ್ಪು ತಿಂದವವರು ನೀರು ಕುಡಿಯಲೇಬೇಕು. ನಮ್ಮ ಕರ್ಮ ಯಾವಾಗಲೂ ನಮ್ಮ ಬೆನ್ನೇರಿ ಬರುತ್ತದೆ’ ಎಂದು ವಕೀಲ ಪ್ರಶಾಂತ್ ಸಂಬರಗಿ ಹೇಳಿದ್ದಾರೆ.
ಸ್ಯಾಂಡಲ್ವುಡ್ ಡ್ರಗ್ಸ್ ಮಾಫಿಯಾ ಸಂಬಂಧ ಬಹುಭಾಷಾ ನಟಿ ಸಂಜನಾ ಗಲ್ರಾನಿ ಅವರ ಮನೆ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿ, ಅವರನ್ನು ವಿಚಾರಣೆಗೆ ಒಳಪಡಿಸಿರುವುದಕ್ಕೆ ಸಂಬರಗಿ ಈ ರೀತಿ ಪ್ರತಿಕ್ರಿಯಿಸಿದ್ದಾರೆ.
‘ಈ ಪ್ರಕರಣದಲ್ಲಿ ಕನ್ನಡ ಚಿತ್ರರಂಗದ ಇನ್ನಷ್ಟು ಘಟಾನುಘಟಿ ನಟ–ನಟಿಯರು ಸಿಕ್ಕಿ ಬೀಳಲಿದ್ದಾರೆ. ಸ್ಯಾಂಡಲ್ವುಡ್ನಲ್ಲಿ ಅಲ್ಲೋಲಕಲ್ಲೋಲವೇ ಆದರೂ ಅಚ್ಚರಿಪಡುವಂತಿಲ್ಲ. ಡ್ರಗ್ಸ್ ಮಾರಾಟದಿಂದಲೇ ಸಂಪಾದಿಸಿದ ಹಣದಿಂದ ನಿರ್ಮಾಣವಾಗಿರುವ ಸಿನಿಮಾವೊಂದರ ಮುಖವಾಡವೂ ಮುಂದಿನ ದಿನಗಳಲ್ಲಿ ಕಳಚಿ ಬೀಳಲಿದೆ’ ಎಂದು ಸಂಬರಗಿ ಹೊಸ ಬಾಂಬ್ ಸಿಡಿಸಿದ್ದಾರೆ.
‘ಡ್ರಗ್ ಮಾಫಿಯಾ ಮಟ್ಟಹಾಕಲು ದೇಶದ ತನಿಖಾ ಸಂಸ್ಥೆಗಳು ಸಾರಿರುವ ಯುದ್ಧದಲ್ಲಿ ಮಾಹಿತಿ ಒದಗಿಸುವ ಮೂಲಕ ನಾನು ಒಬ್ಬ ಯೋಧನಾಗಿದ್ದೇನೆ. ಆರೋಗ್ಯವಂತ ಸಮಾಜ ನಿರ್ಮಾಣವಾಗಬೇಕಾದರೆ, ಜನರು ಸ್ವಯಂಪ್ರೇರಿತವಾಗಿ ಡ್ರಗ್ಸ್ ಮಾಫಿಯಾ ವಿರುದ್ಧ ಮಾಹಿತಿಗಳನ್ನು ತನಿಖಾ ಸಂಸ್ಥೆಗಳಿಗೆ ಒದಗಿಸಬೇಕು’ ಎಂದು ಅವರು ಮನವಿ ಮಾಡಿದ್ದಾರೆ.
‘ಚಿತ್ರರಂಗದ ನಟ–ನಟಿಯರು, ಸೆಲೆಬ್ರಿಟಿಗಳ ಫೋಟೊ ಶೂಟ್ ಮತ್ತು ವಿಡಿಯೊ ಶೂಟ್ ಮಾಡಿಸುವ ಕೆಲಸ ಮಾಡುವಾಗ ಕೆಲವರ ಜತೆ ಒಂದಿಷ್ಟು ಸಮಯ ಓಡಾಡಿದೆ. ಆಗ ಇಲ್ಲಿ ಏನೋ ಕಾನೂನು ಬಾಹಿರ ಮತ್ತು ಸಮಾಜ ಬಾಹಿರ ಕೃತ್ಯ ನಡೆಯುತ್ತಿರುವ ವಾಸನೆ ಮೂಗಿಗೆ ಬಡಿಯಿತು. ಈ ಮಾಫಿಯಾ ವಿರುದ್ಧ ಆಗಲೇ ಸೈಲೆಂಟ್ ವಾರ್ ಮಾಡಬೇಕೆಂಬ ನಿರ್ಧಾರ ಮಾಡಿದ್ದೆ’ ಎಂದು ಅವರು ತಿಳಿಸಿದ್ದಾರೆ.
‘ಹಂದಿ, ನಾಯಿ ಎಂದು ನನ್ನನ್ನು ನಿಂದಿಸಿರುವುದಕ್ಕೆ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ. ಆದರೆ, ನನಗೆ ಚಪ್ಪಲಿಯಿಂದ ಹೊಡೆಯುವುದಾಗಿ ಅವಹೇಳನ ಮಾಡಿರುವುದಕ್ಕೆ ಸಂಜನಾ ಗರ್ಲಾನಿ ವಿರುದ್ಧ ₹10 ಕೋಟಿ ಮೊತ್ತದ ಮಾನನಷ್ಟ ಮೊಕದ್ದಮೆ ಮತ್ತು ಕ್ರಿಮಿನಲ್ ಮೊಕದ್ದಮೆಯನ್ನು ಇನ್ನು ನಾಲ್ಕು ದಿನಗಳೊಳಗೆ ದಾಖಲಿಸುವೆ’ ಎಂದಿದ್ದಾರೆ.
ಇದನ್ನೂ ಓದಿ: ಸಂಬರಗಿಯನ್ನು ಸುಮ್ಮನೇ ಬಿಡಲ್ಲ: ಸಂಜನಾ ಆಕ್ರೋಶ
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.